ಮೈಸೂರು: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಇಂದು ವಾರ್ಡ್ ನಂ. 47ರ ಕುವೆಂಪುನಗರ ವ್ಯಾಪ್ತಿಯಲ್ಲಿ ರ್ಯಾಲಿ ಮೂಲಕ ಮತಬೇಟೆ ನಡೆಸಿದರು. ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಓಬಿಸಿ ಘಟಕದ ಉಪಾಧ್ಯಕ್ಷ ರಾಮಪ್ಪ ರಮೇಶ್ ನೇತೃತ್ವದಲ್ಲಿ ಕುವೆಂಪು ನಗರದ ರಾಘವೇಂದ್ರ ಸ್ವಾಮಿ ಮಠದಿಂದ ರ್ಯಾಲಿ ಹೊರಟಿತು. ನಗರದ 47ನೇ ವಾರ್ಡ್ ನಲ್ಲಿ ಮನೆಮನೆಗೂ ತೆರಳಿ ಸರ್ಕಾರದ ಯೋಜನೆಗಳನ್ನು ತಿಳಿಸುತ್ತಾ ಕಾಂಗ್ರೆಸ್ ನಾಯಕರು ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಸೋಮಶೇಖರ್ ಮೊದಲಿಗೆ ಮೋದಿ ಅಲೆ ಇದೆ ಅಂತ ಅಂದುಕೊಂಡಿದ್ವಿ, ಆದರೆ ಸಿ,ಎಂ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಕೊಟ್ಟ ಐದು ಗ್ಯಾರಂಟಿಗಳಿಂದ ಪ್ರತಿಯೊಬ್ಬರಿಗೂ ಸಾಕಷ್ಟು ಅನುಕೂಲವಾಗಿದೆ. ಜನಗಳ ಉತ್ಸಾಹ ನೋಡಿ ನಮಗೂ ಮತ್ತಷ್ಟು ಉತ್ಸಾಹ ಬಂದಿದೆ. ಈ ಬಾರಿ ರಾಜ್ಯದ ಜನತೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಲಿದ್ದಾರೆ ಎಂದರು. ಇದೇ ವೇಳೆ ರಾಜೀವ್ ಮಾತನಾಡಿ ಸರ್ಕಾರದ ಯೋಜನೆಗಳು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಸಹಾಯವಾಗಲಿದ್ದು, ಧರ್ಮಾಧಾರಿತ ರಾಜಕೀಯಕ್ಕೆ ಬೆಲೆಕೊಡಲ್ಲ ಹಾಗಾಗಿ ಎಂ, ಲಕ್ಷ್ಮಣ್ ಈ ಬಾರಿ ಗೆಲುವು ಶತಸಿದ್ಧ ಎಂದರು.
ರ್ಯಾಲಿಯಲ್ಲಿ ಮಾಜಿ ಶಾಸಕ ಎಂ,ಕೆ ಸೋಮಶೇಖರ್ ,ಮಾಜಿ ಮೂಡಾ ಅಧ್ಯಕ್ಷ ಹೆಚ್ ರಾಜೀವ್, ಮಾಜಿ ಮೇಯರ್ ಟಿಬಿ ಚಿಕ್ಕಣ್ಣ ಸೇರಿದಂತೆ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.