ಕೋಲಾರ: ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಹೂಡಿ ವಿಜಯಕುಮಾರ್ ಅವರಿಗೆ ಟಿಕೆಟ್ ತಪ್ಪಿಸಲು ಕಾರಣರಾದ ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ಡಾ.ಸುಧಾಕರ್ ವಿರುದ್ದ ನಮ್ಮ ಸಮುದಾಯ ಕೆಲಸ ಮಾಡಲಿದೆ ಎಂದು ರಾಜ್ಯ ತಿಗಳ ವಹ್ನಿಕುಲ ಸಂಘದ ನಿರ್ದೇಶಕ ಗೋಪಿ ತಿಳಿಸಿದರು.
ಸುಧಾಕರ್ ಅವರಿಗೆ ಹಿಂದುಳಿದ ಸಮುದಾಯಗಳೆಂದರೆ ಅಲರ್ಜಿ, ಆ ಕಾರಣದಿಂದಲೇ ನಮ್ಮ ಸಮುದಾಯದ ಹೂಡಿ ವಿಜಯಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿದರು ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಬಳ್ಳಾಪುರ, ಶಿಢ್ಲಘಟ್ಟ, ದೊಡ್ಡಬಳ್ಳಾಪುರದಲ್ಲಿ ನಮ್ಮ ಸಮುದಾಯದ ೧.೧೦ ಲಕ್ಷ ಮತದಾರರಿದ್ದು, ಅವರೆಲ್ಲರಿಗೂ ತಿಗಳ ಸಮುದಾಯಕ್ಕೆ ಅನ್ಯಾಯವಾಗಲು ಕಾರಣರಾದ ಸುಧಾಕರ್ ವಿರುದ್ದ ಕೆಲಸ ಮಾಡಲು ಕರೆ ನೀಡುವುದಾಗಿ ತಿಳಿಸಿದರು.
ಹೂಡಿ ವಿಜಯಕುಮಾರ್ ಅವರಿಗೆ ಸಮಾಜಸೇವೆಯ ಮೂಲಕ ಗುರುತಿಸಿಕೊಳ್ಳಿ, ನಿಮಗೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದ ಸುಧಾಕರ್ ಕೊನೆ ಘಳಿಗೆಯಲ್ಲಿ ಅನ್ಯಾಯ ಮಾಡಿದರು. ಹಿಂದುಳಿದ ಸಮುದಾಯವಾಗಿರುವ ತಿಗಳರಲ್ಲಿ ಒಬ್ಬ ಶಾಸಕರಿಲ್ಲ, ಒಂದು ಬೋರ್ಡ್ ಅಧ್ಯಕ್ಷಗಿರಿ ಸಿಕ್ಕಿಲ್ಲ. ಎಲ್ಲ ಪಕ್ಷಗಳು ನಮಗೆ ಅನ್ಯಾಯ ಮಾಡಿವೆ ಎಂದರು.
ತಿಗಳ ಸಮುದಾಯ ಹೂಡಿ ವಿಜಯಕುಮಾರ್ ಬೆನ್ನಿಗೆ ಇದ್ದಾರೆ, ಮಾಲೂರಿನಲ್ಲಿ ಅವರು ಸೋತರೂ ಜನರ ಹೃದಯದಲ್ಲಿ ಇದ್ದು ಮುಂದೆ ಅವರಿಗೆ ಒಳ್ಳೆಯ ಭವಿಷ್ಯವಿದೆ. ಸಣ್ಣ ಸಮುದಾಯಗಳ ಕುರಿತು ಕೀಳರಿಮೆ ಹೊಂದಿರುವ ಸುಧಾಕರ್ ಅವರ ವಿರುದ್ದ ನಾವು ಕೆಲಸ ಮಾಡುವುದಾಗಿ ತಿಳಿಸಿದರು.
ರಾಜ್ಯ ತಿಗಳ ವಹ್ನಿಕುಲ ಸಂಘದ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ನರಸಾಪುರ ಗ್ರಾ.ಪಂ ಸದಸ್ಯ ಕುಮಾರ್, ಜಿಲ್ಲಾ ತಿಗಳ ಯುವವೇದಿಕೆ ಅಧ್ಯಕ್ಷ ಲಕ್ಷ್ಮೀಪತಿ ಕಾರ್ಯದರ್ಶಿ ದೇವರಾಜ್, ಮುಖಂಡ ಅಶೋಕ್ ಮತ್ತಿತರರಿದ್ದರು.