ಪ್ರತಿನಿಧಿ ವರದಿ ಮೈಸೂರು
ಸ್ವರ ಸಂಗಮ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜೂ.೯ರಂದು ಹವ್ಯಾಸಿ ಗಾಯಕರಿಂದ ತಾಳ ಹಾಕಿ ನಮ್ಮ ಜೋಡಿ ಹಾಡಿ ಎಂಬ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಎಂ.ಪುಟ್ಟಸ್ವಾಮಿ ತಿಳಿಸಿದರು. ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಂಪೂರ್ಣ ಉಚಿತ ಪ್ರವೇಶದ ಕಾರ್ಯಕ್ರಮವಾಗಿದ್ದು, ೩೦ ಮಂದಿ ಹವ್ಯಾಸಿ ಗಾಯಕರು ಪ್ರಮುಖವಾಗಿ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳ ಕರೊಕೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ನಾಗರಾಜ್ ವಿ.ಬೈರಿ, ಪಾಲಿಕೆ ಮಾಜಿ ಸದಸ್ಯ ಅಜ್ಜು ಬ್ರದರ್ಸ್, ಅಕ್ಮಲ್ ಪಾಷಾ, ಡಾ.ರೇಖಾ ಅರುಣ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಆರ್.ಲಕ್ಷ್ಮಣ್, ರಾಜಶೇಖರ್, ಎಸ್.ಆರ್.ರೂಪ್ಕುಮಾರ್, ಭೋಜಯ್ಯ ಇದ್ದರು.
=================
ಮೌಲ್ಯಮಾಪಕರ ಬೇಜವಾಬ್ದಾರಿಯಿಂದ ಕಡಿಮೆ ಅಂಕ
– ಮೈಸೂರಿನ ವಿದ್ಯಾರ್ಥಿನಿ ಪೋಷಕರ ಅಸಮಾಧಾನ
– ಮರು ಮೌಲ್ಯಮಾಪನದ ಬಳಿಕ 606 ಅಂಕಗಳು ಲಭ್ಯ
ಪ್ರತಿನಿಧಿ ವರದಿ ಮೈಸೂರು
ಮೌಲ್ಯಮಾಪಕರ ಬೇಜವಾಬ್ದಾರಿಯಿಂದ ಕಡಿಮೆ ಅಂಕ ಬಂದಿದ್ದು, ಮರು ಮೌಲ್ಯಮಾಪಕದಿಂದ ಹೆಚ್ಚು ಅಂಕಗಳು ಲಭಿಸಿದೆ. ಆದರೆ ಇದೀಗ ಕಾಲೇಜು ಪ್ರವೇಶಾತಿ ದಿನಾಂಕ ಮುಗಿದಿರುವ ಕಾರಣ ಕಾಲೇಜುಗಳಲ್ಲಿ ಸೀಟ್ ಸಿಗುತ್ತಿಲ್ಲ ಎಂದು ಮೈಸೂರಿನ ವಿದ್ಯಾರ್ಥಿನಿ ಕೆ.ಎಸ್.ಶ್ರಾವ್ಯ ಅವರ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪ್ರಕಟಗೊಂಡ ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ತಮ್ಮ ಪುತ್ರಿ ಕೆ.ಎಸ್.ಶ್ರಾವ್ಯಳಿಗೆ ೫೪೫ ಅಂಕ ದೊರೆತು, ಶೇ.೮೭ ಫಲಿತಾಂಶ ಬಂದಿತ್ತು. ಆದರೆ ನಮಗೆ ತಮ್ಮ ಪುತ್ರಿಯ ಮೇಲೆ ವಿಶ್ವಾಸವಿದ್ದ ಕಾರಣದಿಂದಾಗಿ ಮರು ಮೌಲ್ಯಮಾಪನಕ್ಕೆ ಹಾಕಿದ ಬಳಿಕ ಆಕೆಗೆ 606 ಅಂಕಗಳು ದೊರೆತು, ಶೇ.97ರಷ್ಟು ಫಲಿತಾಂಶ ಬಂದಿದೆ. ಆದರೆ ಯಾರದೋ ತಪ್ಪಿನಿಂದಾಗಿ ನಮ್ಮ ಮಗಳಿಗೆ ಕಡಿಮೆ ಅಂಕ ದೊರೆತ ಪರಿಣಾಮ ಆಕೆ ಅನುಭವಿಸಿದ ಮಾನಸಿಕ ನೋವಿಗೆ ಬೆಲೆ ಕಟ್ಟಲು ಸಾಧ್ಯವೇ ಎಂದು ವಿದ್ಯಾರ್ಥಿನಿ ಕೆ.ಎಸ್.ಶ್ರಾವ್ಯ ಅವರ ತಾಯಿ ಬನ್ನೂರು ಹೋಬಳಿ ಕೊಡಗಳ್ಳಿ ಗ್ರಾಮದ ಸುಮಾ ಶ್ರೀನಿವಾಸ್ ಪ್ರಶ್ನಿಸಿದರು.
ಯಾರೂ ಸಹ ತಾವು ಚೆನ್ನಾಗಿ ಓದಿದ್ದರೂ ಕಡಿಮೆ ಅಂಕ ಬಂದಿದೆ ಎಂದಾಗ ಆತಂಕಪಡುವುದು ಸಹಜ. ಆದರೆ ಇದಕ್ಕಾಗಿ ಯಾರೊಬ್ಬರೂ ಆತಂಕಕ್ಕೊಳಗಾಗುವುದು ಬೇಡ, ಧೈರ್ಯದಿಂದ ಮರು ಮೌಲ್ಯಮಾಪನಕ್ಕೆ ಹಾಕಬೇಕು. ನಮ್ಮ ಮಗಳು ವ್ಯಾಸಂಗ ಮಾಡಿದ ನವೋದಯ ಶಾಲೆಯ ಪ್ರಾಚಾರ್ಯರು ತಮಗೆ ಧೈರ್ಯ ತುಂಬಿ, ನಿಮ್ಮ ಮಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿದ್ದಾಳೆ. ಮರು ಮೌಲ್ಯಮಾಪನಕ್ಕೆ ಹಾಕಿ ಎಂದು ಉತ್ತೇಜಿಸಿದರು. ಹೀಗಾಗಿ ತಾವು ಮರು ಮೌಲ್ಯ ಮಾಪನಕ್ಕೆ ಹಾಕಿದ ಬಳಿಕ ನಿರೀಕ್ಷೆಗೆ ತಕ್ಕ ಫಲಿತಾಂಶ ದೊರೆತಿದೆ. ಆದರೆ ಇದೇ ರೀತಿ ಎಷ್ಟೋ ವಿದ್ಯಾರ್ಥಿಗಳಿಗೆ ಲೋಪಗಳು ಆಗಿರಬಹುದು, ಇದರಿಂದ ಅವರು ಅನುಭವಿಸುವ ಮಾನಸಿಕ ಆಘಾತ ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಮೊದಲ ಮೌಲ್ಯಮಾಪನದಲ್ಲಿ ಕಡಿಮೆ ಅಂಕ ಬಂದಿದ್ದರ ಪರಿಣಾಮ ಮರು ಮೌಲ್ಯಮಾಪನದ ಬಳಿಕ ಪಿಯುಸಿ ಪ್ರವೇಶಕ್ಕೆ ಅರ್ಜಿ ಹಾಕೋಣ ಎಂದು ಸುಮ್ಮನಿದ್ದೆವು. ಈಗ ಶೇ.೯೭ರಷ್ಟು ಅಂಕ ಬಂದಿದ್ದರೂ, ಕಾಲೇಜು ಪ್ರವೇಶಾತಿಯ ಕೊನೆ ದಿನಾಂಕ ಮುಗಿದಿರುವ ಕಾರಣ ಕಾಲೇಜುಗಳಲ್ಲಿ ಸೀಟು ಸಿಗುತ್ತಿಲ್ಲ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ವಿದ್ಯಾರ್ಥಿನಿ ಶ್ರಾವ್ಯ, ತಂದೆ ಕೊಡಗಳ್ಳಿ ಶ್ರೀನಿವಾಸ್, ದೊಡ್ಡಪ್ಪ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ ಇದ್ದರು.