ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದೆ. ಶನಿವಾರ ‘ಸಿ’ ಗುಂಪಿನ 2ನೇ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಉತ್ತರಾಖಂಡ ವಿರುದ್ಧ 52 ರನ್ ಜಯ ಲಭಿಸಿತು. ಇದರ ಹೊರತಾಗಿಯೂ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ 7 ವಿಕೆಟ್ಗೆ 284 ರನ್ ಕಲೆಹಾಕಿತು. ಆರಂಭಿಕ ಪಂದ್ಯದಲ್ಲಿ ಅಬ್ಬರಿಸಿದ್ದ ಆರಂಭಿಕರಾದ ಮಯಾಂಕ್(00) ಹಾಗೂ ಸಮರ್ಥ್(11) ಬೇಗನೇ ಔಟಾದರು. ಆದರೆ ದೇವದತ್ ಪಡಿಕ್ಕಲ್(117) ಭರ್ಜರಿ ಶತಕ ಸಿಡಿಸಿದರೆ, ನಿಕಿನ್ ಜೋಸ್ 72, ಮನೀಶ್ ಪಾಂಡೆ 56 ರನ್ ಗಳಿಸಿ ತಂಡ ದೊಡ್ಡ ಮೊತ್ತ ಕಲೆಹಾಕಲು ನೆರವಾದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಉತ್ತರಾಖಂಡ 9 ವಿಕೆಟ್ಗೆ 232 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರಾಜ್ಯದ ವೇಗಿಗಳು ಮತ್ತೆ ಎದುರಾಳಿ ಬ್ಯಾಟರ್ಗಳನ್ನು ಕಾಡಿದರು. ಉತ್ತರಾಖಂಡ 136ಕ್ಕೆ 7 ವಿಕೆಟ್ ಕಳೆದುಕೊಂಡರೂ ಕುನಾಲ್ ಚಂಡೇಲಾ 98 ರನ್ ಸಿಡಿಸಿ ತಂಡದ ಸೋಲಿನ ಅಂತರ ಕಡಿಮೆಗೊಳಿಸಿದರು. ವಾಸುಕಿ ಕೌಶಿಕ್ 4 ವಿಕೆಟ್ ಕಿತ್ತರು. ರಾಜ್ಯ ತಂಡ 3ನೇ ಪಂದ್ಯದಲ್ಲಿ ಸೋಮವಾರ ಡೆಲ್ಲಿ ವಿರುದ್ಧ ಸೆಣಸಾಡಲಿದೆ.
ಸ್ಕೋರ್: ಕರ್ನಾಟಕ 50 ಓವರಲ್ಲಿ 284/7 (ಪಡಿಕ್ಕಲ್ 117, ನಿಕಿನ್ 72, ಅಗ್ರಿಮ್ 3-45), ಉತ್ತರಾಖಂಡ 50 ಓವರಲ್ಲಿ 232/9 (ಕುನಾಲ್ 98, ಜೀವನ್ಜೋತ್ 46, ಕೌಶಿಕ್ 4-30)