ಮೈಸೂರು: ಮೈಸೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಲೋಕಸಭಾ ಚುನಾವಣೆ 2024 ರ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದಡಿ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ, ಪ್ರಸ್ತುತ ಚುನಾವಣಾ ಪ್ರಕ್ರಿಯೆಗಳನ್ನು ಆನಲೈನ್ ಆಪ್ ಮೂಲಕವೇ ತಿಳಿಯಬಹುದಾಗಿದೆ. ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿ ತಿಳಿದುಕೊಳ್ಳಬಹುದಾಗಿದೆ. ಎಲ್ಲರೂ ಏಪ್ರಿಲ್ 26ರ ಮತದಾನ ದಿನದಂದು ತಪ್ಪದೇ ಮತದಾನದಲ್ಲಿ ಭಾಗವಹಿಸುವ ಜೊತೆಗೆ, ನಿಮ್ಮ ಕುಟುಂಬದ ಸದಸ್ಯರು ಪಾಲ್ಗೊಳುವಂತೆ ಅರಿವು ಮೂಡಿಸಿ ಎಂದು ತಿಳಿಸಿದರು.
ಆರೋಗ್ಯ ಇಲಾಖೆ ವತಿಯಿಂದ ನಡೆಯುವ ಆರೋಗ್ಯ ಶಿಬಿರಗಳಲ್ಲೂ ಚುನಾವಣಾ ಜಾಗೃತಿ ಅರಿವು ಮೂಡಿಸಲು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೂ ಮತದಾನದ ಅರಿವು ಮೂಡಿಸಿ, ಆ ಮೂಲಕ ಸಾರ್ವಜನಿಕರಿಗೂ ಜಾಗೃತಿ ತಲುಪುವಂತಾಗಲಿ ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ವೈದ್ಯರು ತಾವು ನೀಡುವ ಹೊರ ರೋಗಿಗಳ ವಿಭಾಗ ಚೀಟಿಯಲ್ಲಿ ಕಡ್ಡಾಯವಾಗಿ ಪ್ರಸ್ತುತ ಲೋಕಸಭಾ ಚುನಾವಣೆಯ ಘೋಷ ವಾಕ್ಯ ಚುನಾವಣಾ ಪರ್ವ, ದೇಶದ ಗರ್ವ ಇದನ್ನು ಮುದ್ರಿಸಿ ಬಳಕೆ ಮಾಡಲು ಸೂಚಿಸಿದರು. ಹಾಗೂ ಜಿಲ್ಲೆಯ ಎಲ್ಲಾ ಮೆಡಿಕಲ್ ಸ್ಟೋರ್ ಗಳಲ್ಲಿ ಚುನಾವಣಾ ಜಾಗೃತಿ ಮೂಡಿಸುವ ಸಂದೇಶಗಳನ್ನು ಬಳಕೆ ಮಾಡಿ ಜನರಲ್ಲಿ ಅರಿವು ಮೂಡಿಸುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು.
ಸಹಾಯಕ ಸ್ವೀಪ್ ನೋಡಲ್ ಅಧಿಕಾರಿ ಶಾಂತಾ ಮಾತನಾಡಿ, ಸಂಪೂರ್ಣ ಚುನಾವಣಾ ಪ್ರಕ್ರಿಯೆ ಮೊಬೈಲ್ ನಲ್ಲಿಯೇ ನೋಡಬಹುದಾಗಿದೆ. ವೋಟರ್ ಹೆಲ್ಪ್ ಲೈನ್ ಅಪ್ ನಲ್ಲಿ ಮತದಾರರ ನೊಂದಣಿ, ಮತದಾನ ಗುರುತಿನ ಚೀಟಿ ತಿದ್ದುಪಡಿ ಇದ್ದರೇ, ಇವಿಎಂ ವಿವಿ ಪ್ಯಾಟ್ ಗಳ ಬಗ್ಗೆ ಹಾಗೂ ಚುನಾವಣಾ ಅಭ್ಯರ್ಥಿಗಳ ಬಗ್ಗೆ ಅರಿಯಬಹುದಾಗಿದೆ. ಸಿವಿಜಿ ಅಪ್ ನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದ್ದರೇ ಅಂತಹ ಸಂದರ್ಭದಲ್ಲಿ ಪೋಟೋ ಕ್ಲಿಕಿಸಿ ಕಳುಹಿಸಬಹುದು. ಇದರಲ್ಲಿ ದೂರು ಸಲ್ಲಿಸುವವರ ಯಾವುದೇ ವಿವರ ತಿಳಿಯುವುದಿಲ್ಲ. ಇದರಿಂದಾಗಿ ನೈತಿಕ ಮತದಾನ ಮಾಡಲು ಪ್ರೇರೇಪಿಸಬಹುದಾಗಿದೆ ಎಂದರು.
18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ತಮ್ಮ ಸುತ್ತಮುತ್ತಲಿನವರಿಗೆ ಮಾಹಿತಿ ನೀಡಿ ಎಂದರು.
ಇದೇ ವೇಳೆ ಎಲ್ಲಾ ವೈದ್ಯಾಧಿಕಾರಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಡಿಎಚ್ ಒ ಡಾ.ಪಿ.ಸಿ.ಕುಮಾರಸ್ವಾಮಿ, ಡಿಎಲ್ ಒ ಡಾ.ಬಿ.ಬೃಂದಾ, ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರೆ ಸಿಬ್ಬಂದಿಗಳು ಹಾಜರಿದ್ದರು.