ವಿವಿಧ ಪೂಜಾ ವಿಧಾನ । ಪ್ರಾಧಿಕಾರದಿಂದ ಹಲವು ವ್ಯವಸ್ಥೆ
ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಸಾಲೂರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಚಾಲನೆ ಸಿಕ್ಕಿದ್ದು, ವಿಧಿ ವಿಧಾನಗಳೊಂದಿಗೆ ಪೂಜ ಪುರಸ್ಕಾರಗಳು ಶನಿವಾರದಿಂದ ಆರಂಭಗೊಂಡಿದೆ.
ಹುಲಿವಾಹನ, ಬಸವ ವಾಹನ, ಬೆಳ್ಳಿ ರಥ ಇನ್ನಿತರ ಉತ್ಸವ ಗಳಲ್ಲಿ ಭಾಗಿಯಾಗಿ ಮಾದಪ್ಪನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ : ಪ್ರಾಧಿಕಾರದ ವತಿಯಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಈ ಬಾರಿ ವಿಶೇಷವಾಗಿ ಮಡಕೆಯಲ್ಲಿರುವ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಹ ಮಾಡಲಾಗಿದೆ.
ವಿಶೇಷ ದಾಸೋಹ ವ್ಯವಸ್ಥೆ : ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ವಿತರಣೆಯಲ್ಲಿ ಯಾವುದೇ ತೊಂದರೆಯಾಗದಂತೆ ವಿಶೇಷವಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಖುದ್ದಾಗಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಪ್ರತಿ ಬಾರಿ ಊಟದ ಶುಚಿ ರುಚಿ ಗಮನಸಿ, ಭಕ್ತರ ಜತೆಗೆ ಸಾಲಿನಲ್ಲಿ ಕುಳಿತು ಪ್ರಸಾದವನ್ನು ಸ್ವೀಕರಿಸುತ್ತಿದ್ದಾರೆ. ಆ ಮೂಲಕ ಭಕ್ತರ ಜೊತೆಗೆ ಭಕ್ತರಾಗಿದ್ದಾರೆ. ವಿವಿಧಡೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿರುವುದು ನೋಡುಗರಿಗೆ ವೈಭವವನ್ನುಂಟು ಮಾಡುತ್ತಿದೆ ಅಷ್ಟರ ಮಟ್ಟಿಗೆ ಈ ಬಾರಿ ವಿದ್ಯುತ್ ದೀಪಾಲಂಕಾರ ಮೂಡಿ ಬಂದಿದೆ.
ಇಷ್ಟೇ ಅಲ್ಲದೇ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಾಧಿಕಾರ ಮುಂದಾಗಿದ್ದು ನೆರಳು, ಶೌಚಾಲಯ ಸೇರಿದಂತೆ ಶುಚಿತ್ವಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಿದ್ದಾರೆ. ಜತೆಗೆ ಈ ಬಾರಿ ರಾಜ್ಯದ ಮೂಲೆ ಮೂಲೆಗಳಿಂದ ಅಲ್ಲದೆ ನೆರೆಯ ತಮಿಳು ನಾಡು ರಾಜ್ಯದಿಂದಲೂ ಸಹ ಭಕ್ತರು ಬರುವುದರಿಂದ ಅವರಿಗಾಗಿ ಕೆ ಎಸ್ ಆರ್ ಟಿ ಸಿ ವತಿಯಿಂದ 250 ಬಸ್ ಗಳನ್ನು ಈಗಾಗಲೇ ಬಿಡಲಾಗಿದೆ. ಜೊತೆಗೆ ಮುಖ್ಯವಾಗಿ ಬಿಸಿಲಿಗೆ ದೇವಾಲಯದ ಅವರಣಕ್ಕೆ ಆಗಿಂದಾಗೆ ಟ್ಯಾಂಕರ್ ಮೂಲಕ ನೀರು ಹಾಕಿಸುತ್ತಿದ್ದಾರೆ.
ಅಂಗಡಿ ಮಾಲೀಕರಿಗೆ ಎಚ್ಚರಿಕೆ : ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುವ ಹಿನ್ನಲೆ ಅಂಗಡಿ ಮಾಲೀಕರು ಪುಟ್ ಬಾತ್ ಆವರಿಸಿಕೊಳ್ಳಬಾರದು ಜೊತೆಗೆ ಇನ್ನಿತರರು ಸಹ ಸಹಕಾರ ನೀಡಬೇಕು ಅದಕ್ಕಿಂತ ಮುಖ್ಯವಾಗಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ನಮ್ಮ ವಾಹನಕ್ಕೆ ಹಾಕಬೇಕು ಆ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎನ್ನುವ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.