ಪ್ರತಿನಿಧಿ ವರದಿ ಮೈಸೂರು
ಮುಡಾದಲ್ಲಿ ನಡೆದಿರುವ ಶೇ.೫೦:೫೦ ಅನುಪಾತದ ಹಗರಣದಿಂದಾಗಿ ಯಾವುದೇ ಸಭೆಗಳು ನಡೆಯುತ್ತಿಲ್ಲ. ಇದರಿಂದ ಬಿಲ್ಡರ್ಸ್ಗಳಿಗೆ ತೊಂದರೆಯಾಗಿದೆ. ಹೀಗಾಗಿ ಮುಡಾ ಕೂಡಲೇ ತನ್ನ ಎಂದಿನ ಸಭೆ ನಡೆಸುವ ಮೂಲಕ ಈ ಡೆವಲಪರ್ಸ್ಗಳ ಬಡಾವಣೆಗಳಿಗೆ ಕ್ಲಿಯರೆನ್ಸ್ ನೀಡಬೇಕು ಎಂದು ಕ್ರೆಡೈ ಮೈಸೂರು ಶಾಖೆ ಅಧ್ಯಕ್ಷ ಡಿ.ಶ್ರೀಹರಿ ಮನವಿ ಮಾಡಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೃಹದಾಕಾರವಾಗಿ ಬೆಳೆಯುತ್ತಿರುವ ಮೈಸೂರು ರಿಯಲ್ ಎಸ್ಟೇಟ್ ಕಳೆದ ಎರಡು ದಶಕಗಳಲ್ಲಿ ವಾರ್ಷಿಕ ಶೇ.೧೫ ರಿಂದ ೨೦ರಷ್ಟು ಅಭಿವೃದ್ಧಿ ಕಂಡಿದೆ. ಇದೇ ವೇಳೆ ಈಚೆಗೆ ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ಹಂತದಲ್ಲಿರುವ ನಿವೇಶನಗಳನ್ನು ಹೊರತು ಪಡಿಸಿ, ಪ್ರಾಧಿಕಾರ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಅಭಿವೃದ್ಧಿ ಪಡಿಸಿರುವ ಖಾಸಗಿ ಬಡಾವಣೆಗಳಲ್ಲಿ ಯಾವುದೇ ನ್ಯೂನತೆ ಇಲ್ಲದ ಕಾರಣ ಇವುಗಳಿಗೆ ಮುಡಾ ಸಭೆ ನಡೆಸಿ ಕ್ಲಿಯರೆನ್ಸ್ ನೀಡಬೇಕು. ಈಗಾಗಲೇ ಹಗರಣ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ನಡೆಯದ ಕಾರಣ ಇವರೆಲ್ಲ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಮುಡಾ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಕೋರಿದರು.
ಸಂಸ್ಥೆಯ ಇನ್ನಿತರ ಪದಾಧಿಕಾರಿಗಳಾದ ಕೆ.ಎನ್.ರವಿಶಂಕರ್, ಮುರಳೀಧರ್, ಹರೀಶ್ಶೆಣೈ, ಮಧು ಹಾಜರಿದ್ದರು.