ಎರಡೂ ಫೊಟೋಗಳನ್ನು ಸಮಗ್ರದಲ್ಲಿ ಸೇವ್ ಮಾಡಲಾಗಿದೆ.
ಮಂಗಳೂರು: ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ ಆಶ್ರಯದಲ್ಲಿ ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಗೌರವಾಧ್ಯಕ್ಷತೆಯಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ಗುರುಪುರ ಕಂಬಳ ಶುಕ್ರವಾರ ಆರಂಭಗೊಂಡಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದ ಕಂಬಳ ಸಮಿತಿ ಕಾರ್ಯದರ್ಶಿ ಗುಣಪಾಲ ಕಡಂಬ ಅವರು, ಸರ್ವ ಜಾತಿ ಧರ್ಮದ ಜನರನ್ನು ಬೆಸೆಯುವ ಏಕೈಕ ಕ್ರೀಡೆಯೆಂದಿದ್ದರೆ ಅದು ಕಂಬಳ ಮಾತ್ರ. ಗುರುಪುರ ಕಂಬಳದ ಮೂಲಕ ಸಾಮರಸ್ಯ ಬೆಸೆಯುವ ಕೆಲಸ ನಡೆದಿದೆ. ಮುಂದೆಯೂ ಈ ಕಂಬಳ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿ. ಜನರನ್ನು ಪರಸ್ಪರ ಬೆಸೆಯುವ ಕೆಲಸ ಇಲ್ಲಿಂದ ಶುರುವಾಗಲಿ ಎಂದು ಶುಭ ಹಾರೈಸಿದರು.
ಬಳಿಕ ಮಾತಾಡಿದ ಇನಾಯತ್ ಅಲಿ, ಗುರುಪುರದಲ್ಲಿ ಮೊದಲನೇ ವರ್ಷದ ಕಂಬಳ ಜರುಗುತ್ತಿದ್ದು ಊರಿನ ಜನರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ. ಕಂಬಳದಿಂದ ಶಾಂತಿ ಸೌಹಾರ್ದತೆ ನೆಲೆಗೊಳ್ಳಲಿ ಎಂದರು.
ವೇದಿಕೆಯಲ್ಲಿ ಕಟೀಲು ದೇವಳದ ಅನುವಂಶಿಕ ಅರ್ಚಕರು ಅನಂತ ಅಸ್ರಣ್ಣ, ಗುರುಪುರ ಪೊಂಪೈ ಚರ್ಚ್ ಧರ್ಮಗುರು ರೊಡಾಲ್ಫ್ ರವಿ ಡೇಸಾ, ದಾರುಸ್ಸಲಾಮ್ ಜುಮಾ ಮಸೀದಿ ಗುರುಪುರ ಜಮಾಲ್ ದಾರಿಮಿ, ರವಿಕುಮಾರ್ ಶೆಟ್ಟಿ ತಿರುವೈಲ್ ಗುತ್ತು, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಜಿಟಿ ವಾಸುದೇವ ಭಟ್, ಸುರೇಂದ್ರ ಕಂಬಳಿ ಅಡ್ಯಾರ್ ಗುತ್ತು, ಪದ್ಮನಾಭ ಕೋಟ್ಯಾನ್, ಯಶವಂತ ಕುಮಾರ್ ಶೆಟ್ಟಿ ಬೊಳ್ಳೂರು ಗುತ್ತು, ರಾಜೇಶ್ ಕುಮಾರ್ ಶೆಟ್ಟಿ, ಜಗದೀಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಇಂದು ಮಂಗಳೂರಿನಲ್ಲಿ ಮೋದಿ ಬೃಹತ್ ರೋಡ್ಶೋ
ಮಂಗಳೂರು: ಮಂಗಳೂರಿನಲ್ಲಿ ಮೋದಿ ಬೃಹತ್ ರೋಡ್ಶೋ ನಡೆಸಲಿದ್ದು, ಪ್ರಧಾನಿ ಅವರನ್ನು ಸಮೀಪದಿಂದ ಕಾಣುವ ಉತ್ತಮ ಅವಕಾಶ ಇದಾಗಿದೆ. ಮಂಗಳೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ರೋಡ್ಶೋ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ. ಮಂಗಳೂರು ನಗರದಲ್ಲಿ ರೋಡ್ಶೋ ನಡೆಸುವುದರಿಂದ ಸ್ವಲ್ಪವೂ ಲೋಪವಾಗದಂತೆ ಅಚ್ಚುಕಟ್ಟಾಗಿ ನಡೆಸಲು ಸಮ ರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಈಗಾಗಲೇ ಮಂಗಳೂರು ಜನತೆಗೆ ಮೋದಿ ರೋಡ್ಶೋನಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ ಎಂದರು.
ಲೇಡಿಹಿಲ್ನ ನಾರಾಯಣಗುರು ವೃತ್ತದಿಂದ ಲಾಲ್ಬಾಗ್, ಪಿವಿಎಸ್ ಆಗಿ ನವಭಾರತ ವೃತ್ತ ವರೆಗೆ ಮೋದಿ ಅವರ ರೋಡ್ಶೋ ನಡೆಯಲಿದೆ. 2.ಕಿ.ಮೀ. ದೂರದ ಈ ದಾರಿಯುದ್ಧಕ್ಕೂ ಕೇಸರಿ, ಬಿಜೆಪಿ ಧ್ವಜ, ಪತಾಕೆಗಳಿಂದ ಅಲಂಕರಿಸಲಾಗಿದೆ. ಮೋದಿ ಅವರು ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ಶೋ ಆರಂಭಿಸಲಿದ್ದಾರೆ.
ರೋಡ್ಶೋ ಆಗಮಿಸುವ ಏಳೆಂಟು ಕಡೆಗಳಲ್ಲಿ ತುಸು ಎತ್ತರದ ವೇದಿಕೆಯಲ್ಲಿ ಕರಾವಳಿಯ ಜನಾಪದ ಸೊಬಗನ್ನು ಪ್ರಧಾನಿಗೆ ಪರಿಚಯಿಸುವ ಕಾರ್ಯಕ್ರಮ ಏರ್ಪಾಟಾಗಲಿದೆ. ಅಲ್ಲದೆ ಆಯ್ದ ಸ್ಥಳಗಳಲ್ಲಿ ಪಕ್ಷದ ನಾಯಕರು ನಿಂತು ರೋಡ್ಶೋ ವೀಕ್ಷಿಸಲಿದ್ದಾರೆ. ಸುಮಾರು 5 ಸಾವಿರ ಕೇಜಿಯ ಪುಷ್ಪಗಳ ವೃಷ್ಟಿಯನ್ನು ಪ್ರಧಾನಿ ರೋಡ್ಶೋ ವೇಳೆ ಮಾಡಲಾಗುವುದು ಎಂದರು.
ರೋಡ್ಶೋ ನಡೆಯುವ ಇಕ್ಕೆಲಗಳಲ್ಲೂ ಭಾರಿ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ನಿಂತು ವೀಕ್ಷಿಸಲಿದ್ದಾರೆ. ರೋಡ್ಶೋ ರಾತ್ರಿ 7.45ಕ್ಕೆ ಆರಂಭವಾಗಿದ್ದು, 8.45ಕ್ಕೆ ಮುಕ್ತಾಯವಾಗಲಿದೆ. ಹಾಗಾಗಿ ರೋಡ್ಶೋಗೆ ಆಗಮಿಸುವವರು ರಾತ್ರಿ 7 ಗಂಟೆ ಮೊದಲು ಬ್ಯಾರಿಕೇಡ್ಗಳ ಬಳಿ ಉಪಸ್ಥಿತರಿರಬೇಕು. ಇದರಿಂದ ಟ್ರಾಫಿಕ್ ಹಾಗೂ ತಪಾಸಣೆ ವಿಳಂಬವನ್ನು ತಪ್ಪಿಸಬಹುದು ಎಂದರು.