ಪ್ರತಿನಿಧಿ ವರದಿ ಕೃಷ್ಣರಾಜಪೇಟೆ
ಕನ್ನಡವನ್ನು ಕಟ್ಟುವ ಕೆಲಸಕ್ಕೆ ಭಾಷೆ, ಗಡಿ, ದೇಶ ಎಂಬ ಯಾವು ಭೇದಭಾವ ಇರಬಾರದು. ಕುವೆಂಪು ಅವರ ಚಿಂತನೆಯನ್ನು ಸದಾ ಮನಸ್ಸಿನಲ್ಲಿ ನಾಟಿಸಿಕೊಳ್ಳಬೇಕು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಧ್ಯೇಯವನ್ನು ಇಟ್ಟುಕೊಳ್ಳಬೇಕು ಎಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಹೆಚ್.ಎಂ.ಹೇಮಲತಾ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗವು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಸಂಸ್ಕೃತಿಯ ಅಧ್ಯಯನ ಬಹುಶಿಸ್ತೀಯ ನೆಲೆಗಳು ಎಂಬ ವಿಷಯದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷಾ ಪ್ರೇಮವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕಲಿಯಲು ಸಾಗರದಷ್ಟು ವಿಷಯಗಳಿವೆ. ಅದರಲ್ಲಿ ಕನ್ನಡವನ್ನು ಹೆಚ್ಚು ಪ್ರೀತಿಸಬೇಕು. ಇತ್ತೀಚಿನ ಯುವಕರಲ್ಲಿ ಮಾತೃಭಾಷಾ ಪ್ರೇಮವು ಕಡಿಮೆಯಾಗುತ್ತಿದೆ. ಇತರೆ ಭಾಷೆಗಳ ಮೇಲೆ ಒಲವುಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದು ತಪ್ಪಲ್ಲ. ಆದರೆ ಮಾತೃಭಾಷೆಯ ಬೆಳವಣಿಗೆಗೆ ಮೊದಲು ಅವಕಾಶವನ್ನು ನೀಡಬೇಕು. ಕಾಲೇಜಿನ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಲಿಸಲೇಬೇಕು ಎಂಬ ಸಂಕಲ್ಪವನ್ನು ಸರಕಾರ ಮಾಡುತ್ತಿದೆ. ಹಾಗಾಗಿ ಕನ್ನಡ ವಿಷಯದ ಬಗೆಗೆ ಹಲವಾರು ಮುಕ್ತ ಅವಕಾಶಗಳನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವ ಮೂಲಕ ಭಾಷಾ ಪ್ರೇಮಿಗಳಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ವಿಚಾರ ಸಂಕಿರಣದಲ್ಲಿ ಪ್ರಧಾನ ಉಪನ್ಯಾಸ ನೀಡಿದ ರಾಮನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಹೆಚ್.ಡಿ.ಉಮಾಶಂಕರ್, ಭಾಷಾ ಸಂಸ್ಕೃತಿಯ ಉನ್ನತಿಗೆ ಕನ್ನಡವು ತನ್ನದೇ ಆದ ಕಾಣಿಕೆಯನ್ನು ನೀಡಿದೆ. ಯಾವುದೇ ಒಂದು ಭಾಷೆಯ ಬೆಳವಣಿಗೆಯು ತನ್ನ ಮೂಲ ಸಂಸ್ಕೃತಿಯನ್ನು ಒಳಗೊಂಡಂತೆ ಬೆಳೆಯಬೇಕು. ಮೂಲ ಸಂಸ್ಕೃತಿಗೆ ಧಕ್ಕೆಯಾದರೆ ಭಾಷೆಯ ಬೆಳವಣಿಗೆ ಕುಂಠಿತವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾಷೆಯ ಬೆಳವಣಿಗೆಯ ಹೆಸರಿನಲ್ಲಿ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ತರುವಂತಹ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದರ ಬಗೆಗೆ ಯುವ ಸಮೂಹ ಎಚ್ಚೆತ್ತುಕೊಳ್ಳಬೇಕು. ಕ್ನನಡ ಭಾಷೆಯ ಅಂದ ಇರುವುದೇ ತನ್ನ ಮೂಲ ಸಂಸ್ಕೃತಿಯಲ್ಲಿ ಎಂಬ ಸತ್ಯವನ್ನು ಅರಿಯಬೇಕು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಯಕೀರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಐಕ್ಯುಎಸಿ ಸಂಚಲಕ ಡಾ.ರಾಜೀವ್ ಹಾಗೂ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ್ ಮಾತನಾಡಿದರು. ವೇದಿಕೆಯಲ್ಲಿ ಪ್ರಾದ್ಯಾಪಕರಾದ ರುಪಾ, ಡಿ.ಎಸ್.ಸರಸ್ವತಿ, ಮುನಿಕೃಷ್ಣ, ಕುಮಾರಸ್ವಾಮಿ ಇದ್ದರು. ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಡಾ.ಹೆಚ್.ಡಿ.ಉಮಾಶಂಕರ್ ಅವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.
ಚಿತ್ರಶೀರ್ಷಿಕೆ: ೧೮-ಏಖPಇಖಿಇ-೦೨-ಕೆ.ಆರ್.ಪೇಟೆ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ.ಹೆಚ್.ಡಿ.ಉಮಾಶಂಕರ್ ಅವರನ್ನು ಅಭಿನಂದಿಸಲಾಯಿತು.