ರಾಮನಗರ : ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ರಾಮನಗರದ ಕಾಂಗ್ರೆಸ್ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮತ್ತು ಯುವತಿ ನಡುವಿನ ಸಂಭಾಷಣೆಯ ವಿಡಿಯೊಗೆ ಸಂಬಂಧಿಸಿದಂತೆ ಇಲ್ಲಿನ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತೆಯೂ ಆಗಿರುವ 25 ವರ್ಷದ ಯುವತಿಯೇ ಖುದ್ದಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕ ಇಕ್ಬಾಲ್ ಹುಸೇನ್ ಮತ್ತು ನನ್ನ ನಡುವಿನ ಸಂಬಂಧ ತಂದೆ, ಮಗಳ ಸಂಬಂಧವಾಗಿದೆ. ನನ್ನ ಜೊತೆಯಾಗಲೀ ಅಥವಾ ಬೇರೆಯವರ ಜೊತೆಯಾಗಲೀ ಅವರು ಅಸಭ್ಯವಾಗಿ ವರ್ತಿಸಿಲ್ಲ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ನಾನು ಶಾಸಕರೊಂದಿಗೆ ವಾಟ್ಸ್ಆ್ಯಪ್ ವಿಡಿಯೊ ಕಾಲ್ನಲ್ಲಿ ಮಾತನಾಡಿರುವಂತೆ ಅಶ್ಲೀಲ ವಿಡಿಯೊ ಸೃಷ್ಟಿಸಿರುವ ತಮ್ಮಣ್ಣಗೌಡ ಗುಂಡ್ಕಲ್ ಎಂಬುವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಅದನ್ನು ಹಂಚಿಕೊಂಡು ನನ್ನ ಮಾನಕ್ಕೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ.
ಕಾರು ಡಿಕ್ಕಿ : ಬೈಕ್ ಸವಾರ ಸಾವು
ರಾಮನಗರ: ಬೈಕ್ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಕುಳಿತಿದ್ದ ವ್ಯಕ್ತಿ ಸಾವಿಗೀಡಾಗಿ ಹಿಂಬದಿ ಸವಾರನಿಗೆ ತೀವ್ರ ಗಾಯಗಳಾಗಿರುವ ಘಟನೆ ತಾಲೂಕಿನ ಮಾಯಗಾನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಚೌಡೇಶ್ವರಿ ನರ್ಸರಿಯ ಬಳಿ ನಡೆದಿದೆ.
ರಾಮನಗರ ನಿವಾಸಿ ನಮೀದ್ಖಾನ್(22) ಮೃತ ದುರ್ದೈವಿ. ಬೈಕ್ ಚಾಲನೆ ಮಾಡುತ್ತಿದ್ದ ತೌಸೀಪ್ ಪಾಷಾ(22) ಎಂಬುವರಿಗೆ ತೀವ್ರಗಾಯವಾಗಿದೆ. ಕೆಲಸನಿಮ್ಮಿತ್ತ ರಾಮನಗರದಿಂದ ಬೆಂಗಳೂರು ಕಡೆಗೆ ಹೋಗುತ್ತಿರುವಾಗ ಮಾಯಗಾನಹಳ್ಳಿ ಬಳಿ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ತೀವ್ರ ಗಾಯಗೊಂಡಿದ್ದ ನಮೀದ್ಖಾನ್ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾಗೆ ಕಳುಹಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಮನಗರ ಸಂಚಾರ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ಲಕ್ಷ ಸಾಲದ ಆಸೆ ತೋರಿಸಿ 84 ಸಾವಿರ ರೂ. ವಂಚನೆ
ರಾಮನಗರ: 5 ಲಕ್ಷ ರೂ. ಸಾಲ ಕೊಡುವುದಾಗಿ ನಂಬಿಸಿ ಆನ್ಲೈನ್ ಮೂಲಕ ಖಾತೆಗೆ84 ಸಾವಿರ ರೂ. ಹಣವನ್ನು ಹಾಕಿಸಿಕೊಂಡು ವಂಚನೆ ಮಾಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆದಿದೆ.
ಇಗ್ಗಲೂರು ಗ್ರಾಮದ ಅರುಣ್ಕುಮಾರ್ ಎಂಬುವರಿಗೆ ನಾವು ಇಂಡಿಯಾಬುಲ್ಸ್ ಫೈನಾನ್ಸ್ ಕಂಪನಿಯವರು ಎಂದು ಹೇಳಿಕೊಂಡು ಕರೆಮಾಡಿದ ವಂಚಕರು ನಿಮಗೆ 5 ಲಕ್ಷ ರೂ. ಸಾಲ ನೀಡುವುದಾಗಿ ಹೇಳಿದ್ದಾರೆ. ಇವರ ಮಾತನ್ನು ನಂಬಿ ಬ್ಯಾಂಕ್ ಪಾಸ್ಪುಸ್ತಕ ಹಾಗೂ ಇನ್ನಿತರ ದಾಖಲೆಗಳನ್ನು ನೀಡಿದ್ದಾರೆ. ದಾಖಲೆಗಳನ್ನು ಪಡೆದುಕೊಂಡ ಬಳಿಕ ವಿವಿಧ ಶುಲ್ಕ ಎಂದು ಹಂತ ಹಂತವಾಗಿ ವಂಚಕರು ತಮ್ಮ ಬ್ಯಾಂಕ್ ಖಾತೆಗೆ ಆನ್ಲೈನ್ ಮೂಲಕ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ರಾಮನಗರ ಸಿಇಎನ್ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾನೋ ಕಾರು ಮಗುಚಿ ಒಬ್ಬ ಸಾವು
ರಾಮನಗರ: ನಾಯಿ ಅಡ್ಡ ಬಂದಿದ್ದರಿಂದ ಟಾಟಾ ನ್ಯಾನೋ ಕಾರು ಮಗುಚಿ ಒಬ್ಬ ಸಾವಿಗೀಡಾಗಿ ಮೂರು ಮಂದಿ ಗಾಯಗೊಂಡಿರುವ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ಬಳಿ ನಡೆದಿದೆ.
ಅಬ್ದುಲ್ಪಾರೂಕ್(24) ಮೃತ ವ್ಯಕ್ತಿ. ಕೋಡಿಹಳ್ಳಿ ನಿವಾಸಿಯಾದ ಈತ ಬಾರ್ಬೆಂಡಿಂಗ್ ಕೆಲಸ ಮಾಡುತ್ತಿದ್ದು, ಮಹ್ಮದ್ ಹರ್ಬಾಜ್, ಮಹಮ್ಮದ್ ಫರ್ಜಾನ್ ಎಂಬುವರ ಜೊತೆ ನ್ಯಾನೋ ಕಾರಿನಲ್ಲಿ ಹೋಗುತ್ತಿದ್ದಾಗ ನಾಯಿ ಅಡ್ಡ ಬಂದಿದ್ದರಿಂದ ನಾಯಿಯನ್ನು ತಪ್ಪಿಸಲು ಹೋಗಿ ಆಯತಪ್ಪಿ ಕಾರು ಮಗುಚಿಬಿದ್ದಿದೆ. ಅಪಘಾತದದಲ್ಲಿ ತೀವ್ರ ಗಾಯಗೊಂಡಿದ್ದ ಅಬ್ದುಲ್ಪಾರೂಕ್ನನ್ನು ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕರ ವಿಡಿಯೋ ಹಂಚಿಕೆ ಸಂಬಂಧ ದೂರು
ರಾಮನಗರ: ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರ ಖಾಸಗಿ ವಿಡಿಯೋ ಹರಿದಾಡಿದ ಬೆನ್ನಲ್ಲೇ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಅನಿಲ್ ಜೋಗೇಂಧರ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ವಿಡಿಯೋವನ್ನು ಆನ್ಲೈನ್ನಲ್ಲಿ ಶೇರ್ ಮಾಡಿರುವವರ ವಿರುದ್ಧ ದೂರು ನೀಡಿದ್ದಾರೆ.
ಶಾಸಕರ ತೇಜೋವಧೆ ಮಾಡಲು ಕೆಲ ಮಂದಿ ನಕಲಿ ವಿಡಿಯೋವನ್ನು ಎಡಿಟ್ ಮಾಡಿ ಈರೀತಿ ಪ್ರಸಾರ ಮಾಡುತ್ತಿದ್ದು, ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ. ಸದ್ಯಕ್ಕೆ ಎನ್ಸಿಆರ್ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.