ಪ್ರತಿನಿಧಿ ವರದಿ ಹಾಸನ
ನಗರದ ಹೊರ ವಲಯದ ಗವೇನಹಳ್ಳಿ ಬೈಪಾಸ್ ರಸ್ತೆ ಬಳಿ ಇರುವ ಕಾಮಧೇನು ಸಹಕಾರಿ ವೃದ್ಧಾಶ್ರಮದ ಆವರಣದಲ್ಲಿ ಜೂ.9 ರಂದು ಬೆಳಗ್ಗೆ 10.30ಕ್ಕೆ ಡಾ.ಹೆಬ್ಬಾರ್ ಆಲಯದ ನೂತನ ಕಟ್ಟಡ ಉದ್ಘಾಟನೆ ಮತ್ತು ದಿ.ಗುರುರಾಜು ಹೆಬ್ಬಾರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ಎಂ.ಮಾಧವ ಶೆಣೈ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮೊಹಮ್ಮದ್ ಸುಜೀತಾ, ಮಂಡ್ಯ ಜಿಲ್ಲೆ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್. ನಾಗರಾಜ್, ಸಹಕಾರಿ ಸಂಘಗಳ ನಿರ್ದೇಶಕ ಹೆಚ್.ಸಿ.ಬಸವರಾಜ್, ಸಹಕಾರಿ ಸಂಘಗಳ ಉಪ ನಿರ್ದೇಶಕ ಜಿ.ಆರ್.ವಿಜಯ ಕುಮಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾ ಧಿಕಾರಿ ಕೆ.ಆರ್.ಅನುಪಮಾ, ಜಿಲ್ಲಾ ಮಕ್ಕಳ ರಕ್ಷ ಣಾಧಿಕಾರಿ ಡಿ.ಸಂತೋಷ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಎಚ್.ಪಿ.ಮೋಹನ್ ಇತರರು ಭಾಗವಹಿಸಲಿದ್ದಾರೆ ಎಂದರು.
ಕಾಮಧೇನು ವಿದ್ಯಾಶ್ರಮ ಚೈತನ್ಯ ಮಂದಿರ ವೃದ್ಧಾಶ್ರಮ ಮತ್ತು ಶಿಶುಕೇಂದ್ರ ಅಮೂಲ್ಯ ವಿಶೇಷ ದತ್ತು ಕೇಂದ್ರ ಸಮಾಜಮುಖಿ ಕೆಲಸ ಮಾಡಿಕೊಂಡು ರಾಜ್ಯದ್ಯಾಂತ ಜನಪ್ರಿಯತೆ ಗಳಿಸಿದೆ. ಡಾ.ಗುರುರಾಜ ಹೆಬ್ಬಾರ್ ಅವರು, 100 ಜನ ಸದಸ್ಯರಿಂದ ಸ್ಥಾಪಿತವಾದ ಸಂಸ್ಥೆ ಇಂದು 318 ಷೇರುದಾರರನ್ನು ಹೊಂದಿದೆ.
ಸಂಸ್ಥೆಯ ಹೆಸರಿನಲ್ಲಿ 3 ಎಕರೆ ಜಮೀನು ಖರೀದಿಸಲಾಗಿದೆ. ಉಚಿತ ವೃದ್ಧಾಶ್ರಮದಲ್ಲಿ ಒಟ್ಟು 332 ವೃದ್ಧರು ದಾಖಲಾಗಿದ್ದು, ಪ್ರಸ್ತುತ 43 ಮಂದಿ ಇದ್ದಾರೆ. ಮಾದರಿ ಗೋ ಸಂರಕ್ಷಣೆಗಾಗಿ ಗೋಶಾಲೆ ಸ್ಥಾಪಿಸಿದ್ದು, ಅದರಲ್ಲಿ ಬರುವ ಮೊಸರು, ಮಜ್ಜಿಗೆ ಹಾಗೂ ಬೆಣ್ಣೆಯನ್ನು ಮತ್ತು ವೃದ್ದರಿಗೆ ಉಪಯೋಗಿಸಲಾಗುತ್ತಿದೆ ಎಂದರು.
ವೃದ್ಧರ ಮನ: ಶಾಂತಿಗಾಗಿ ಚೈತನ್ಯ ಗಂಗಾಧರೇಶ್ವರ, ಭೂಮಾತೆ, ಭಾರತಮಾತೆಯ ದೇವಾಲಯ ಉದ್ಘಾಟಿಸಲಾಗಿದೆ. ಈಗಾಗಲೇ ನೂತನ ಕಟ್ಟಡ ಮೊದಲ ಮಹಡಿ, ದಾಸೋಹ ಭವನ ನಿರ್ಮಿಸಲಾಗಿದೆ. ಈವರೆಗೆ 17 ಮಂದಿ ವೃದ್ದರು ದೇಹದಾನ ಮಾಡಲು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿದ್ದಾರೆ. ಒಪ್ಪಿಗೆಯಂತೆ 5 ಜನ ದೇಹ ದಾನ ಮಾಡಿದ್ದಾರೆ. ಸಂಸ್ಥೆಯ ನಿಧಿ ಹೆಚ್ಚಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲು ಹಲವು ಯೋಜನೆ ಹಮ್ಮಿಕೊಳ್ಳುತ್ತಾ ಬರಲಾಗಿದೆ ಎಂದರು.
ಉಪಾಧ್ಯಕ್ಷ ಮುತ್ತತ್ತಿ ರಾಜಣ್ಣ, ಖಜಾಂಚಿ ಎಚ್.ಡಿ.ಶಾಂತಿಪ್ರಸಾದ್, ನಿರ್ದೇಶಕರಾದ ಎಚ್.ಸಿ. ಆನಂದ್ ಬಾಗಡೆ, ಇಂದಿರಾ ಮೂರ್ತಿ, ಎಸ್.ಎಸ್.ಕೃಷ್ಣ ಅಯ್ಯಂಗಾರ್ ಇದ್ದರು.