*ಸುನೀಲ್ ಕುಮಾರ್ ಹೇಳಿಕೆ
ಪ್ರತಿನಿಧಿ ವರದಿ ಬೆಟ್ಟದಪುರ
ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಗ್ಯಾರಂಟಿ ಇರುವುದಿಲ್ಲ ಎಂದು ಬಿಜೆಪಿ ತಾಲೂಕು ಕಾರ್ಯದರ್ಶಿ ಸುನೀಲ್ ಕುಮಾರ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಡೆದ ಮನೆ ಮನೆಗೆ ಬಿಜೆಪಿ ಹಾಗೂ ಕರಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಜನತೆ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಚುನಾವಣೆ ಬಳಿಕ ಸಾಕಷ್ಟು ಬದಲಾವಣೆಯಾಗಲಿದೆ. ಪ್ರತಿಯೊಂದು ದೇಶ ಭಾರತದ ಕಡೆ ನೋಡುವಂತೆ ಮಾಡಿದ ನರೇಂದ್ರ ಮೋದಿಯವರ ನಾಯಕ್ವ ಗುಣವನ್ನು ದೇಶದ ಜನತೆ ಬಯಸುತ್ತಿದ್ದಾರೆ. ನಮ್ಮ ಕ್ಷೇತ್ರದ ಅಭ್ಯರ್ಥಿಯಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜನರ ಸೇವೆಗಾಗಿ ಬಂದಿದ್ದು, ಈಗಾಗಲೇ ಮೈಸೂರಿನಲ್ಲಿ ಸಾರ್ವಜನಿಕರ ಸೇವೆಗಾಗಿ ಕಚೇರಿಯನ್ನು ತೆರೆದಿದ್ದಾರೆ. ಇವರಿಗೆ ಮತ ನೀಡಿ ಗೆಲ್ಲಿಸುವ ಮೂಲಕ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಬಿಜೆಪಿ ಪದಾಧಿಕಾರಿಗಳಾದ ಮೈಲಾರಿ, ರಘುಶೆಟ್ಟಿ, ದೇವರಾಜು, ಅಭಿಲಾಷ್, ಕೆಂದಗಣ್ಣ ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
22ಬಿಟಿಪಿ01: ಬೆಟ್ಟದಪುರದಲ್ಲಿ ಬಿಜೆಪಿ ಪಕ್ಷದ ಕರಪತ್ರವನ್ನು ಬಿಜೆಪಿ ತಾಲೂಕು ಕಾರ್ಯದರ್ಶಿ ಸುನೀಲ್ ಕುಮಾರ್ ವಿತರಣೆ ಮಾಡುವ ಮೂಲಕ ಮತಯಾಚನೆ ಮಾಡಿದರು.