ಮಂಡ್ಯ: ನೀರಿಲ್ಲದೆ ಬೆಳೆ ಕಳೆದುಕೊಂಡಿರುವ ರೈತರಿಗೆ ಎಕರೆಗೆ ಕನಿಷ್ಟ ₹ ೨೫ ಸಾವಿರ ಬೆಳೆ ಪರಿಹಾರ ನೀಡುವಂತೆ ಕರ್ನಾಟಕ ಪ್ರಾಂತರೈತ ಸಂಘದ ಮಂಡ್ಯ ಜಿಲ್ಲಾ ಘಟಕ ಆಗ್ರಹಿಸಿದೆ.
ಎಂದು ಕಂಡರಿಯದ ಬರ ತಲೆ ದೋರಿದ್ದು ಬರದ ತೀವ್ರತೆಗೆ ಜನತೆ ತತ್ತರಿಸಿದೆ. ಕೇಂದ್ರ ಸರ್ಕಾರ ಯಾವುದೇ ಪರಿಹಾರ ನೀಡದೆ ನಿರ್ಲಕ್ಷ ವಹಿಸಿದೆ. ರಾಜ್ಯದ ೨೨೩ ತಾಲೋಕುಗಳು ಬರಪೀಡಿತವಾಗಿವೆ. ಅವುಗಳಲ್ಲಿ ೧೯೬ ತಾಲೂಕುಗಳು ತೀವ್ರ ಬರಪೀಡಿತವಾಗಿವೆ. ಮೋದಿ ನೇತೃತ್ವದ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಎನ್ ಡಿ ಎಫ್ ಆರ್ ನಿಯಮದಡಿ ಅಗತ್ಯ ಪರಿಹಾರ ನೀಡದೆ ನಮಗೂ ಇದಕ್ಕು ಸಂಬಂದವಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಅತ್ಯಂತ ಹೆಚ್ಚು ತೆರಿಗೆ ನೀಡುವ ಎರಡನೇ ರಾಜ್ಯ ಕರ್ನಾಟಕವಾಗಿದೆ. ರಾಜ್ಯ ಸರಕಾರ ೧೮.೧೭೭ಕೋಟಿ ಬರಪರಿಹಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಎಕರೆಗೆ ಕನಿಷ್ಠ ₹೨೫ ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿ ಯೋಜನೆಯು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ನಿಗದಿಪಡಿಸಿದ ದಿನಗಳಷ್ಟು ಉದ್ಯೋಗ ದೊರಕುತ್ತಿಲ್ಲ. ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಜನ ಜಾನುವಾರು ರಕ್ಷಿಸಬೇಕಿದೆ. ಮೈಕ್ರೋ ಫೈನಾನ್ಸ್ ಸಾಲಗಳ ಕಿರುಕುಳ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ನೀಡಿರುವ ಪರಿಹಾರ ಏನೇನು ಸಾಲದಾಗಿದೆ. ಗ್ಯಾರಂಟಿ ಯೋಜನೆಗಳಿಂದ ಜನರು ಸ್ವಲ್ಪ ಉಸಿರಾಡುವಂತಾಗಿದೆ ಎಂದರು.
ಗೋಷ್ಠಿಯಲ್ಲಿ ಎನ್ ಲಿಂಗರಾಜ ಮೂರ್ತಿ, ಎಸ್ ವಿಶ್ವನಾಥ್ ಸಿದ್ದೇಗೌಡ, ಪ್ರಮೀಳಾ ಗುರುಸ್ವಾಮಿ, ಸತೀಶ್ ರಾಮಣ್ಣ, ಮಹದೇವು ಇದ್ದರು.