ದೇವಾಲಯವನ್ನು ಮೂಲ ರೂಪದಲ್ಲಿಯೇ ಉಳಿಸುವ ಜವಾಬ್ದಾರಿ ಹೊತ್ತ ಯುನೇಸ್ಕೋ । ನಿರ್ದೇಶಕ ಲೆಜಾರೆ ಎಲೌಂಡು ಅಸ್ಸೋಮೋ ಮಾಹಿತಿ
ಪ್ರತಿನಿಧಿ ವರದಿ ಹಳೇಬೀಡು
ಹೊಯ್ಸಳರ ಶಿಲ್ಪಕಲೆಗಳಿಂದ ಇಡೀ ಜಗತ್ತಿನ ಕಲಾ ರಸಿಕರನ್ನು ಗಮನ ಸೆಳೆದಿರುವ ಬೇಲೂರು-ಹಳೇಬೀಡು ದೇವಾಲಯಗಳನ್ನು ಅವುಗಳ ಮೂಲ ರೂಪದಲ್ಲಿಯೇ ಉಳಿಸುವ ಜವಾಬ್ದಾರಿಯನ್ನು ಯುನೇಸ್ಕೋ ತಂಡ ಮಾಡಲಿದೆ ಎಂದು ಯುನೇಸ್ಕೋ ತಂಡದ ನಿರ್ದೇಶಕ ಲೆಜಾರೆ ಎಲೌಂಡು ಅಸ್ಸೋಮೋ ತಿಳಿಸಿದರು.
ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ವಿಶ್ವ ಪ್ರಸಿದ್ಧ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅದರಲ್ಲೂ ಹಾಸನ ಜಿಲ್ಲೆಯ ಹಳೇಬೀಡು-ಬೇಲೂರು ದೇವಾಲಯ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸೇರಲು ಎಲ್ಲ ರೀತಿಯ ಅರ್ಹತೆ ಹೊಂದಿರುವ ದೇವಾಲಯ. ಈ ದೇವಾಲಯಕ್ಕೆ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ನಂತರ ಭೇಟಿ ನೀಡಿರುವುದು ಸಂತೋಷ ತಂದಿದೆ ಎಂದರು.
ಪಾರಂಪರಿಕ ತಾಣಗಳ ರಕ್ಷಣೆಯ ಅತ್ಯವಶ್ಯಕ: ಈ ಭೇಟಿಯ ಉದ್ದೇಶ ಹಿಂದಿನವರು ಉಳಿಸಿದ ದೇವಾಲಯಗಳು, ಕಟ್ಟಡಗಳು ಹಾಗೂ ಸಂಸ್ಕೃತಿಯ ಪರಂಪರೆಯನ್ನು ಕಾಪಾಡುವುದು ಮತ್ತು ಸಂರಕ್ಷಣೆ ಮಾಡುವುದು. ಜತೆಗೆ, ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಯುನೇಸ್ಕೋ ತಂಡ ಭೇಟಿ ನೀಡಿದೆ ಎಂದು ಲೆಜಾರೆ ಎಲೌಂಡು ತಿಳಿದರು.
ಸ್ಥಳೀಯರ ಸಹಕಾರ ಅತ್ಯಗತ್ಯ: ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಳೇಬೀಡು ದೇವಾಲಯದ ಸಂರಕ್ಷಣೆ ಪುರಾತತ್ವ ಇಲಾಖೆಯ ಅಧಿಕಾರಿಗಳ ಜತೆಗೆ, ಸ್ಥಳೀಯರು ಉಳಿಸುವ ಬೆಳೆಸಿ ಅವುಗಳನ್ನು ಗೌರವಿಸುವ ಮತ್ತು ಕಾಪಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆಗ ಪಾರಂಪರಿಕ ತಾಣಗಳು ಅಭಿವೃದ್ಧಿಯನ್ನು ಕಾಣುತ್ತವೆ. ಶತಮಾನಗಳು ಕಳೆದರೂ ಅವುಗಳು ಬಿಂಬಿತವಾಗುತ್ತಿರಬೇಕು. ಈ ದೃಷ್ಠಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರೇರಣೆ ಹಾಗೂ ಇಚ್ಚಾಶಕ್ತಿ ಇಷ್ಟೇಲ್ಲ ಬೆಳವಣಿಗೆಗೆ ಕಾರಣ. ದೇವಾಲಯಗಳ ಸಂಪ್ರದಾಯ ಯತಾಸ್ಥಿತಿಯಲ್ಲಿ ಉಳಿಸುವುದು ಆದ್ಯ ಕರ್ತವ್ಯ. ದೇವಾಲಯದ ಸಾಂಪ್ರದಾಯಿಕ ಆಚರಣೆಗಳ ಸಂಪ್ರದಾಯಗಳು, ಸಂಸ್ಕೃತಿ ಇವೆಲ್ಲವನ್ನೂ ಗೌರವಿಸುವುದು ನಮ್ಮ ಕರ್ತವ್ಯ, ಜನರ ನಂಬಿಕೆ ಭಾವನೆಗಳಿಗೆ ಪೂರಕವಾಗಿ ನಡೆದುಕೊಳ್ಳಲು ಯಾವುದೇ ತೊಂದರೆ ಇಲ್ಲವೆಂದು ಲೆಜಾರೆ ಎಲೌಂಡು ಹೇಳಿದರು.
ಪ್ರಾರಂಪರಿಕ ತಾಣಗಳು ಮಾನವೀಯ ಮೌಲ್ಯಗಳ ಪ್ರತೀಕ:
ಯುನೇಸ್ಕೋ ತಂಡ ಸಹಾಯಕ ನಿರ್ದೆಶಕಿ ಜ್ಯೋತಿ ಅಗ್ರಹಾರ ಮಾತನಾಡಿ, ದೇವಾಲಯಗಳು ನಮ್ಮ ಆಸ್ಮಿತೆ. ಅವುಗಳನ್ನು ರಕ್ಷಣೆ ಮಾಡುವುದು ಇಲಾಖೆಯ ಜವಾಬ್ದಾರಿ. ಅದನ್ನು ನಾವು ಮಾಡಿದ್ದೇವೆ. ಜತೆಗೆ, ಅದರ ಸಾಂಪ್ರಾಯಿಕ ಆಚರಣೆಗಳನ್ನು ಉಳಿಸಲು ರಕ್ಷಿಸಲು ನಾವು ಬದ್ದರಿದ್ದೇವೆ ಎಂದು ತಿಳಿಸಿದರು.
ಹಳೇಬೀಡು ಬೇಲೂರು ದೇವಾಲಯಗಳ ಅಭಿವೃದ್ಧಿಗೆ ಶಾಸಕರ ಮನವಿ:
ವಿಶ್ವ ಭೂಪಟದಲ್ಲಿ ಹೆಸರು ಮಾಡಿರುವ ಹಾಗೂ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಳೇಬೀಡು ಬೇಲೂರು ದೇವಾಲಯಗಳನ್ನು ಹಾಗೂ ದೇವಾಲಯವಿರುವ ಪಟ್ಟಣಗಳು ಯಾವುದೇ ಅಭಿವೃದ್ದಿ ಕಂಡಿಲ್ಲ. ಪ್ರವಾಸೋದ್ಯಮದ ಸೌಕರ್ಯಗಳಿಲ್ಲ, ಅಭಿವೃದ್ದಿ ಅಗತ್ಯವಿದ್ದು, ಉಜೈನಿ, ಮಹಾಬಲೇಶ್ವರ ದೇವಾಲಯಗಳ ಅಭಿವೃದ್ಧಿ ರೀತಿಯಲ್ಲಿಯೇ ಹಳೇಬೀಡು ಬೇಲೂರಿಗೆ ದೇವಾಲಯದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಯಾತ್ರೀನಿವಾಸ, ಸುಸರ್ಜಿತ ರಸ್ತೆ, ವಿದ್ಯುತ್ ಹಾಗೂ ಇನ್ನಿತರ ಮೂಲಸೌಲಭ್ಯಗಳು ಅವಶ್ಯಕತೆ ಇದೆ. ಈ ವಿಷಯವಾಗಿ, ಪ್ರಧಾನ ಮಂತ್ರಿಗೂ ಮನವಿಪತ್ರ ಸಲ್ಲಿಸಲಿದ್ದೇವೆ ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ಪುರಾತತ್ವ ಇಲಾಖೆಯ ಅಧ್ಯಕ್ಷ ಬಿಪಿನ್ ನೇಗಿ, ಹಾಸನ ಅಧಿಕಾರಿ ಗೌತಮ್, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಶಿಲ್ಪ, ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿ ವೀರ ರಾಘವನ್, ಕುಮಾರ್, ಛಾಯಾಗ್ರಾಹಕ ಬಸವರಾಜು, ಬೇಲೂರು ತಹಸೀಲ್ದಾರ್ ಮಮತಾ, ಇ.ಒ.ಸತೀಶ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ್, ಪಿಡಿ.ಒ.ವಿರುಪಾಕ್ಷ, ದೇವಾಸ್ಥನದ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಡಾ. ಎಮ್.ಸಿ.ಕುಮಾರ್, ಅರ್ಚಕರಾದ ಸುಬ್ರಮಣ್ಯ, ಉದಯ್ ಕುಮಾರ್ ಮುಂತಾದವರು ಹಾಜರಿದ್ದರು.
ಯುನೇಸ್ಕೋ ತಂಡದವರಿಗೆ ಸ್ಥಳೀಯ ಮಾರ್ಗದರ್ಶೀ ರಾಘವೇಂದ್ರ(ರಘು) ಫ್ರೆಂಚ್ ಭಾಷೆಯಲ್ಲಿ ದೇವಾಲಯದ ಮಾಹಿತಿ ನೀಡಿದರು.