ಪ್ರತಿನಿಧಿ ವರದಿ ಚಾಮರಾಜನಗರ:
ಲೋಕಸಭಾ ಚುನಾವಣೆ 2024-ರ ಸಂಬಂಧ ಜಿಲ್ಲೆಯ ಗಡಿ ಹಾಗೂ ಕೊನೆಯ ಗ್ರಾಮ ಪಂಚಾಯತಿ ಗೋಪಿನಾಥಂ ಗ್ರಾಮದ ಬಳಿಯಿರುವ ಹೊಗೇನೆಕಲ್ ನಲ್ಲಿ ಶುಕ್ರವಾರ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರಿಂದ ಕಾವೇರಿ ದಡದ ಮಧ್ಯಭಾಗದಲ್ಲಿ ತೆಪ್ಪೋತ್ಸವದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಮತದಾನ ಜಾಗೃತಿ ಕಾರ್ಯಕ್ರಮಕ್ಕೂ ಮೊದಲು ಗೋಪಿನಾಥಂ ಗ್ರಾಮದ ಮಹಿಳೆಯರು ಗ್ರಾಮದಿಂದ ಹೊಗೇನೆಕಲ್ ಜಲಪಾತದ ದ್ವಾರದ ಮುಂಭಾಗದ ಕಾವೇರಿ ದಡದವರೆಗೆ ಪೂರ್ಣ ಕುಂಭ ಹಿಡಿದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್ ವಸ್ತ್ರದ್ ಅವರನ್ನು ಸ್ವಾಗತಿಸಿದರು.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್ ಅವರು, ಎಲ್ಲರೂ ಏ.26ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಬೇಕು. ನಿಮ್ಮ ಹೆಸರು ಮತದಾನ ಪಟ್ಟಿಯಲ್ಲಿ ಇರುವ ಬಗ್ಗೆ ಹೆಲ್ಪ್ ಲೈನ್ ಆ್ಯಪ್ ಮುಖಾಂತರ ಖಚಿತಪಡಿಸಿಕೊಳ್ಳಿ. ಚುನಾವಣಾ ಸಂಬಂಧ ಯಾವುದೇ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಸಿ ವಿಜಿಲ್ ಆ್ಯಪ್ ನಲ್ಲಿ ದೂರು ಸಲ್ಲಿಸಬಹುದು. ಎಲ್ಲರೂ ನ್ಯಾಯ ಸಮ್ಮತ ಮತದಾನ ಮಾಡಿ ಹಾಗೂ ನೈತಿಕ ಮತದಾನ ಬೆಂಬಲಿಸಿ ಎಂದರು.
ನಂತರ ಮಾರಿಕೊಟ್ಟಾಯಿ ಮತಗಟ್ಟೆ ಸಂಖ್ಯೆ 141 ರಲ್ಲಿ ಮತದಾನದ ಧ್ವಜಾರೋಹಣ ನೆರವೇರಿಸಿ ಬಳಿಕ ಮತಗಟ್ಟೆ ವೀಕ್ಷಣೆ ಮಾಡಿ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಹಣ, ಹೆಂಡ ಇತರೆ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಬೇಕು. ಮತದಾನ ನಿಮ್ಮ ಮುಂದಿನ ಪೀಳಿಗೆಗೆ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಇದೇ ವೇಳೆ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಪಂ ಡಿಎಸ್ ಪಿ.ಲಕ್ಷ್ಮೀ ಅವರು ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಹನೂರು ತಾಪಂ ಇಒ ಉಮೇಶ್, ಸಹಾಯಕ ನಿರ್ದೇಶಕ ರವೀಂದ್ರ, ತಾಲೂಕು ಪಂಚಾಯತಿ ಹಾಗೂ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಹಾಯಕ ಎಂಜಿನಿಯರ್, ಇತರರು ಈ ಸಂಧರ್ಭದಲ್ಲಿ ಇದ್ದರು.
19ಸಿಎಚ್ಎನ್.5: ಹೊಗೇನೆಕಲ್ ನಲ್ಲಿ ಶುಕ್ರವಾರ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರಿಂದ ಕಾವೇರಿ ದಡದ ಮಧ್ಯಭಾಗದಲ್ಲಿ ತೆಪ್ಪೋತ್ಸವದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.