ಪ್ರತಿನಿಧಿ ವರದಿ ತಿ. ನರಸೀಪುರ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಹೋರಾಟಗಾರರ ಕೊಡುಗೆ ಅವಿಸ್ಮರಣೀಯ. ಕಿತ್ತೂರು ರಾಣಿಚೆನ್ನಮ್ಮ, ಅಬ್ಬಕ್ಕದೇವಿ, ಸಂಗೋಳ್ಳಿ ರಾಯಣ್ಣ, ಹರ್ಡಿಕರ್, ನಿಜಲಿಂಗಪ್ಪ ಅವರು ತಮ್ಮ ಪ್ರಾಣದ ಹಂಗು ತೊರೆದು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾವಹಿಸಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಮರೀಗೌಡ ಸ್ಮಾರಕ ಭವನದಲ್ಲಿ ಹೊಮ್ಮಿಕೊಂಡಿದ್ದ ವೀರ ಸಂಗೊಳ್ಳಿ ರಾಯಣ್ಣ ಜಯಂತಿ, 78ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 1857ರಲ್ಲಿ ಆರಂಭಗೊಂಡ ಮೊದಲ ಸ್ವಾತಂತ್ರ್ಯ ಸಂಗ್ರಾಮ 90 ವರ್ಷಗಳ ನಿರಂತರ ಹೋರಾಟದಿಂದ 1947ರಲ್ಲಿ ಸ್ವಾತಂತ್ರ್ಯ ಲಭಿಸಿತು. ಇದಕ್ಕೆ ಹೋರಾಟಗಾರಲ್ಲಿದ್ದ ಉತ್ಕಟ ದೇಶಪ್ರೇಮವೇ ಕಾರಣ ಎಂದರು. ವೀರ ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದ ಉಳಿವಿಗಾಗಿ ಬ್ರಿಟೀಷರ ವಿರುದ್ಧ ಸೆಟೆದು ನಿಂತು ಹೋರಾಟ ಮಾಡಿದರು. ಅವರ ಶೌರ್ಯ ಬ್ರಿಟಿಷ್ ರನ್ನು ನಿದ್ದೆಗೆಡಿಸಿತ್ತು. ದೇಶದಿಂದ ಪರಕೀಯರನ್ನು ಓಡಿಸುವ ಮಹತ್ವಕಾಂಕ್ಷೆ ಹೊಂದಿದ್ದ ರಾಯಣ್ಣ, ಕೆಬ್ರಿಟೀಷರ ವಿರುದ್ಧ ಪರಾಕ್ರಮ ಮೆರೆದಿದ್ದರು. ದೇಶದ್ರೋಹಿಗಳಿಂದ ಅವರು ನೇಣುಗಂಬಕ್ಕೆ ಏರಬೇಕಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.
ಪುರಸಭೆ ನಿಕಟಪೂರ್ವ ಅಧ್ಯಕ್ಷ ಟಿ. ಎಂ.ನಂಜುಂಡಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಯಾವಾಗಲೂ ಚಿಕ್ಕ ಗುರಿಯನ್ನು ಇಟ್ಟುಕೊಳ್ಳಬೇಡಿ, ದೊಡ್ಡ ಗುರಿಯನ್ನು ಇಟ್ಟುಕೊಳ್ಳಬೇಕು. ಗುರಿ ದೊಡ್ಡದಿದ್ದರೆ ಏನನ್ನಾದರೂ ಸಾಧಿಸಬಹುದು. ವಿದ್ಯಾರ್ಥಿಗಳಿಗೆ ದೈಹಿಕ ಹಸಿವಿಗಿಂತ ಸಾಧನೆಯ ಹಸಿವು ಹೆಚ್ಚಿರಬೇಕು. ಆಗಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು. ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಕುಂಠಿತಗೊಳಿಸಬೇಡಿ. ನಿಮ್ಮ ಓದಿಗೆ ಆರ್ಥಿಕ ಸಮಸ್ಯೆ ಇದ್ದಲ್ಲಿ ಸಂಘದ ಗಮನಕ್ಕೆ ತಂದು ಆರ್ಥಿಕ ಸಹಾಯ ಪಡೆಯಬಹುದು. ಅವಶ್ಯವಿದ್ದಲ್ಲಿ ವೈಯುಕ್ತಿಕ ಧನ ಸಹಾಯ ಮಾಡಲು ಸಿದ್ದವಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸ್ಮರಣಾ ಫಲಕವನ್ನು ನೀಡಿ ಗೌರವಿಸಲಾಯಿತು.ದೊರೆಸ್ವಾಮೀಜಿ ಕಾರ್ಯಕ್ರಮದ ದ್ವಯ ಸಾನಿಧ್ಯವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೆಹುಂಡಿ ಮಹೇಶ್, ಕಾರ್ಯದರ್ಶಿ ಕೊತ್ತೆಗಾಲ ಬಸವರಾಜು,ಖಜಾಂಚಿ ಮಲ್ಲೇಶ, ಮಾಜಿ ಮುಖಂಡರಾದ ಮಾಜಿ ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ,ಪ್ರಸನ್ನ ಬಾಬು,ಉಕ್ಕಲಗೆರೆ ಬಸವಣ್ಣ, ವರುಣಾ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ,ಮಾಜಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್,ಮಾಜಿ ಪುರಸಭೆ ಅಧ್ಯಕ್ಷ ಎನ್.ಸೋಮು,ಅಮಾಸೆಗೌಡ, ನಿರ್ದೇಶಕರಾದ ಕುಪ್ಯ ಭಾಗ್ಯಮ್ಮ,ಮಾದೇಶ್, ಅಶ್ವಿನ್, ಗ್ರಾ.ಪಂ.ಆದ್ಯಕ್ಷರಾದ ರಾಮನಂಜಯ್ಯ,ಮಹದೇವಮ್ಮ ಇತರರು ಹಾಜರಿದ್ದರು.