ಪ್ರತಿನಿಧಿ ವರದಿ ಮೈಸೂರು
ಸರ್ ಎಂ.ವಿಶ್ವೇಶ್ವರಯ್ಯ ಅವರ ಅಭಿವೃದ್ಧಿ ಕೆಲಸಗಳು, ಸಮಯಪರಿಪಾಲನೆ, ಪಾರದರ್ಶಕತೆ ಇಂದಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಆಡಳಿತ ವ್ಯವಸ್ಥೆ ಮಾದರಿಯಾಗಿದೆ ಎಂದು ಶಾಸಕ ಕೆ. ಹರೀಶ್ ಗೌಡ ಹೇಳಿದರು.
ಮೈಸೂರು ಯುವ ಬಳಗದಿಂದ ಭಾರತರತ್ನ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಅವರ 163ನೇ ಜಯಂತಿ ಅಂಗವಾಗಿ ನಗರದ ಜೆಎಲ್ಬಿ ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆ ಆವರಣದಲ್ಲಿರುವ ಸರ್ ಎಂವಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಕೆಲಸಗಳನ್ನು ವಿಶ್ವವೇ ಕೊಂಡಾಡಿತು ಹಾಗೂ ಬ್ರಿಟಿಷರು ಸರ್ ಎಂವಿ ಮೆದುಳನ್ನು ನೀಡುವಂತೆ ಮಾಡಿದ್ದರು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರು ಆಧುನಿಕ ಮೈಸೂರು ಸಂಸ್ಥಾನವನ್ನು ಅಭಿವೃದ್ಧಿಪಡಿಸಿದ ಶೈಲಿ, ಸಮಯ ಪರಿಪಾಲನೆ, ಪಾರದರ್ಶಕತೆ ಎಲ್ಲರಿಗೂ ಮಾದರಿಯಾಗಿದೆ. ಮೈಸೂರಿನ ಕೆ.ಆರ್.ವೃತ್ತದಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಉದ್ಘಾಟಿಸಲು ಜಯಚಾಮರಾಜ ಒಡೆಯರ್ ಅವರು ಆಹ್ವಾನ ನೀಡಿದಾಗ ಸರ್ ಎಂವಿ ಅವರು ವಿಶ್ರಾಂತಿ ಗೃಹದಿಂದ ಕಾಲ್ನಡಿಗೆಯಲ್ಲಿ ಬಂದು ಗೌರವ ಸೂಚಿಸುವ ಮೂಲಕ ಸರಳತೆಗೆ ಮಹತ್ವ ನೀಡಿದರು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ವಿಪ್ರ ಮುಖಂಡ ಅಚ್ಯುತ, ಜಿ. ರಾಘವೇಂದ್ರ, ಮೋಹನ್ ಕುಮಾರ್, ರವಿಚಂದ್ರ, ನವೀನ್, ನಂಜುಂಡಸ್ವಾಮಿ, ಸಂಜಯ್ ಗೌಡ, ಶಫಿ, ಗೌತಮ್ ಬಾಲಾಜಿ, ಚರಣ್ ಇತರರಿದ್ದರು.