- ಪ್ರತಿನಿಧಿ ಫಾಲೋಅಪ್
ಪ್ರತಿನಿಧಿ ವರದಿ ತುಮಕೂರು
ಪಾವಗಡ ತಾಲೂಕು ವೈ.ಎನ್. ಹೊಸಕೋಟೆ ಗ್ರಾಮದಲ್ಲಿ ನೆಲೆಸಿರುವ ಆಂದ್ರಪ್ರದೇಶ ಮೂಲದವರು, ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ಮೀಸಲಾತಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡಿರುವ ಕುರಿತು ಉಪ ತಹಸೀಲ್ದಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸುಳ್ಳು ಜಾತ್ರಿ ಪ್ರಮಾಣಪತ್ರ: ಗಡಿಯಲ್ಲಿ ವಲಸೆಯೇ ಅಸ್ತ್ರ ಎಂಬ ಶೀರ್ಷಿಕೆಯಡಿ ಪ್ರತಿನಿಧಿ ಪತ್ರಿಕೆಯ ಜು. 4ರ ಸಂಚಿಕೆಯ ಮುಖಪುಟದಲ್ಲಿ ವಿಸ್ತೃತ ಮತ್ತು ವಿಶೇಷ ವರದಿ ಪ್ರಕಟಗೊಂಡಿತ್ತು. ಅಲ್ಲದೆ, ಈ ಕುರಿತು ಪತ್ರಿಕೆ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪಾವಗಡ ತಹಸೀಲ್ದಾರ್ ಡಿ.ಎನ್.ವರದರಾಜು ಅವರು, ಹೊಸಕೋಟೆ ಉಪತಹಸೀಲ್ದಾರ್ಗೆ ಪತ್ರ ಬರೆದು, ಜರೂರಾಗಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿದ್ದರು.
ತಹಸೀಲ್ದಾರ್ ಸೂಚನೆ ಮೇರೆಗೆ ಉಪತಹಸೀಲ್ದಾರ್ [ಪ್ರಭಾರ] ಕಿರಣ್ ಕುಮಾರ್ ಅವರು ವೈ.ಎನ್. ಹೊಸಕೋಟೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಂಧ್ರಪ್ರದೇಶದಲ್ಲಿ ಜಂಗಾಲರು ಎಂದು ಕರೆಯಲಾಗುವ ಹಿಂದುಳಿದ ವರ್ಗದವರು, ಅಲ್ಲಿಂದ ವಲಸೆ ಬಂದು ವೈ.ಎನ್.ಹೊಸಕೋಟೆಯ ಎ3 ಬ್ಲಾಕ್ ನಲ್ಲಿ ನೆಲೆಸಿದ್ದು, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬರುವ ಸುಡುಗಾಡುಸಿದ್ದ ಎಂಬ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು ಮೀಸಲಾತಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಉಪತಹಸೀಲ್ದಾರ್ ಕಿರಣ್ ಕುಮಾರ್ ಮಹಜರು ನಡೆಸಿ, ಮಾಹಿತಿ ಸಂಗ್ರಹಿಸಿದರು.
ಈ ವೇಳೆ ಜಾತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಹದಿನೈದು ದಿನಗಳ ಒಳಗೆ ಸಲ್ಲಿಸಬೇಕು ಎಂದು ಸಂಬಂಧಪಟ್ಟವರಿಗೆ ಸೂಚನೆ ನೀಡಿದ ಉಪ ತಹಸೀಲ್ದಾರ್, ಇದರ ಮಾಹಿತಿಯನ್ನು ತಹಸೀಲ್ದಾರ್ ಗೆ ನೀಡಿದ್ದಾರೆ ಎನ್ನಲಾಗಿದೆ.
ಸುಡುಗಾಡುಸಿದ್ದ ಜಾತಿ ಪ್ರಮಾಣಪತ್ರವನ್ನು ಬಳಸಿಕೊಂಡು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಕೆ.ಎನ್.ಶಂಕರಯ್ಯ ಅವರನ್ನೂ ಕಚೇರಿಗೆ ಕರೆಸಿಕೊಂಡ ಅಧಿಕಾರಿಗಳು, ಅವರ ಮೂಲ ದಾಖಲೆಗಳನ್ನು ಒದಗಿಸುವಂತೆ ಮತ್ತು ಈ ವಿಷಯದಲ್ಲಿ ವಿಳಂಬ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ, ಅಧಿಕಾರಿಗಳು ಮಹಜರು ನಡೆಸಿದ ಸಂದರ್ಭದಲ್ಲಿ ಮಾಹಿತಿ ನೀಡಿದ ಸ್ಥಳೀಯರು, ತಮ್ಮ ಮೂಲಸ್ಥಳ ಕೂಡ್ಲಗಿ ತಾಲೂಕಿನ ಬಡ್ಲಡಕೆ ಗ್ರಾಮವೆಂದು ತಿಳಿಸಿದ್ದಾರೆ. ಅಲ್ಲಿಂದ ತಮ್ಮ ಪೂರ್ವಿಕರು ಆಂದ್ರಪ್ರದೇಶದ ಕರಿಗಾನಪಲ್ಲಿಗೆ ತೆರಳಿ ಇಪ್ಪತ್ತು ವರ್ಷಗಳ ಕಾಲ ನೆಲೆಸಿದ್ದರು. ಮೂವತ್ತು ವರ್ಷಗಳ ಹಿಂದೆ ಮತ್ತೆ ಅಲ್ಲಿಂದ ವೈ.ಎನ್. ಹೊಸಕೊಟೆಗೆ ಬಂದು ನೆಲೆಸಿರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
————–
ಕೋಟ್
ತಹಸೀಲ್ದಾರ್ ಸೂಚನೆಯಂತೆ ನಾನು ಮತ್ತು ಗ್ರಾಮಲೆಕ್ಕಿಗರು ವೈ.ಎನ್.ಹೊಸಕೋಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದೇವೆ. ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಅವರ ಮೂಲ ವಾಸಸ್ಥಳದ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸುವಂತೆ ತಿಳಿಸಿದ್ದೇವೆ. ಅದಕ್ಕಾಗಿ ಕಾಲಾವಕಾಶ ಕೋರಿದ್ದಾರೆ. ಅದನ್ನು ಪರಿಗಣಿಸಿ, 15 ದಿನಗಳ ಅವಕಾಶ ನೀಡಿದ್ದೇವೆ. ಅಂತೆಯೆ, ಅವರು ನೀಡುವ ದಾಖಲೆಗಳ ನೈಜತೆ ಪರಿಶೀಲಿಸಿ, ಅವರ ಮೂಲಸ್ಥಳಕ್ಕೂ ತೆರಳಿ ಮಾಹಿತಿ ಸಂಗ್ರಹಿಸಿದ ನಂತರ ಸಂಬಂಧಪಟ್ಟವರಿಗೆ ವರದಿ ಸಲ್ಲಿಸುತ್ತೇವೆ.
-ಕಿರಣ್ ಕುಮಾರ್, ಉಪತಹಸೀಲ್ದಾರ್ [ಪ್ರಭಾರ] ವೈ.ಎನ್. ಹೊಸಕೋಟೆ