– ಜೆಡಿಎಸ್, ಪ್ರಜ್ವಲ್ ಹೆಸರು ಹೇಳದ ಮಾಜಿ ಶಾಸಕ ಪ್ರೀತಂಗೌಡ
ಪ್ರತಿನಿಧಿ ವರದಿ ಮೈಸೂರು
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಯೊಂದಿಗೆ ಲೋಕಸಭಾ ಚುನಾವಣೆ ಎದುರಿಸಲು ಉಭಯ ಪಕ್ಷದ ನಾಯಕರು ಸಜ್ಜಾಗಿದ್ದಾರೆ. ಆದರೆ ಜೆಡಿಎಸ್ ಭದ್ರಕೋಟೆ ಎನ್ನಲಾಗಿರುವ ಹಾಸನದಲ್ಲಿ ಮೈತ್ರಿ ಬಗೆಗಿನ ಅಸಮಾಧಾನ ಮುಂದುವರೆದಿದೆ.
ಲೋಕಸಭಾ ಚುನಾವಣೆಗೆ ಎರಡು ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಒಂದಾಗಿದ್ದರೂ, ದೊಡ್ಡಗೌಡರ ಕುಟುಂಬವನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವ ಮಾಜಿ ಶಾಸಕ ಪ್ರೀತಂಗೌಡ ಮಾತ್ರ ಚುನಾವಣೆ ಸಮೀಪಿಸುತ್ತಿದ್ದರೂ ದೋಸ್ತಿಗೆ ಕೈ ಜೋಡಿಸುತ್ತಿಲ್ಲ. ಪ್ರೀತಂ ಗೌಡ ಅವರ ಈ ನಡೆ ಬಿಜೆಪಿಯ ರಾಜ್ಯ ಹಾಗೂ ಕೇಂದ್ರದ ನಾಯಕರಲ್ಲಿ ಆತಂಕ ಮೂಡಿಸಿದ್ದು, ಹೀಗಾಗಿ ಪ್ರಜ್ವಲ್ ಹಾಗೂ ಪ್ರೀತಂಗೌಡ ಅವರನ್ನು ಒಂದುಗೂಡಿಸಲು ಕಸರತ್ತು ನಡೆಸುವಂತಾಗಿದೆ.
ಪಕ್ಷ ಹೇಳಿದಂತೆ ಮಾಡುವೆ: ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೀತಂಗೌಡ, ಪ್ರಜ್ವಲ್ ರೇವಣ್ಣ ಮತ್ತು ಜೆಡಿಎಸ್ ಹೆಸರು ಹೇಳದೆಯೇ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಇದು ಪಂಚಾಯಿತಿ ಚುನಾವಣೆಯಲ್ಲ, ದೇಶದ ಚುನಾವಣೆ. ಆದ್ದರಿಂದ ಪಕ್ಷ ಸೂಚನೆ ಕೊಟ್ಟಂತೆ ಕೆಲಸ ಮಾಡುತ್ತೇನೆ. ನನ್ನನ್ನು ಕಾಶ್ಮೀರಕ್ಕೆ ಹೋಗು ಅಂದರೆ ಹೋಗುತ್ತೇನೆ. ಕನ್ಯಾಕುಮಾರಿಗೆ ಹೋಗು ಅಂದರೂ ಹೋಗುತ್ತೇನೆ. ಪಕ್ಷ ಹೇಳಿದ ಕಡೆ ಹೋಗುತ್ತೇನೆ. ನಾನು ಪಕ್ಷದ ಕಾರ್ಯದರ್ಶಿ. ಅದಕ್ಕಾಗಿ ಮೈಸೂರಿಗೆ ಬಂದಿದ್ದೇನೆ ಎಂದರು.
ಮೋದಿ ನೋಡಿ ಮತ ಹಾಕ್ತಾರೆ: ಸದಾನಂದ ಗೌಡರು ಹಾಸಕ್ಕೆ ಹೋಗಿದ್ದರು. ಯಾಕೆ ಹಾಸನಕ್ಕೆ ಹೋಗಿದ್ರಿ ಅಂತ ಕೇಳೋಕೆ ಆಗುತ್ತಾ. ನಾನು ಪಕ್ಷ ಹೇಳಿದ ಕಡೆ ಹೋಗುತ್ತೇನೆ. ಪ್ರಜ್ವಲ್ ರೇವಣ್ಣ ಭೇಟಿ ವಿಚಾರ ಗೊತ್ತಿಲ್ಲ, ನನಗೆ ಮಾಹಿತಿ ಇಲ್ಲ. ಎನ್ಡಿಎ ಅಭ್ಯರ್ಥಿ ಗೆಲ್ಲಬೇಕು. ಪ್ರೀತಮ್ ಗೌಡ ಮುಖ ನೋಡಿ ಓಟು ಹಾಕುವುಲ್ಲ. ನಮ್ಮ ಮನೆಯಲ್ಲೂ ಮೋದಿ ಮುಖ ನೋಡೇ ಮತ ಹಾಕುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಜ್ವಲ್ ಹೆಸರೇಳದ ಪ್ರೀತಂ: ಪ್ರಜ್ವಲ್ ರೇವಣ್ಣ ಮತ್ತು ಜೆಡಿಎಸ್ ಹೆಸರು ಹೇಳದ ಪ್ರೀತಮ್ ಗೌಡ ತಮ್ಮ ಮಾತಿನುದ್ದಕ್ಕೂ ಎನ್ಡಿಎ ಅಭ್ಯರ್ಥಿ ಗೆಲ್ಲುತ್ತಾರೆ ಅಂತಷ್ಟೆ ಹೇಳಿದರು. ಪ್ರತಿ ಮಾತು ಮಾತಿಗೂ ಎನ್ಡಿಎ ಬಿಜೆಪಿ ಅಂತಷ್ಟೆ ಹೇಳಿದ ಪ್ರೀತಮ್, ಹಾಸನದಲ್ಲಿ ಪ್ರಚಾರಕ್ಕೆ ಹೋಗುವ ವಿಚಾರದಲ್ಲೂ ಅಡ್ಡಗೋಡೆ ಮೇಲೆ ದೀಪವಿಟ್ಟರಲ್ಲದೆ, ಕಾಶ್ಮೀರಕ್ಕೆ ಹೋಗು ಅಂದರು ಹೋಗುತ್ತೇನೆ ಎಂದರು.