ಮೈಸೂರು: ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು ಮತದಾನದ ಬಗ್ಗೆ ಸ್ವೀಪ್ ಸಮಿತಿಯು ವಿಭಿನ್ನವಾಗಿ ಜಾಗೃತಿಯನ್ನು ಮೂಡಿಸುತ್ತಿದೆ. ಸಾರ್ವಜನಿಕ ಸೇವೆ ಒದಗಿಸುವ ಕೆಎಸ್ಆರ್ಟಿಸಿ ಬಸ್ ಟಿಕೆಟ್ ನಂತರ ಇದೀಗ ಕೆಎಂಎಫ್ ತನ್ನ ಹಾಲಿನ ಉತ್ಪನ್ನಗಳ ಪ್ಯಾಕೆಟ್ನಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದೆ.
“ಚುನಾವಣೆ ಪರ್ವ ದೇಶದ ಗರ್ವ ಎಲ್ಲರೂ ತಪ್ಪದೇ ಏಪ್ರಿಲ್ 26 ರಂದು ಮತದಾನ ಮಾಡಿ” ಎಂದು ಕಪ್ಪು ಅಕ್ಷರದಲ್ಲಿ ಮುದ್ರಣವನ್ನು ಮಾಡಲಾಗಿದೆ. ಹಾಲಿನ ಪ್ಯಾಕೆಟ್, ಲಸ್ಸಿ, ಮಜ್ಜಿಗೆ, ಮೊಸರು ಪ್ಯಾಕೆಟ್, ಮ್ಯಾಂಗೋ ಲಸ್ಸಿ ಪ್ಯಾಕೆಟ್ಗಳ ಮೇಲೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ನಗರ ಪ್ರದೇಶದ ಭಾಗದಲ್ಲಿರುವ ಜನರಿಗೆ ಪ್ರತಿನಿತ್ಯ ಹಾಲು ಮೊಸರು ಮಜ್ಜಿಗೆ ಬೇಕೇ ಬೇಕು ಇದರಿಂದ ಹೆಚ್ಚಿನ ಜನರು ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಬಹುದು ಎಂದು ಪ್ಯಾಕೆಟ್ಗಳ ಮೇಲೆ ಮುದ್ರಣವನ್ನು ಮಾಡಲಾಗಿದೆ. ಕಳೆದ ಹತ್ತು ದಿನಗಳಿಂದ ನಂದಿನಿ ಹಾಲಿನ ಪ್ಯಾಕೆಟ್ಗಳ ಮೇಲೆ ಮತದಾನದ ಬಗ್ಗೆ ಮುದ್ರಣವನ್ನು ನೀಡುತ್ತಿದೆ.