ಪ್ರೋ.ಪಿ.ವಿ.ನಂಜರಾಜ ಅರಸು ವಿಷಾಧ
ಪ್ರತಿನಿಧಿ ವರದಿ ಕೊಳ್ಳೇಗಾಲ
ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಜಯಂತಿ ಆಚರಣೆ ಉದ್ದೇಶ ಸಾಕಷ್ಟು ಜನರಿಗೆ ಇನ್ನೂ ಮುಟ್ಟಿಲ್ಲ ಎಂದು ಇತಿಹಾಸ ತಜ್ಞ ಪ್ರೋ.ಪಿ.ವಿ.ನಂಜರಾಜ ಅರಸು ವಿಷಾಧಿಸಿದರು.
ತಾಲೂಕು ಆಡಳಿತ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯವತಿಯಿಂದ ಮಂಗಳವಾರ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಪ್ರತಿ ವರ್ಷ ಅರಸು ಅವರ ಜಯಂತಿ ಕಾರ್ಯಕ್ರಮ ನಡೆಸುತ್ತದೆ. ಆದರೆ, ಅವರ ಜಯಂತಿ ಆಚರಣೆಯ ಉದ್ದೇಶ ಸಾಕಷ್ಟು ಜನರಿಗೆ ಇನ್ನೂ ಮುಟ್ಟಿಲ್ಲ ಎಂದು ವಿಷಾಧಿಸಿ, ಅಂಬೇಡ್ಕರ್ ಅವರು ಎಲ್ಲರಿಗೂ ಸಾಮಾಜಿಕ ಮೀಸಲಾತಿ ನೀಡಿದರೆ, ಡಿ.ದೇವರಾಜೇ ಅರಸು ಅವರು ಹಿಂದುದವರಿಗೆ ಶಕ್ತಿ ತುಂಬಿದರು ಹಾಗೂ ನಾಡಿಗೆ ಅವರು ನೀಡಿದ ಕೊಡುಗೆ ಅಪಾರ. ಆ ಬಗ್ಗೆ ಯುವ ವಿದ್ಯಾರ್ಥಿಗಳಿಗೆ ಸರ್ಕಾರ ಪರಿಪೂರ್ಣವಾಗಿ ಮುಟ್ಟಿಸಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ರೈತರ ಶೋಷಣೆ ತಪ್ಪಿಸುವ ಕೆಲಸವಾಗಿದ್ದು, ಡಿ.ದೇವರಾಜ ಅರಸು ಅವರ ಕಾಲದಲ್ಲಿ ಎಂದರೆ ತಪ್ಪಾಗಲಾರದು. ಮನುಷ್ಯರಲ್ಲಿದ್ದ ಮೇಲು ಕೀಳು ಎಂಬ ತಾರತಮ್ಯ ಹೋಗಲಾಡಿಸಲು ಅರಸು ಶ್ರಮಿಸಿದರು. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿ ಮಾಡಿದ ಅರಸು ಹೆಸರು ಎಂದೆಂದಿಗೂ ಅಮರ ಎಂದು ಬಣ್ಣಿಸಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಬಡವರು ಹಾಗೂ ನ್ಯಾಯದ ಪರವಾಗಿ ಇದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಗಳ ಪರವಾಗಿ ಹೆಚ್ಚು ಶ್ರಮಿಸಿದವರು. ಸಮಾಜವಾದಿಯಾಗಿ ನಾಡಿನಲ್ಲಿ ಗುರುತಿಸಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತು ಅನೇಕರನ್ನು ತನ್ನೊಂದಿಗೆ ಕೈ ಹಿಡಿದು ಬೆಳೆಸಿದವರು. ಇಂದಿರಾ ಗಾಂಧಿ ಅವರಿಗೆ ರಾಜ್ಯದಲ್ಲಿ ರಾಜಕೀಯ ಪುನರ್ ಜನ್ಮ ನೀಡಲು ಶ್ರಮಿಸಿದವರು. ಜೀತ ಪದ್ದತಿ ಹಾಗೂ ಮಲ ಹೊರುವ ಪದ್ದತಿಯನ್ನು ಹೋಗಲಾಡಿಸಲು ಕಾನೂನು ಜಾರಿ ಮಾಡಿದರು. ಉಳುವ ರೈತನನ್ನು ಭೂ ಒಡೆಯನಾಗಿ ಮಾಡಿದರು. ಸ್ವಾವಲಂಬಿ ಜೀವನಕ್ಕೆ ಅವಕಾಶ ಕಲ್ಪಿಸಿದರು. ಯಾವುದೇ ಜನರು ಶಿಕ್ಷಣ ಮತ್ತು ಉದ್ಯೋಗ ವಂಚಿತರಾಗಬಾರದು ಎಂದು ಭಾವಿಸಿದ್ದವರು ಎಂದು ತಿಳಿಸಿದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಮಾತನಾಡಿದರು. ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್ ಎಂ.ಮಂಜುಳಾ, ತಾ.ಪಂ.ಪ್ರಭಾರ ಇಒ ಎಂ.ಶಿವಪ್ರಕಾಶ, ಬಿಇಒ ಎಂ.ಮಂಜುಳಾ, ಡಿವೈಎಸ್ಪಿ ಎಂ.ಧಮೇಂದ್ರ, ನಗರಸಭಾ ಪೌರಾಯುಕ್ತ ಎ.ರಮೇಶ್, ಸಿಪಿಐ ಶಿವಮಾದಯ್ಯ ಸೇರಿದಂತೆ ಇತರರು ಇದ್ದರು.
20ಕೆಜಿಎಲ್-1 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಸಮಾರಂಭವನ್ನು ಇತಿಹಾಸ ತಜ್ಞ ಪ್ರೋ.ಪಿ.ವಿ.ನಂಜರಾಜ ಅರಸು ಅವರು ಉದ್ಘಾಟಿಸಿದರು.