ಬಿಳಿ ಪಂಚೆ, ಶರ್ಟ್ ತೊಟ್ಟು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗದ್ದೆಗೆ ಇಳಿದು ನಾಟಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಗದ್ದೆಯೊಂದರಲ್ಲಿ, ಸಚಿವ ಹೆಚ್ ಡಿ ಕಮಾರಸ್ವಾಮಿ ಕೆಸರು ಗದ್ದೆಯೊಳಗೆ ಇಳಿದು, ಕೈಯಲ್ಲಿ ಭತ್ತದ ಸಸಿ ಹಿಡಿದು ನಾಟಿಯನ್ನು ಮಾಡಿದ್ದಾರೆ.
ಪಾಂಡವಪುರ ತಾಲೂಕಿನ, ಅರಳಕುಪ್ಪೆ ಗ್ರಾಮದಲ್ಲಿ ರಾಶಿ ಪೂಜೆಯನ್ನ ಸಲ್ಲಿಸಿದ ಹೆಚ್ಡಿಕೆ ಸಾಮಾನ್ಯ ರೈತನಂತೆ ಗದ್ದೆಗೆ ಸರಾಗವಾಗಿ ಇಳಿದು, ಭತ್ತದ ನಾಟಿಯನ್ನು ಮಾಡಿದ್ದಾರೆ. ನಾಟಿ ವೇಳೆ ರೈತ ಮಹಿಳೆಯರು ಹಿಮ್ಮೇಳದಲ್ಲಿ ಸೋಬಾನೆ ಪದ ಹೇಳುವ ಮೂಲಕ ಹೆಚ್ಡಿಕೆಗೆ ಪ್ರೋತ್ಸಾಹವನ್ನ ನೀಡಿದ್ದಾರೆ. ರೈತರು, ಮಹಿಳೆಯರ ಜೊತೆಗೂಡಿ ಭತ್ತ ನಾಟಿ ಮಾಡಿದ ಕೇಂದ್ರ ಸಚಿವರಿಗೆ ಪುತ್ರ ನಿಖಿಲ್ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಮತ್ತು ಗ್ರಾಮಸ್ಥರು ಸಾಥ್ ನೀಡಿದರು.
ಭತ್ತ ನಾಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮತನಾಡಿದ ಹೆಚ್ ಡಿ ಕುಮಾರಸ್ವಾಮಿ ತಮ್ಮ ಹಿಂದಿನ ದಿನಗಳನ್ನು ನೆನೆಸಿಕೊಂಡು ಭಾವುಕರಾದರು. ನಮ್ಮ ರೈತರು ಬಹಳ ಸ್ವಾಭಿಮಾನಿ ಜೀವಿಗಳು ಹಾಗೂ ಸತ್ಯವಂತರು ಎಂದರು. ಚಿಕ್ಕವನಿಂದಲೂ ನಾನು ರೈತಾಪಿ ವರ್ಗದ ಜೊತೆಗೆ ಬೆಳೆದವನು, ಅಚಾನಕ್ಕಾಗಿ ರಾಜಕೀಯ ಪ್ರವೇಶಿಸಿ ಇಂದು ಈ ಮಟ್ಟದಲ್ಲಿ ಇದ್ದೇನೆ. ಆದರೆ ಹಿಂದಿನ ದಿನಗಳನ್ನು ಮರೆಯಲು ಸಾಧ್ಯವಿಲ್ಲ, ಇಂದು ನಾನು ನಾಟಿ ಮಾಡಿದ ಘಳಿಗೆ ನನ್ನ ಜೀವನದ ಸುವರ್ಣಾಕ್ಷರಗಳು ಎಂದಿದ್ದಾರೆ.