-ಚುನಾವಣಾಧಿಕಾರಿ ಪಿ.ಎನ್. ರವೀಂದ್ರ ಹೇಳಿಕೆ
ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ಲೋಕಸಭಾ ಕ್ಷೇತ್ರ ಚುನಾವಣೆಗೆ 29 ಅಭ್ಯರ್ಥಿಗಳು ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ 2 ಬ್ಯಾಲೆಟ್ ಯುನಿಟ್ ಗಳನ್ನು ಚುನಾವಣೆಗೆ ಬಳಸಲಾಗುವುದೆಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಲೋಕಸಭಾ ಚುನಾವಣೆ ಸಂಬಂಧ ಕರೆಯಲಾಗಿದ್ದ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾನತಾಡಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಗೆ ಒಟ್ಟು 29 ಅಭ್ಯರ್ಥಿಗಳು ಹಾಗೂ ನೋಟಾ ಇರುವುದರಿಂದ ಚುನಾವಣೆಯಲ್ಲಿ ಎರಡು ಬ್ಯಾಲೆಟ್ ಯುನಿಟ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಒಟ್ಟು 5576 ಬಿ.ಯು, 2788 ಸಿಯು ಹಾಗೂ 3012 ವಿ.ವಿ.ಪಿ.ಎ.ಟಿ ಬಳಸಲಾಗುವುದು. ಚುನಾವಣಾ ಸಾಮಾನ್ಯ ವೀಕ್ಷಕರ ನೇತೃತ್ವದಲ್ಲಿ ಹಾಗೂ ಚುನಾವಣಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಕೈಗೊಂಡು ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳಿಗೆ ಇ.ವಿ.ಎಂ/ಬಿ.ಯು ಮತಯಂತ್ರಗಳನ್ನು ಹಂಚಿಕೆ ಮಾಡಲಾಗುವುದೆಂದು ಚುನಾವಣಾಧಿಕಾರಿಗಳು ತಿಳಿಸಿದರು.
ಚುನಾವಣೆಗೆ ಮತದಾರರ ಪಟ್ಟಿಯಲ್ಲಿ 9,83,775 ಪುರುಷರು, 9,97,306 ಮಹಿಳೆಯರು ಹಾಗೂ ಇತರರು 266 ಸೇರಿದಂತೆ ಒಟ್ಟು 19,81,347 ಮತದಾರರಿದ್ದಾರೆ. ಒಟ್ಟು 420 ಮತದಾರರು ಸೇವಾ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 390 ಪುರುಷರು, 30 ಮಹಿಳೆಯರಿದ್ದಾರೆ. ಇವರಿಗೆ ಈಗಾಗಲೇ ಇ.ಟಿ.ಪಿ.ಬಿ.ಎಂ.ಎಸ್ ತಂತ್ರಾಂಶದಲ್ಲಿ ಇ-ಬ್ಯಾಲೆಟ್ ಪೇಪರನ್ನು ಅಪ್ ಲೋಡ್ ಮಾಡಲಾಗಿದೆ. 2024ರ ಜನವರಿ 22 ನಂತರ ಹೊಸದಾಗಿ ನೋಂದಣಿಯಾಗಿರುವ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ಶೀಘ್ರ ಅಂಚೆ ಮೂಲಕ ಕಳುಹಿಸಲು ಕ್ರಮವಹಿಸಲಾಗಿದೆ ಎಂದರು.
ಮತದಾರರಿಗೆ ಮತಗಟ್ಟೆಯ ವಿವರ, ಮತದಾನದ ದಿನಾಂಕ, ಸಮಯ ಹಾಗೂ ಮತದಾರರ ವಿವರವುಳ್ಳ ಮತದಾರರ ಮಾಹಿತಿ ಚೀಟಿಚೀಟಿಯನ್ನು ಮತದಾನದ ದಿನಕ್ಕಿಂತ ಐದು ದಿನ ಮುಂಚಿತವಾಗಿ ಬಿ.ಎಲ್.ಓ ಗಳ ಮುಖಾಂತರ ವಿತರಿಸಲಾಗುವುದು. ಒಟ್ಟು 2326 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ನಗರ ಪ್ರದೇಶದಲ್ಲಿ 536 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 1790 ಇರಲಿವೆ ಎಂದು ಚುನಾವಣಾಧಿಕಾರಿ ವಿವರಿಸಿದರು.
ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 1639 ಮತದಾರರು ಮತ್ತು 763 ವಿಕಲಚೇತನ ಮತದಾರರು ಸೇರಿದಂತೆ ಒಟ್ಟು 2402 ಮತದಾರರು ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಇವರಿಗೆ ಏಪ್ರಿಲ್ 13 ರಿಂದ 18 ರವರೆಗೆ ಐದು ದಿನಗಳ ಕಾಲ ಮನೆ ಮತದಾನ ನಡೆಯಲಿದೆ ಎಂದು ತಿಳಿಸಿದರು.
ಅಗತ್ಯ ಸೇವೆಯಡಿ ಬರುವ 782 ಮತದಾರರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ದೇವನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿ ಏಪ್ರಿಲ್ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ನಿರ್ವಹಣಾ ವಹಿಯನ್ನು ಏ. 12, 18 ಹಾಗೂ 24 ರಂದು ಚುನಾವಣಾ ವೆಚ್ಚ ವೀಕ್ಷಕರು ಪರಿಶೀಲಿಸಲಿದ್ದಾರೆ. ಮತದಾನದ ಪೂರ್ವ 48 ಗಂಟೆಗಳಲ್ಲಿ ಧ್ವನಿವರ್ಧಕಗಳ ಬಳಕೆ ನಿಷೇಧಿಸಲಾಗಿದೆ. ಬಹಿರಂಗ ಪ್ರಚಾರವು ಏಪ್ರಿಲ್ 24 ರಂದು ಸಂಜೆ 6 ಗಂಟೆಗೆ ಕೊನೆಗೊಳ್ಳಲಿದ್ದು, ಈ ಅವಧಿಯ ನಂತರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ವ್ಯಾಪ್ತಿಯಿಂದ ಹೊರಗೆ ಹೋಗಬೇಕಿದೆ. ಈ ಕುರಿತು ಚುನಾವಣಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದರು.
ದೇವನಹಳ್ಳಿ ತಾಲೂಕಿನ ಮುದುಗುರ್ಕಿಯ ನಾಗಾರ್ಜುನ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ ಎಣಿಕಾ ಕೇಂದ್ರವಾಗಿದ್ದು, ಇಲ್ಲಿ ಏಪ್ರಿಲ್ 26 ರಂದು ಮತದಾನ ಮುಕ್ತಾಯವಾದ ನಂತರ ಮತ ಚಲಾಯಿಸಲಾಗಿರುವ ಇ.ವಿ.ಎಂ. ಗಳನ್ನು ಭದ್ರತಾ ಕೊಠಡಿಯಲ್ಲಿ ಭದ್ರಪಡಿಸಿ ಕೇಂದ್ರ ಮೀಸಲು ಪೊಲೀಸ್ ಪಡೆಗೆ ಹಸ್ತಾಂತರಿಸಲಾಗುವುದು. ಇಲ್ಲಿಯೂ ಜೂನ್ 4 ರವರೆಗೆ ಅಭ್ಯರ್ಥಿಗಳ ಪರ ಏಜೆಂಟ್ ನಿಯೋಜಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದರು.
ಚುನಾವಣಾ ಕರ್ತವ್ಯ ಅಧಿಕಾರಿ, ಸಿಬ್ಬಂದಿಯವರಿಗೆ ಮತ ಚಲಾವಣೆಗೆ ಮಾಡಲಾಗಿರುವ ವ್ಯವಸ್ಥೆಗಳು, ಸೌಲಭ್ಯ ಕೇಂದ್ರ ಇನ್ನಿತರ ವಿವರಗಳನ್ನು ಸಭೆಯಲ್ಲಿ ವಿವರಿಸಲಾಯಿತು.
ಬೆಂಗಳೂರು ಗ್ರಾಮಾಂತ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧ, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಇತರೆ ಸಹಾಯಕ ಚುನಾವಣಾಧಿಕಾರಿಗಳು, ಅಭ್ಯರ್ಥಿಗಳು, ಅವರ ಪರ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.