- ನಿಯಂತ್ರಣಕ್ಕೆ ಸಾರ್ವಜನಿಕ ಆಗ್ರಹ
ಪ್ರತಿನಿಧಿ ವರದಿ ಚಿಕ್ಕಮಾಳಿಗೆ
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನಶೆ ನೀಡುವ ಗಾಂಜಾ ವ್ಯಸನಿಯರ ಹಾವಳಿ ಸದ್ದು ಗದ್ದಲವಿಲ್ಲದೆ ಹೆಚ್ಚುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆತಂಕ ಮೂಡಿಸಿದೆ.
ಗಾಂಜಾ ಸೊಪ್ಪಿನ ಗಿಡ ಬೆಳೆಯುವುದು ಹಾಗೂ ಅದನ್ನು ಮಾರಾಟ ಮಾಡುವುದು ಕಾನೂನು ಬಾಹಿರ. ಹಾಗಿದ್ದ ಮೇಲೆ ಅದನ್ನು ಸೇವನೆ ಮಾಡುವುದು ಕಾನೂನು ಪ್ರಕಾರ ಅಕ್ರಮ ಚಟುವಟಿಕೆಯಾಗಿದೆ. ಪರಿಣಾಮ, ಇದನ್ನು ಬುಡ ಸಮೇತ ಕಿತ್ತೊಗೆಯಲು ಪೊಲೀಸರು ಇನ್ನಿಲ್ಲದ ಕಸರತ್ತು ಮಾಡುತ್ತಿರುವುದು ಸುಳ್ಳಲ್ಲ.
ಅಕ್ರಮವಾಗಿ ಗುಡ್ಡಗಾಡು ಪ್ರದೇಶ ಹಾಗೂ ಹಲವು ಜಮೀನುಗಳಲ್ಲಿ ಕಾನೂನು ಉಲ್ಲಂಘಿಸಿ ಅಲ್ಲಲ್ಲಿ ಬೆಳೆಯುವ ಗಾಂಜಾ ಗಿಡಗಳನ್ನು ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಅಪರಾಧ ಪತ್ತೆದಳ ಜಪ್ತಿ ಮಾಡಿರುವ ಉದಾಹರಣೆಗಳಿವೆ. ಅಷ್ಟೇ ಅಲ್ಲದೇ, ಗಾಂಜಾ ಗಿಡ ಬೆಳೆದವರನ್ನು ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ.
ವಾಸ್ತವ ಸಂಗತಿ ಹೀಗಿದ್ದರೂ ಕೊಳ್ಳೇಗಾಲ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗಾಂಜಾ ವ್ಯಸನಿಯರ ಸಂಖ್ಯೆ ಕ್ಷೀಣಿಸಿಲ್ಲ. ಬದಲಾಗಿ, ದಿನ ಕಳೆದಂತೆ ಹೆಚ್ಚುತ್ತಲೇ ಇವೆ. ಗಾಂಜಾ ಸೇವನೆಗೆ ದಾಸರಾಗಿರುವ ಯುವ ಸಮುದಾಯ ಪಟ್ಟಣದ ಕೆಲವು ನಿರ್ಜನ ಪ್ರದೇಶಗಳನ್ನು ಗಾಂಜಾ ಸೇವನೆ ಅಡ್ಡೆಯನ್ನಾಗಿಸಿಕೊಂಡಿರುವುದು ಇದೀಗ ಬಹಿರಂಗವಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪಟ್ಟಣದ ಆನಂದಜ್ಯೋತಿ ಕಾಲೋನಿಗೆ ಹೊಂದಿಕೊಂಡಿರುವ ಕಬಿನಿ ನೀರಾವರಿ ನಾಲೆ ತಟದಲ್ಲಿ ಹಾಗೂ ಪಕ್ಕದಲ್ಲಿರುವ ಸಿದ್ದೀರಕಟ್ಟೆ ಪ್ರದೇಶದಲ್ಲಿ ಹೊರಗಿನ ಕೆಲ ಯುವಕರು ನಿತ್ಯ ಬೀಡಿ, ಸಿಗರೇಟಿಗೆ ಒಣ ಗಾಂಜಾ ಸೊಪ್ಪನ್ನು ತುಂಬಿಕೊಂಡು ಸೇವನೆಯಲ್ಲಿ ತೊಡಗುತ್ತಿರುವುದು ಬೆಳಕಿಗೆ ಬಂದಿದೆ. ಅಂತೆಯೇ, ಪೀಸ್ಪಾರ್ಕ್ ಪಕ್ಕದ ಎಲ್ಐಸಿ ಕಚೇರಿ ರಸ್ತೆಯನ್ನು ಮುಸ್ಸಂಜೆ ಹಾಗೂ ರಾತ್ರಿ ವೇಳೆ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿರುವ ಯುವಕರು ಗಾಂಜಾ ನಶೆಯಲ್ಲಿ ತೇಲುವುದು ಗುಟ್ಟಾಗಿ ಉಳಿದಿಲ್ಲ.
ಇದೇ ರೀತಿ ಮುಡಿಗುಂಡದಿಂದ ಶಂಕನಪುರ ಬಡಾವಣೆಗೆ ತೆರಳುವ ಮಾರ್ಗ ಮಧ್ಯದಲ್ಲಿರುವ ರೇಷ್ಮೆ ಇಲಾಖೆಗೆ ಸೇರಿದ ನಿರುಪಯುಕ್ತ ಕ್ವೌಟ್ರಸ್(ಎಸ್ಪಿಎಲ್ ಕಾಲನಿ), ಕುರುಬನಕಟ್ಟೆ ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆ ಆವರಣ, ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುತ್ತಲಿನ ಪ್ರದೇಶ, ಬಸ್ತಿಪುರದ ಹಿಂಭಾಗದಲ್ಲಿರುವ ಕಬಿನಿ ನಾಲೆ ರಸ್ತೆ ಸೇರಿದಂತೆ ಮಂಜುನಾಥ ನಗರದ ವಿವಿದ ಸ್ಥಳಗಳು ಗಾಂಜಾ ಸೇವನೆ ಸ್ಥಳವಾಗಿ ಗುರುತಿಸಿಕೊಂಡಿವೆ.
ಈ ಪೈಕಿ ಶಂಕನಪುರ ಬಳಿಯ ಎಸ್ಪಿಎಲ್ ಕಾಲನಿಯಲ್ಲಿ ಶಿಥಿಲಾವಸ್ತೆಯಲ್ಲಿರುವ ಕೆಲ ನಿರುಪಯುಕ್ತ ಮನೆಯಲ್ಲಿ ನಿರಂತರವಾಗಿ ಗಾಂಜಾ ವ್ಯಸನಿಗಳು ಬಂದೋಗುವ ಬಗ್ಗೆ ಪೊಲೀಸರಿಗೂ ಮಾಹಿತಿ ಇದೆ. ಸ್ಥಳಿಯ ಮುಖಂಡರೊಬ್ಬರು ನೀಡಿದ ಮಾಹಿತಿ ಆಧರಿಸಿ ಪಟ್ಟಣ ಠಾಣಾ ಪೊಲೀಸರು ಇಲ್ಲಿ ಗಸ್ತು ತಿರುಗುತ್ತಾರೆ. ಆದರೆ, ಅದ್ಯವಾವುದು ಪ್ರಯೋಜನಕ್ಕೆ ಬರುತ್ತಿಲ್ಲ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಎಸ್ಪಿಎಲ್ ಕಾಲನಿಯ ನಿರುಪಯುಕ್ತ ಮನೆಯೊಂದರಲ್ಲಿ ಇಂದಿಗೂ ಹಿಡಿಯಷ್ಟು ಬೀಡಿ, ಸಿಗರೆಟ್ ತುಂಡುಗಳು ರಾಶಿ ಬಿದ್ದಿವೆ. ಎಲ್ಲಿಂದಲೋ ಒಣ ಗಾಂಜಾ ಸೊಪ್ಪುಗಳನ್ನು ಸಂಗ್ರಹಿಸಿ ತರುವ ವ್ಯಸನಿಯರು ಅದನ್ನು ಬೀಡಿ ಹಾಗೂ ಸಿಗರೆಟ್ ಒಳಗೆ ತುಂಬಿಕೊಂಡು ಸೇವಿಸಿ ಗಂಟೆಗಟ್ಟೆಲೇ ನಶೆ ಏರಿಸಿಕೊಳ್ಳುವ ಬಗ್ಗೆ ತಿಳಿದು ಬಂದಿದೆ. ಉಳಿದ ಗಾಂಜಾ ಸೇವನೆ ಅಡ್ಡೆಗಳಲ್ಲಿಯೂ ವ್ಯವಸ್ಥಿತವಾಗಿ ವ್ಯಸನಿಯರು ಗಾಂಜಾ ಸೇವನೆ ಮಾಡಿರುವ ಕುರುಹುಗಳು ಪ್ರತಿನಿಧಿ ಪತ್ರಿಕೆಗೆ ಲಭ್ಯವಾಗಿದೆ.
ಪರಿಸ್ಥಿತಿ ಹೀಗೆ ಕೈ ಮೀರುತ್ತಿದ್ದರೂ ಪೊಲೀಸರು ನಿರಂತರ ಗಸ್ತು ತಿರುಗಿ ಗಾಂಜಾ ಸೇವೆ ಅಡ್ಡೆಗಳನ್ನು ನಿಯಂತ್ರಿಸದ ಆರೋಪಗಳು ಸಾರ್ವಜನಿಕ ವಲಯದಲ್ಲಿದೆ. ಒಂದು ಮೂಲದ ಪ್ರಕಾರ ತಾಲೂಕಿನಲ್ಲಿ ಗಾಂಜಾ ಸೊಪ್ಪು ಬೆಳೆಯುವರ ಸಂಖ್ಯೆ ಕಡಿಮೆ ಇದೆ. ಆದರೆ, ಒಡಿಶಾ ರಾಜ್ಯದಿಂದ ಕೆಲವು ದುಷ್ಕರ್ಮಿಗಳು ಒಣ ಗಾಂಜಾ ಖರೀದಿಸಿ ತಂದು ಅದನ್ನು ಮೈಸೂರು, ಬೆಂಗಳೂರು ನಗರ ಪ್ರದೇಶದಿಂದ ಕೊಳ್ಳೇಗಾಲ ಭಾಗಕ್ಕೆ ಕೆಜಿಗಟ್ಟಲೇ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ.
ಇದನ್ನು ಖರೀದಿಸುವ ದಂಧೆಕೋರರು ಕೈಯಿಂದ ಕೈಗೆ ಗಾಂಜಾ ವ್ಯಸನಿಯರಿಗೆ ಬಿಕರಿ ಮಾಡುತ್ತಿರುವ ಕಾರಣ ಪಟ್ಟಣ ಪ್ರದೇಶದಲ್ಲಿ ಸುಲಭವಾಗಿ ಗಾಂಜಾ ಸೇವನೆಯ ಅಡ್ಡೆಗಳು ತಲೆ ಎತ್ತಿವೆ ಎಂದು ಹೇಳಲಾಗಿದ್ದು, ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಉಂಟು ಮಾಡಿದೆಯಲ್ಲದೇ, ಇದಕ್ಕೆಲ್ಲ ಬೇಗ ಕಡಿವಾಣ ಬೀಳುವುದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದ ಕೆಲವೆಡೆ ಅಕ್ರಮವಾಗಿ ಗಾಂಜಾ ಸೇವೆ ಅಡ್ಡೆಗಳು ತಲೆ ಎತ್ತಿರುವ ಬಗ್ಗೆ ಕೂಡಲೇ ಪರಿಶೀಲಿಸಿ, ಗಾಂಜಾ ವ್ಯಸನಿಯರು ಹಾಗೂ ಗಾಂಜಾ ಮಾರಾಟ ದಂಧೆಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಎಂ.ಧರ್ಮೇಂದ್ರ, ಡಿವೈಎಸ್ಪಿ, ಕೊಳ್ಳೇಗಾಲ ಉಪ ವಿಭಾಗ.
2ಕೆಜಿಎಲ್-1
ಫೋಟೋ ಶೀರ್ಷಿಕೆ: ಕೊಳ್ಳೇಗಾಲ ಶಂಕನಪುರ ಬಡಾವಣೆಗೆ ತೆರಳುವ ಮಾರ್ಗ ಮಧ್ಯೆ ಗಾಂಜಾ ವ್ಯಸನಿಯರು ನಶೆ ಅಡ್ಡೆಯಾಗಿಸಿಕೊಂಡಿರುವ ರೇಷ್ಮೆ ಇಲಾಖೆಗೆ ಸೇರಿದ ಎಸ್ಪಿಎಲ್ ಕಾಲನಿಯ ನಿರುಪಯುಕ್ತ ಮನೆ ಸಾಲು ಹಾಗೂ ಶಿಥಿಲವಾದ ಮನೆಯೊಳಗೆ ಗಾಂಜಾ ಸೇವನೆ ಬೀಸಾಡಿರುವ ಬೀಡಿ, ಸಿಗರೇಟ್ ತುಂಡುಗಳನ್ನು ಕಾಣಬಹುದು.
ಡಿವೈಎಸ್ಪಿ ಎಂ.ಧರ್ಮೇಂದ್ರ ಅವರ ಫೋಟೋ ಇದೆ.