ಸಿಮ್ಸ್ ಡೀನ್ ಡಾ.ಎಚ್.ಜಿ.ಮಂಜುನಾಥ್ ಅಭಿಪ್ರಾಯ
ಪ್ರತಿನಿಧಿ ವರದಿ ಚಾಮರಾಜನಗರ
ಅನಾರೋಗ್ಯವನ್ನು ಗುಣಪಡಿಸಿ ಮರುಜೀವ ನೀಡುವ ವೈದ್ಯರು ನಿಜವಾದ ದೇವರು. ಹೀಗಾಗಿ ಅವರನ್ನು ಗೌರವಿಸುವ ಸಲುವಾಗಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ ಎಂದು ಸಿಮ್ಸ್ ಡೀನ್ ಡಾ.ಎಚ್.ಜಿ.ಮಂಜುನಾಥ್ ಹೇಳಿದರು.
ನಗರದ ಹೊರ ವಲಯದ ಯಡಪುರ ಗ್ರಾಮದ ಬಳಿ ಇರುವ ಚಾ.ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ವೈದ್ಯಕೀಯ ಕ್ಷೇತ್ರದ ಆಶಾಕಿರಣ ಡಾ.ಬಿಧನ್ ಚಂದ್ರ ರಾಯ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ವೈದ್ಯರು ಹಲವು ಬಾರಿ ರೋಗಿಗಳ ಪಾಲಿಗೆ ದೇವರ ರೂಪದಲ್ಲೇ ಕಾಣಿಸುತ್ತಾರೆ. ಅವರು ಎಲ್ಲ ರೀತಿಯ ಕಾಯಿಲೆಗಳನ್ನು ಗುಣಪಡಿಸಿ, ಜನರು ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡುತ್ತಾರೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮಹತ್ವವಾದದ್ದು. ಅವರು ರೋಗಿಗಳೊಂದಿಗೆ ಪ್ರೀತಿಯಿಂದ ಮಾತನಾಡಿ ಚಿಕಿತ್ಸೆ ನೀಡಿದರೆ ರೋಗಿಗಳ ಅರ್ಧ ಕಾಯಿಲೆ ಗುಣಮುಖವಾಗಲಿದೆ ಎಂದು ತಿಳಿಸಿದರು.
ವೈದ್ಯಕೀಯ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಮಾರುತಿ ಮಾತನಾಡಿ, ಹೆಸರಾಂತ ವೈದ್ಯ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ.ಬಿಧನ್ ಚಂದ್ರ ರಾಯ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಜು.1 ರಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಸಮಾಜಕ್ಕೆ ವೈದ್ಯಕೀಯ ವೃತ್ತಿಪರರ ಕೊಡುಗೆಗಳನ್ನು ಗುರುತಿಸಲು ಮತ್ತು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ನಮ್ಮ ಮೆಚ್ಚುಗೆಯನ್ನು ತೋರಿಸಲು ಈ ದಿನವು ಒಂದು ಅವಕಾಶವಾಗಿದೆ ಎಂದರು.
ಪ್ರಾಂಶುಪಾಲ ಗಿರೀಶ್ ಪಾಟೀಲ್ ಮಾತನಾಡಿ, ಚಾ.ನಗರ ಜಿಲ್ಲಾ ಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲವಾಗುವ ಚಿಕಿತ್ಸೆಗಳು ಸಾರ್ವಜನಿಕರಿಗೆ ಪಲುಪಿಸುವ ನಿಟ್ಟಿನಲ್ಲಿ ವೈದ್ಯರ ಶ್ರಮ ಅನನ್ಯವಾಗಿದೆ. ಇನ್ನು ಕೆಲ ರೋಗಿಗಳಿಗೆ ಯಾವ ರೋಗಕ್ಕೆ ಯಾವ ಚಿಕಿತ್ಸೆ ಪಡೆದುಕೊಳಬೇಂದು ತಿಳಿದಿಲ್ಲ. ಹಾಗಾಗಿ ವಿಚಾರಣ ಕೊಠಡಿಯಲ್ಲಿ ಮಾಹಿತಿ ಪಡೆದು ವೈದ್ಯಕೀಯ ಉಪಯೋಗಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಡಾ.ರಮೇಶ್, ಡಾ.ದೇವಕಿ, ಆಡಳಿತಾಧಿಕಾರಿ ನಂಜುಡೇಗೌಡ, ಡಾ.ಅಜಯ್, 100ಕ್ಕೂ ಹೆಚ್ಚು ಬೋದಕ ಸಿಬ್ಬಂದಿ, ಎಲ್ಲ ವಿಭಾಗದ ಮುಖ್ಯಸ್ಥರು, ಶಿಕ್ಷರ ಸಂಘದ ಪದಾಧಿಕಾರಿಗಳು, ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳು ಇದ್ದರು.
2ಸಿಎಚ್ಎನ್.4: ಚಾ.ನಗರದ ಸಿಮ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಡಾ.ಬಿಧನ್ ಚಂದ್ರ ರಾಯ್ ಅವರ ಭಾವಚಿತ್ರಕ್ಕೆ ಸಿಮ್ಸ್ ಡೀನ್ ಡಾ.ಎಚ್.ಜಿ.ಮಂಜುನಾಥ್ ಪುಷ್ಪಾರ್ಚನೆ ನೆರವೇರಿಸಿದರು.