ಪ್ರತಿನಿಧಿ ವರದಿ ತಲಕಾಡು
ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ಕೋಟ್ಯಂತರ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದು ನಾಚಿಕೆಗೇಡಿನ ಸಂಗತಿ ಎಂದು ಚಾಮರಾಜನಗರ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಎಸ್.ಬಾಲರಾಜು ಮೂದಲಿಸಿದರು.
ತಲಕಾಡಿನ ಶಿವಪಾರ್ವತಿ ಮಂಗಳ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮುಖಂಡರ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ದಲಿತರನ್ನು ಒಡೆದಾಳುವ ನೀತಿ ಅನುಸರಿಸಿದೆ ಎಂದು ಅಪಾದಿಸಿದರು.
ಎಸ್ ಸಿ, ಎಸ್ ಟಿ ವರ್ಗದ ಬಡಜನರ ಅಭಿವೃದ್ದಿಗೆ ಸೀಮಿತವಾಗಿದ್ದ ಮೀಸಲು ಮೊತ್ತವನ್ನು, ಸರ್ಕಾರ ಸಾರ್ವಜನಿಕರ ಯೋಜನೆಗಳಿಗೆ ಬಳಸಿಕೊಂಡಿದ್ದು ಅಕ್ಷಮ್ಯ. ಹೀಗಾಗಿ ಸಂವಿಧಾನ ಪೀಠಿಕೆ ಓದುವುದಕ್ಕೆ ನಿಮಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಬಾರಿಯ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ಯುದ್ದದಂತೆ ಮಾರ್ಪಟ್ಟಿದೆ. ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡ ಬಿಜೆಪಿ ಚುನಾವಣೆ ಎದುರಿಸುತ್ತಿದ್ದು, ಕಾಂಗ್ರೆಸ್ ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅಪಪ್ರಚಾರ ನಡೆಸಲು ವಿರೋಧಿಗಳು ವ್ಯರ್ಥಪ್ರಯತ್ನ ನಡೆಸುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಕಬಿನಿ ನೀರು ಒದಗಿಸುವ ವಿಫಲ:-
40 ವರ್ಷ ಸುದೀರ್ಘ ಕಾಲ ಈ ಭಾಗದ ಶಾಸಕರು ಸಚಿವರಾಗಿ ಅನುಭವವಿದ್ದರೂ, ಈ ಭಾಗದ ಕಬಿನಿ ನಾಲಾ ರೈತರ ಬೆಳೆಗೆ ಸಮರ್ಪಕವಾಗಿ ನೀರೊದಗಿಸಲು ವಿಫಲರಾಗಿದ್ದಾರೆ. ಕೇವಲ ಮೂರು ವರ್ಷ ಶಾಸಕನಾಗಿದ್ದ ನಾನು (2004) ಕೊಳ್ಳೇಗಾಲ ಭಾಗದ ಕಬಿನಿ ನಾಲೆ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು, ಅರೆನೀರಾವರಿ ಬೆಳೆ ಭೂಪ್ರದೇಶವಾಗಿದ್ದ 2500ಸಾವಿರ ಎಕರೆ ಭೂಮಿಯನ್ನು ನೀರಾವರಿ ಪ್ರದೇಶವಾಗಿ ಅಭಿವದ್ದಿಪಡಿಸಿದ್ದೇನೆ ಎಂದು ಇಲ್ಲಿ ಸಮರ್ಥಿಸಿಕೊಂಡರು.
ಪ್ರಧಾನಿ ಅಭಿವೃದ್ದಿ ಹರಿಕಾರ:-
ದೇಶದ ಕಾವಲುಗಾರನಾಗಿ, ದೇಶದ ಅಭಿವೃದ್ದಿ ಹರಿಕಾರನಾಗಿ, ಪ್ರಪಂಚದ ಭೂಪಟದಲ್ಲಿ ಭಾರತ ದೇಶವನ್ನು ಅತ್ಯಂತ ಎತ್ತರದ ಸ್ಥಾನಕ್ಕೆ ಕೊಂಡೋಯ್ದಿರುವ ನರೇಂದ್ರ ಮೋದಿ, ಇಡೀ ದೇಶದ ಸಮಗ್ರ ಅಭಿವೃದ್ದಿಗೆ ವಿಕಸಿತ ಭಾರತದಂತಹ ಅನೇಕ ಅದ್ಭುತ ಕಾರ್ಯ ಕ್ರಮಗಳ ಜಾರಿಗೆ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಬಾಲರಾಜು ಶ್ಲಾಘಿಸಿದರು.
ತಿ.ನರಸೀಪುರ ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ತಿ.ನರಸೀಪುರ ಕ್ಷೇತ್ರವೂ ಒಂದಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವ ಎಸ್.ಬಾಲರಾಜು ಗೆಲುವಿಗೆ, ತಾಲೂಕಿನ ಪ್ರತಿ ಭೂತ್ ಮಟ್ಟದಲ್ಲೂ ಕಾರ್ಯಕರ್ತರು ಹೆಚ್ಚಿನ ಲೀಡ್ ದೊರಕಿಸಿಕೊಡಲು ಶಕ್ತಿ ಮೀರಿ ಶ್ರಮಿಸುವಂತೆ ಮೈತ್ರಿ ಕೂಟದ ಕಾರ್ಯಕರ್ತರಿಗೆ ಹುರಿದುಂಬಿಸುವ ಕರೆ ನೀಡಿದರು. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ವತಿಯಿಂದ ಎಸ್.ಬಾಲರಾಜು, ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್ ರವರನ್ನು ಸನ್ಮಾನಿಸಲಾಯಿತು. 50ಕ್ಕೂ ಹೆಚ್ಚಿನ ಯುವಕರು ಕಾರ್ಯಕ್ರಮದಲ್ಲಿ ಮೈತ್ರಿಕೂಟ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ತಲಕಾಡು ಜಿ.ಪಂ.ಮಾಜಿ ಸದಸ್ಯ ಲೋಕೇಶ್ ನಾಯಕ್ ಮಾತನಾಡಿದರು. ಡಾ.ಎಂ.ರೇವಣ್ಣ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಎಂ.ಚಿನ್ನಸ್ವಾಮಿ, ತಾ.ಪಂ.ಮಾಜಿ ಸದಸ್ಯರಾದ ಶಿವಮ್ಮ, ರತ್ನರಾಜು, ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷ ಟಿ.ಸಿ.ಮಹದೇವ, ಶಂಭುದೇವನಪುರ ಸುಗಂಧರಾಜು, ಕುಕ್ಕೂರು ಎಲ್.ಉಮಾಪತಿ, ಸಾಮ್ರಾಟ್ ಸುಂದರೇಶನ್, ತೊಟ್ಟವಾಡಿ ಮಹದೇವಸ್ವಾಮಿ, ವಿಚಾರವಾದಿ ಪ್ರಭುಸ್ವಾಮಿ, ನರೇಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಯಶೋಧಮ್ಮ, ಹೆಮ್ಮಿಗೆ ಹೊನ್ನನಾಯಕ, ಹೆಳವರಹುಂಡಿ ಸಿದ್ದಪ್ಪ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ 1,2, 3,4
1,2)ಎಸ್. ಬಾಲರಾಜು ಹಾಗು 2,3) ಎಂ.ಅಶ್ವಿನ್ ಕುಮಾರ್ ಮಾತನಾಡಿದರು.