ಪ್ರತಿನಿಧಿ ವರದಿ ಹುಣಸೂರು
ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ತಡೆಗಟ್ಟಲು ಅಬಕಾರಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ(ದಸಂಸ)ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಆರೋಪಿಸಿದ್ದಾರೆ.
ತಾಲೂಕಿನ ಕಟ್ಟೆಮಳಲವಾಡಿ, ಯಶೋದರಪುರ, ಮಂಗಳೂರು ಮಾಳ, ಅಂಬೇಡ್ಕರ್ ನಗರ, ರತ್ನಪುರಿ, ದೊಡ್ಡಹೆಜ್ಜೂರು, ಹನಗೋಡು, ಆದಿವಾಸಿಗಳು ವಾಸಮಾಡುವ ನಾಗಾಪುರ ಹಾಡಿ, ನೇರಳಕುಪ್ಪೆ, ಶೆಟ್ಟಹಳ್ಳಿ ಹಾಡಿ, ಚಂದನಗಿರಿ ಹಾಡಿ, ಪಕ್ಷಿರಾಜಪುರ ಮುಂತಾದ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಬಕಾರಿ ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ.
ದಸಂಸ ವತಿಯಿಂದ ಹಲವಾರು ಸಭೆಗಳಲ್ಲಿ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟುವಂತೆ ಪ್ರಸ್ತಾಪಿಸಿದರೂ ಪ್ರಯೋಜನವಾಗಿಲ್ಲ. ಅಬಕಾರಿ ಅಧಿಕಾರಿಗಳು ನೆಪಮಾತ್ರಕ್ಕೆ ಗ್ರಾಮಗಳಿಗೆ ಭೇಟಿ ನೀಡಿ ಅಕ್ರಮ ಸಾರಾಯಿ ಮಾರಾಟಗಾರರನ್ನು ಬಂಧಿಸದೆ ಗ್ರಾಮದಿಂದ ಹೋಗುತ್ತಿದ್ದಾರೆ. ಅಧಿಕಾರಿಗಳೇ ಪರೋಕ್ಷವಾಗಿ ಬಾರ್ ಮಾಲೀಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಅಕ್ರಮ ಸಾರಾಯಿ ಮಾರಾಟ ಮಾಡಲು ಸಹಕರಿಸುವ ಅನುಮಾನ ಸಾರ್ವಜನಿಕರಲ್ಲಿ ಮೂಡಿಬಂದಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆದಿವಾಸಿಗಳು ವಾಸಮಾಡುತ್ತಿರುವ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಅಕ್ರಮ ಸಾರಾಯಿ ಮಾರಾಟ ಬೆಳಗ್ಗೆ 6 ಗಂಟೆಯಿಂದಲೇ ಪ್ರಾರಂಭವಾಗುತ್ತದೆ. ಕಟ್ಟೆಮಳಲವಾಡಿ ದೊಡ್ಡ ಗ್ರಾಮದಲ್ಲೇ ಸುಮಾರು ೨೦ ಮನೆಗಳಲ್ಲಿ ಅಕ್ರಮ ಸಾರಾಯಿ ಮಾರಾಟವಾಗುತ್ತಿದೆ ಮತ್ತು ಗಾಂಜಾ ಮಾರಾಟವಾಗುತ್ತಿದೆ. ಇದರಿಂದ ಗ್ರಾಮದ ಯುವಕರು, ಬಡ ಜನರು ಆರ್ಥಿಕವಾಗಿ ದಿವಾಳಿ ಹೊಂದಿ ಕೆಲವು ಕುಟುಂಬಗಳು ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ಬೀದಿಗೆ ಬೀಳುತ್ತಿವೆ.
ಅಬಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡು ಅಕ್ರಮಗಳನ್ನು ನಿಯಂತ್ರಿಸಬೇಕು. ತಪ್ಪಿದರೆ ಲೋಕಸಭಾ ಚುನಾವಣೆ ನಡೆಯುವ ಈ ಸಂದರ್ಭದಲ್ಲಿ ದೊಡ್ಡ ಅನಾಹುತವೇ ನಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
೩೧ಊUಓ೧: ನಿಂಗರಾಜ ಮಲ್ಲಾಡಿ