– ಆತಂಕದಲ್ಲೇ ಬದುಕು ದೂಡುತ್ತಿರುವ ಕೆ. ಸಾಲುಂಡಿ ಜನತೆ
– ಮುಡಾ ನಿರ್ಲಕ್ಷ್ಯದಿಂದ ಕಲುಷಿತ ನೀರು ಪೂರೈಕೆ ಆರೋಪ
ಪ್ರತಿನಿಧಿ ವರದಿ ಮೈಸೂರು
ಕಲುಷಿತ ನೀರು ಸರಬರಾಜಿನಿಂದ ಯುವಕನೋರ್ವ ಪ್ರಾಣ ಕಳೆದುಕೊಂಡು, ಹಲವು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಬಳಿಕ ಮೈಸೂರು ತಾಲ್ಲೂಕಿನ ಕೆ. ಸಾಲುಂಡಿ ಗ್ರಾಮದಲ್ಲಿ ಜನರು ಆತಂಕದಲ್ಲೇ ಬದುಕು ದೂಡುತ್ತಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗ್ರಾಮಕ್ಕೆ ಆಗಮಿಸಿ ಧೈರ್ಯ ತುಂಬುವ ಕೆಲಸ ಮಾಡಿದರೂ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸ್ಥಳದಲ್ಲೇ ಮೊಕ್ಕಾಂ ಹೂಡಿ ಸತತವಾಗಿ ಆರೋಗ್ಯ ಪೂರಕ ರಕ್ಷಣಾತ್ಮಕ ಯೋಜನೆಯನ್ನು ತ್ವರಿತಗತಿಯಲ್ಲಿ ಜಾರಿ ಮಾಡಿದರೂ ಗ್ರಾಮದ ಜನತೆ ನೀರು ಕಂಡರೆ ಬೆಚ್ಚುತ್ತಿದ್ದಾರೆ. ಮೇಲ್ನೋಟಕ್ಕೆ ಗ್ರಾಮದಲ್ಲಿ ಎಲ್ಲ ವ್ಯವಸ್ಥೆ ಸರಿ ಇದೆ ಎಂಬಂತೆ ಕಂಡುಬಂದರೂ ಇಲ್ಲಿನ ಜನರ ಮನಸ್ಥಿತಿ ಮಾತ್ರ ಇಂದಿಗೂ ಆತಂಕದಲ್ಲೇ ಇದ್ದಂತೆ ಕಂಡುಬರುತ್ತಿದೆ. ಜಿಲ್ಲಾಡಳಿತ, ಕಂದಾಯ ಮತ್ತು ಆರೋಗ್ಯ ಇಲಾಖೆಯಿಂದ ಗ್ರಾಮಸ್ಥರಿಗೆ ಧೈರ್ಯ ತುಂಬವ ಕೆಲಸ ಮಾಡುತ್ತಿದ್ದರೂ, ಗ್ರಾಮದ ಪರಿಸ್ಥಿತಿ ಯಥಾಸ್ಥಿತಿಗೆ ಬರಲು ಇನ್ನೂ ಕೆಲ ದಿನಗಳೇ ಬೇಕಾಗಬಹುದು ಎಂಬ ವಾತಾವರಣ ಸೃಷ್ಟಿಯಾಗಿದೆ.
ಮುಡಾ ನಿರ್ಲಕ್ಷ್ಯವೇ ಕಾರಣ?:
ಕೆ. ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಿಂದ ಯುವಕ ಮೃತಪಟ್ಟು, ಹಲವು ಮಂದಿ ಅಸ್ವಸ್ಥರಾಗಿರುವ ಘಟನೆಗೆ ಮುಡಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಗ್ರಾಮಸ್ಥರು ಆರೋಪವಾಗಿದೆ. ಸ್ಥಳೀಯರ ಪ್ರಕಾರ ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಸಲುವಾಗಿ 20 ವರ್ಷಗಳ ಹಿಂದೆ ಗ್ರಾಮದಲ್ಲಿ ಬೋರ್ ಕೊರೆಸಿ, ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈಗ್ಗೆ 5 – 6 ವರ್ಷದ ಹಿಂದೆ ಮುಡಾ ವತಿಯಿಂದ ಗ್ರಾಮದಲ್ಲಿ ಹೊಸದಾಗಿ ಯುಜಿಡಿ ಪೈಪ್ಲೈನ್ ಅಳವಡಿಸಲಾಗಿದ್ದು, ಈ ವೇಳೆ 2 ಅಡಿ ಪೈಪ್ ಅಳವಡಿಸುವ ಬದಲು 6 – 8 ಇಂಚಿನ ಪೈಪ್ ಲೈನ್ ಹಾಕಲಾಗಿದೆ. ಅಲ್ಲದೇ ಈ ಯುಜಿಡಿ ಪೈಪ್ಲೈನ್ ಅನ್ನು ಯುಜಿಡಿ ನೀರು ಸಂಗ್ರಹವಾಗುವ ಸಬ್ ಲಿಂಕ್ ಟ್ಯಾಂಕ್ಗೆ ಸಂಪರ್ಕ ಕಲ್ಪಿಸಿಲ್ಲ ಹಾಗೂ ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಬೋರ್ವೆಲ್ಗಿಂತಲೂ ಮುಂದಕ್ಕೆ ಸಂಪರ್ಕ ನೀಡದಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ.
ಯಾವುದೇ ಕ್ರಮವಹಿಸಿರಲಿಲ್ಲ:
ಕೆ. ಸಾಲುಂಡಿ ಹಾಗೂ ಪಕ್ಕದ ನಂಜರಾಜಯ್ಯನಹುಂಡಿ ಗ್ರಾಮಕ್ಕೆ ಹೊಂದುಕೊಂಡಂತೆ ಹಾಕಿರುವ ಯುಜಿಡಿ ಪೈಪ್ಲೈನ್ ಸರಿಪಡಿಸುವಂತೆ ಮುಡಾ ಅಧಿಕಾರಿಗಳಿಗೆ ಈ ಹಿಂದೆಯೂ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಆದರೆ ಮುಡಾ ಅಧಿಕಾರಿಗಳು ಈ ವಿಷಯದಲ್ಲಿ ಯಾವುದೇ ಕ್ರಮವಹಿಸದೆ ನಿರ್ಲಕ್ಷ್ಯ ತೋರಿದ್ದರು. ಇದರಿಂದಾಗಿ ಈಗ ಗ್ರಾಮದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ಯಾಂಕರ್ನಲ್ಲಿ ನೀರು ಪೂರೈಕೆ:
ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಇದೀಗ ಬೋರ್ವೆಲ್ ಮೂಲಕ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇದರ ಬದಲಾಗಿ ಗ್ರಾಮದ ಜನರಿಗೆ ಬೋಗಾದಿ ಪಟ್ಟಣ ಪಂಚಾಯಿತಿ ವತಿಯಿಂದ ಶುದ್ಧಿಕರಿಸಿದ ನೀರನ್ನು ಟ್ಯಾಂಕರ್ ಮೂಲಕ ಉಚಿತವಾಗಿ ಪೂರೈಕೆ ಮಾಡಲಾಗುತ್ತಿದೆ. ಆದರೆ ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿರುವ ನೀರು ಎಷ್ಟು ಸುರಕ್ಷಿತ? ಎಂದು ಗ್ರಾಮದ ಜನತೆ ಹೊಂದಿದ್ದಾರೆ.
ಶಾಶ್ವತ ಪರಿಹಾರ ಕಲ್ಪಿಸಲಿ:
ಈಗಿನ್ನೂ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಈಗಲೇ ಇಂತಹ ಸಮಸ್ಯೆ ಎದುರಾಗಿದೆ. ಮುಂದೆ ಮುಂಗಾರು ಆರಂಭವಾಗಿ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ ಎಂಬ ಆತಂಕ ಇದೀಗ ಕೆ. ಸಾಲುಂಡಿ ಗ್ರಾಮದ ಜನರಲ್ಲಿ ಮನೆ ಮಾಡಿದೆ. ಹೀಗಾಗಿ ಗ್ರಾಮದಲ್ಲಿ ಉಂಟಾಗಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲೇಬೇಕಿದೆ. ಸದ್ಯ ಕೆ. ಸಾಲುಂಡಿ ಹಾಗೂ ಪಕ್ಕದ ನಂಜರಾಜಯ್ಯನ ಹುಂಡಿಯಿಂದ ಅಂದಾಜು ಎರಡೂವರೆ ಸಾವಿರ ಜನಸಂಖ್ಯೆ ಇದ್ದು, ಮುಂದೆ ಗ್ರಾಮದ ಸಮೀಪವಿರುವ ಖಾಸಗಿ ಬಡಾವಣೆಗಳಲ್ಲಿ ಜನಸಂಖ್ಯೆ ಹೆಚ್ಚಾಗಿ ಅಲ್ಲಿನ ಯುಜಿಡಿ ನೀರು ಸಹ ಬೋರ್ವೆಲ್ನೊಂದಿಗೆ ಸೇರ್ಪಡೆಯಾದರೆ ಮತ್ತಷ್ಟು ದೊಡ್ಡ ಅನಾಹುತ ಸಂಭವಿಸಲಿದೆ ಎಂಬುದು ಸ್ಥಳೀಯರ ಆತಂಕ ಹೆಚ್ಚಿಸಿದೆ.
=================
ಬಾಕ್ಸ್
ಯಾರದ್ದೋ ತಪ್ಪಿಗೆ ನಮಗೆ ಶಿಕ್ಷೆ!
ಕಲುಷಿತ ನೀರು ಸರಬರಾಜಿನಿಂದ ಉಂಟಾಗಿರುವ ಸಮಸ್ಯೆಯಿಂದ ಯಾರದ್ದೋ ತಪ್ಪಿಗೆ ನಮಗೆ ಶಿಕ್ಷೆ ಎಂಬಂತಾಗಿದೆ. ಗ್ರಾಮದಲ್ಲಿನ ಯುಜಿಡಿ ಪೈಪ್ಲೈನ್ ಕಾಮಗಾರಿ ಸರಿಯಾಗಿ ಇಲ್ಲದಿರುವುದು ಎಲ್ಲ ಸಮಸ್ಯೆಗೆ ಕಾರಣವಾಗಿದೆ. ಮುಡಾ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ವತಿಯಿಂದ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕಿತ್ತು. ಸದ್ಯಕ್ಕೆ ಪಟ್ಟಣ ಪಂಚಾಯಿತಿಯಲ್ಲಿ ಹೇಳೋರು ಕೇಳೋರು ಯಾರು ಇಲ್ಲದಂತಾಗಿದ್ದು, ಮುಡಾದಿಂದ ಇದನ್ನು ನಿರ್ವಹಣೆ ಮಾಡಬೇಕಿತ್ತಾದರೂ, ಅವರು ಯಾವುದೇ ಕ್ರಮವಹಿಸಿಲ್ಲ ಎಂದು ಗ್ರಾಮದ ನಿವಾಸಿ ಕೆ. ಭೋಜರಾಜ್ ಅವರ ಆರೋಪ.
================
ಈವರೆಗೂ 132 ಪ್ರಕರಣಗಳು ಪತ್ತೆ
ಕಲುಷಿತ ನೀರು ಸೇವನೆಯಿಂದ ಕೆ.ಸಾಲುಂಡಿ ಗ್ರಾಮದಲ್ಲಿ ಈವರೆಗೂ 132 ಮಂದಿಯಲ್ಲಿ ಕಾಲರಾ ಪತ್ತೆಯಾಗಿದೆ. ಕಲುಷಿತ ನೀರು ಕುಡಿದು ಗ್ರಾಮದಲ್ಲಿ ಕನಕರಾಜ್ ಎಂಬ ಯುವಕ ಸಾವಿಗೀಡಾದ ಬೆನ್ನಲ್ಲೇ ಗ್ರಾಮದಲ್ಲಿ ಅಗತ್ಯ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮೇ 20ರಿಂದ ಶುಕ್ರವಾರದವರೆಗೂ ಒಟ್ಟು 132 ಮಂದಿಯಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿದ್ದು, ಇವರುಗಳಿಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
=================