ಚಾಮರಾಜನಗರ : ಪವಾಡ ಪುರುಷ ಮಾದಪ್ಪನ ಶಿವರಾತ್ರಿ ಮಹಾ ರಥೋತ್ಸವ ಮಲೆ ಮಹದೇ ಶ್ವರಬೆಟ್ಟದಲ್ಲಿ ಇಂದು ಲಕ್ಷಾಂತರ ಭಕ್ತರ ಸಮ್ಮುಖ ದಲ್ಲಿ ಉಘೇ ಉಘೇ ಮಾದಪ್ಪ ಎಂಬ ಝೇಂಕಾ ರಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ 9.40ರಿಂದ 10.10ರ ಶುಭ ಮೂಹರ್ತದಲ್ಲಿ ಮಾದಪ್ಪನ ಶಿವರಾತ್ರಿ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಿತು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿದ ಮಹಾ ರಥೋತ್ಸವದಲ್ಲಿ ಭಕ್ತರು ಉಘೇ ಉಘೇ ಮಾದಪ್ಪ ಎನ್ನುವ ಘೋಷಣೆಗಳನ್ನು ಮೊಳಗಿಸಿ ಮಾಯಕಾರನ ಭಕ್ತಿರಸದಲ್ಲಿ ಮಿಂದೆದ್ದರು.
ಇನ್ನು ರಥದ ಜೊತೆಯಲ್ಲಿ ಹಸಿರು ಸೀರೆಯನ್ನುಟ್ಟು ಹಾಲರವಿಯನ್ನು ಹೊತ್ತಿದ್ದ ಬೇಡಗಂಪಣ್ಣ ಸಮುದಾಯದ 101 ಹೆಣ್ಣುಮಕ್ಕಳ ಮೆರವಣಿಗೆ, ಹುಲಿ ವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನಗಳು, ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.
ಮಾದಪ್ಪನ ದರ್ಶನ ಪಡೆಯಲೆಂದು ಮಹದೇಶ್ವರಬೆಟ್ಟಕ್ಕೆ ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಹಾಗೂ ನೆರೆಯ ತಮಿಳುನಾಡು ರಾಜ್ಯದಿಂದ ಲಕ್ಷಾಂತರ ಮಂದಿ ಭಕ್ತರು ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಮಾದಪ್ಪನ ದರ್ಶನ ಪಡೆದರು. ಪವಾಡ ಪುರುಷ ಮಾದಪ್ಪನ ದರ್ಶನ ಪಡೆದು ಹರಕೆ ತೀರಿಸಲು ಇತರೆಡೆಯಿಂದ ಬಂದಿದ್ದ ಭಕ್ತರು ಮಹಾ ರಥೋತ್ಸವಕ್ಕೆ ಹಣ್ಣು ದವನ ಎಸೆದರು.
ಒಟ್ಟಾರೆ ಪವಾಡ ಪುರುಷ ನೆಲೆಸಿರುವ ಮಹದೇಶ್ವರಬೆಟ್ಟದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಇಂದು ಶಿವರಾತ್ರಿ ಮಹಾ ರಥೋತ್ಸವ ಲಕ್ಷಾತರ ಸಂಖ್ಯೆಯ ಭಕ್ತ ವೃಂದದೊಂದಿಗೆ ವಿಜೃಂಭಣೆಯಿಂದ ಜರುಗಿ, ಉಘೇ ಉಘೇ ಮಾದಪ್ಪ, ಉಘೇ ಮಾಯ್ಕಾರ ಎಂಬ ಭಕ್ತರ ಝೇಂಕಾರ ಬೆಟ್ಟದ ತುಂಬೆಲ್ಲಾ ಝೇಂಕರಿಸಿತು.