ಪಿಎಸ್ಐ ಹಗರಣದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಅವರ ಕೈವಾಡವಿದೆ ಎಂಬ ಶಂಕೆ ಇದೆ. ಅದೇ ರೀತಿ ಡಿಸಿಸಿ ಬ್ಯಾಂಕ್ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಸಂಸದರ ಪಾಲಿದೆ ಎನ್ನಲಾಗುತ್ತಿದೆ. ಈ ಎರಡೂ ಪ್ರಕರಣವನ್ನು ಸರ್ಕಾರ ತನಿಖೆ ಮಾಡಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್ಐ ಹಗರಣದ ಕಿಂಗ್ ಪಿನ್ ವಿಜಯೇಂದ್ರ. ಆ ಸಮಯದಲ್ಲಿ ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಿಲ್ಲ. ಇನ್ನು ಶಿವಮೊಗ್ಗ ಡಿಸಿಸಿ ಬ್ಯಾಂಕಿನಲ್ಲಿಯೂ ಹಗರಣ ನಡೆದಿದೆ. ಒಂದೊಂದು ಹುದ್ದೆ ಕೊಡಲು ₹40 ಲಕ್ಷ ಲಂಚ ಪಡೆದಿದ್ದಾರೆ. ಲಂಚದ ಹಣ ಪಡೆಯಲು ಉದ್ಯೋಗಿಗಳಿಗೆ ಬ್ಯಾಂಕ್ನಲ್ಲೇ ಸಾಲ ಕೊಡಿಸಿದ್ದಾರೆ. ಈ ಹಗರಣದಲ್ಲಿ ಸಂಸದ ರಾಘವೇಂದ್ರರ ಪಾತ್ರವೂ ಇದೆ. ಈಗ ನಮ್ಮದೇ ಸರ್ಕಾರ ಇದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.