ಜಮ್ಮು-ಕಾಶ್ಮೀರ ವಿರುದ್ಧದ ಬೃಹತ್ ಗೆಲುವಿನ ಹುಮ್ಮಸ್ಸಿನಲ್ಲಿರುವ 2 ಬಾರಿ ಚಾಂಪಿಯನ್ ಕರ್ನಾಟಕ, 2023-2ರ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದ್ದು, ಶನಿವಾರ ಉತ್ತರಾಖಂಡ ಸವಾಲು ಎದುರಿಸಲಿದೆ.
2019-20ರ ಬಳಿಕ ಎದುರಿಸುತ್ತಿರುವ ಪ್ರಶಸ್ತಿ ಬರವನ್ನು ನೀಗಿಸುವ ನಿಟ್ಟಿನಲ್ಲಿ ಈ ಸಲ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಮಯಾಂಗ್ ಅಗರ್ವಾಲ್ ನಾಯಕತ್ವದ ಕರ್ನಾಟಕ ಆರಂಭಿಕ ಪಂದ್ಯದಲ್ಲಿ ಕಾಶ್ಮೀರವನ್ನು 222 ರನ್ಗಳಿಂದ ಬಗ್ಗುಬಡಿದಿದೆ. ಇದರೊಂದಿಗೆ ರಾಜ್ಯತಂಡ ಉತ್ತಮ ನೆಟ್ ರನ್ರೇಟ್ನೊಂದಿಗೆ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಮತ್ತೊಂದು ಜಯದ ಮೂಲಕ ನಂ.1 ಸ್ಥಾನದಲ್ಲೇ ಮುಂದುವರಿಯುವ ಕಾತರದಲ್ಲಿದೆ.
ಕಾಶ್ಮೀರ ವಿರುದ್ಧ ಅಬ್ಬರದ ಶತಕ ಸಿಡಿಸಿದ್ದ ಮಯಾಂಕ್ ಹಾಗೂ ಸಿದ್ಧಾರ್ಥ್ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದ್ದು, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ ಅವಕಾಶವನ್ನು ಬಾಚಿಕೊಳ್ಳುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿದ್ವತ್ ಕಾವೇರಪ್ಪ, ವೈಶಾಖ್, ವಾಸುಕಿ ಕೌಶಿಕ್, ಸುಚಿತ್, ಗೌತಮ್ ಎದುರಾಳಿಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.
ಮತ್ತೊಂದೆಡೆ ಉತ್ತರಾಖಂಡ ಆರಂಭಿಕ ಪಂದ್ಯದಲ್ಲಿ ಹರ್ಯಾಣ ವಿರುದ್ಧ 6 ವಿಕೆಟ್ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಈ ಬಾರಿ ಕರ್ನಾಟಕಕ್ಕೆ ಶಾಕ್ ನೀಡುವ ಮೂಲಕ ಗೆಲುವಿನ ಹಾದಿ ಕಂಡುಕೊಳ್ಳುವ ನಿರೀಕ್ಷೆಯಲ್ಲಿದೆ.
ಪಂದ್ಯ: ಬೆಳಗ್ಗೆ 9ಕ್ಕೆ