ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆರೋಪ
ಪ್ರತಿನಿಧಿ ವರದಿ ಮೈಸೂರು
ಸಮಾಜ ಕಲ್ಯಾಣ ಇಲಾಖೆ ಅನೇಕ ಯೋಜನೆ ಅನುಷ್ಠಾನಗೊಳಿಸುವಲ್ಲಿ ದಲಿತ ಸಮುದಾಯವನ್ನು ವಂಚಿಸುವ ಹುನ್ನಾರ ನಡೆಸಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆರೋಪಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೨೧ರಲ್ಲಿ ಪ್ರಬುದ್ಧ ಯೋಜನೆ ಜಾರಿಗೊಳಿಸಲಾಗಿತ್ತು. ಆ ಮೂಲಕ ವಿದೇಶಗಳಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾಭ್ಯಾಸಕ್ಕೆ ಧನ ಸಹಾಯ ನೀಡಿದರ ಫಲವಾಗಿ ಇದುವರೆಗೆ ೯ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಿದ್ದಾರೆ. ಆದರೆ ಈಗ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಇದನ್ನು ಸಹಿಸದೇ ಈ ಯೋಜನೆ ಮೊಟಕುಗೊಳಿಸಲು ಆದೇಶಿಸಿದೆ. ಸಂಶೋಧನಾ ವಿದ್ಯಾಭ್ಯಾಸದ ಧನ ಸಹಾಯ ನಿಲ್ಲಿಸಿದೆ. ಅಲ್ಲದೆ, ಪ.ಜಾ, ಪ.ಪಂ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸುವ ನಿಟ್ಟಿನಲ್ಲಿ ಮೆಟ್ರಿಕ್ ನಂತರದ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಶೇ.೬೦ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಕೊಡುತ್ತಿದ್ದ ಪ್ರೋತ್ಸಾಹ ಧನಕ್ಕೆ ಆದಾಯ ಮಿತಿ ಹೇರಿದೆ ಎಂದರು.
ಕೇಂದ್ರ ಯೋಜನಾ ಆಯೋಗದ ನಿರ್ದೇಶನದಂತೆ ರಾಜ್ಯ ಸರ್ಕಾರ ಎಸ್ಸಿಪಿ, ಟಿಎಸ್ಪಿ ಯೋಜನೆ ರೂಪಿಸಿ ಕಾರ್ಯಗತಗೊಳಿಸುವಾಗ ಉದ್ದೇಶ ಪೂರ್ವಕವಾಗಿ ಸೆ.೭ಡಿ, ೭ಸಿ ಸೇರ್ಪಡೆ ಮಾಡಿ ಕಾಯ್ದೆಯನ್ನು ಉಲ್ಲಂಘಿಸಿದೆ. ಜತೆಗೆ ರಾಜಾರೋಷವಾಗಿ ಸಾರ್ವತ್ರಿಕ ಯೋಜನೆಗಳಾದ ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದ್ದು, ರಾಜ್ಯ ಸರ್ಕಾರ ಈ ರೀತಿಯಾಗಿ ದಲಿತರನ್ನು ವಂಚಿಸುತ್ತಿದೆ. ಆದ್ದರಿಂದ ಜು.೨೩ರ ಬೆಳಗ್ಗೆ ೧೧ಕ್ಕೆ ನಗರದ ಪುರಭವನ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಇತರೆ ಪ್ರಗತಿಪರ ಸಂಘಟನೆಗಳೊಂದಿಗೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಕಂದೇಗಾಲ ಶಿವಣ್ಣ, ಹರದನಹಳ್ಳಿ ರಾಜೇಶ್, ಬೊಕ್ಕಳ್ಳಿ ಮಹದೇವಸ್ವಾಮಿ, ಆರ್.ಮಂಜುನಾಥ್ ಇದ್ದರು.