ಪ್ರತಿನಿಧಿ ವರದಿ ಹೊಸೂರು
ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ಪಶುಸಂಗೋಪನೆ ಇಲಾಖೆ ವತಿಯಿಂದ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನಕ್ಕೆ ರೈತರು ಸಹಕಾರ ನೀಡಬೇಕೆಂದು ಕುಪ್ಪೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಿಕ್ಕಕೊಪ್ಪಲು ಡಿ.ಪುನೀತ್ ಮನವಿ ಮಾಡಿದ್ದಾರೆ.
ಏ. 3೦ರವರೆಗೆ ಕಾಲುಬಾಯಿ ಜ್ವರ ಲಸಿಕೆ ಅಭಿಯಾನ ನಡೆಯಲಿದ್ದು, ರೈತರು ತಾವು ಸಾಕಿರುವ ಹಸು ,ಎತ್ತು, ಎಮ್ಮೆ, ಹೋರಿಗಳ ಆರೋಗ್ಯ ಕಾಪಾಡಲು ಈ ಲಸಿಕೆ ಹಾಕಿಸುವ ಮೂಲಕ ರಾಸುಗಳ ರಕ್ಷಣೆಗೆ ಮುಂದಾಗುವಂತೆ ಕೋರಿದ್ದಾರೆ.
ರೈತರಿಗೆ ಆರ್ಥಿಕ ಸಂಕಷ್ಟವನ್ನು ಮಾಡುವ ಮಾರಕ ರೋಗವಾದ ಕಾಲುಬಾಯಿ ಜ್ವರ ರೋಗದ ಲಸಿಕೆಯನ್ನು ಮೂರು ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ, ರೈತ ಬಾಂಧವರು ಹಾಕಿಸಿ ರಾಸುಗಳಲ್ಲಿ ಕಂಡುಬರುವ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಮತ್ತು ಹಾಲಿನ ಇಳುವರಿ ಕಡಿಮೆಯಾಗುವುದನ್ನು ತಪ್ಪಿಸ ಬೇಕು ಎಂದಿದ್ದಾರೆ.
ಕೆಲವರು ಈ ಲಸಿಕೆ ಹಾಕಿಸಿದರೆ ಹಾಲು ಉತ್ಪಾದನೆ ಕಡಿಮೆ ಆಗಲಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದು ಇದರ ಬಗ್ಗೆ ತಲೆಕೆಡಿಸಿ ಕೊಳ್ಳದೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಎಲ್ಲ ರೈತ ಬಾಂಧವರು ಕಾಲುಬಾಯಿ ಜ್ವರ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮೆಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಪಶುಸಂಗೋಪನೆ ಇಲಾಖೆಗೆ ಸಹಕಾರ ನೀಡುವಂತೆ ಚಿಕ್ಕಕೊಪ್ಪಲು ಡಿ. ಪುನೀತ್ ಮನವಿ ಮಾಡಿದ್ದಾರೆ.