ಪ್ರತಿನಿಧಿ ವರದಿ ತಿ. ನರಸೀಪುರ
2024ರ ಸಾರ್ವತ್ರಿಕ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರು ಕಡ್ಡಾಯವಾಗಿ ಮತದಾನ ಮಾಡುವ ಮುಖೇನ ಸಂವಿಧಾನಬದ್ದ ಹಕ್ಕನ್ನು ಚಲಾಯಿಸಬೇಕು ಎಂದು ತಹಸೀಲ್ದಾರ್ ಟಿ. ಜಿ.ಸುರೇಶ್ ಆಚಾರ್ ಮನವಿ ಮಾಡಿದರು.
ಈ ಕುರಿತು ಸುದ್ಧಿಗಾರ ಜೊತೆ ಮಾತನಾಡಿದ ತಹಸೀಲ್ದಾರ್ , ಕಳೆದ ಲೋಕಸಭಾ ಚುನಾವಣೆಯಲ್ಲಿ ತಿ.ನರಸೀಪುರ ವಿಧಾನ ಕ್ಷೇತ್ರದಲ್ಲಿ ಶೇ 68ರಷ್ಟು ಮತದಾನ ನಡೆದಿದ್ದು, ಮತದಾನ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಸಾಕಷ್ಟು ಕ್ರಮಕೈಗೊಳ್ಳುತ್ತಿದೆ. ಚುನಾವಣೆ ಪ್ರಕ್ರಿಯೆಯಿಂದ ವಿದ್ಯಾವಂತರು ಮತ್ತು ಉದ್ಯೋಗಸ್ಥರು ದೂರ ಉಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಮತದಾನ ನಡೆಯುತ್ತಿದ್ದು, ನಗರ ಪ್ರದೇಶಗಳಲ್ಲಿನ ಯುವ ಸಮೂಹ ಮತ್ತು ಉದ್ಯೋಗಸ್ಥರು ಚುನಾವಣೆ ಬಗ್ಗೆ ನಿರಾಸಕ್ತಿ ವಹಿಸುತ್ತಿದ್ದಾರೆ. ಚುನಾವಣೆ ಉದ್ದೇಶಕ್ಕಾಗಿಯೇ ಚುನಾವಣೆಯಂದು ಚುನಾವಣೆ ಆಯೋಗ ರಜೆ ಘೋಷಣೆ ಮಾಡಿದ್ದರೂ ಯುವಸಮೂಹ ಮತ್ತು ಉದ್ಯೋಗಸ್ಥರು ಚುನಾವಣೆ ಪ್ರಕ್ರಿಯೆಯಿಂದ ಏಕೆ ಹಿಂದೆ ಸರಿಯುತ್ತಿದ್ದಾರೆ ಎಂಬುದನ್ನು ಗಮನಹರಿಸಲಾಗುತ್ತಿದೆ ಎಂದರು.
ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಉಸ್ತುವಾರಿಯಲ್ಲಿ ತಿ.ನರಸೀಪುರ, ಬನ್ನೂರು ಪುರಸಭೆ ಮತ್ತು ತಾಲೂಕಿನ ಎಲ್ಲ 36 ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಚುನಾವಣೆ ಮತದಾನ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ ಎಂದರು.
ಮತದಾನ ಒಂದು ಸಂವಿಧಾನಿಕ ಹಕ್ಕು. ಇದನ್ನು ಚಲಾಯಿಸುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ. ಅಲ್ಲದೆ, ಅದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು. ಹಾಗಾಗಿ ಎಲ್ಲರು ಕಡ್ಡಾಯವಾಗಿ ಮತದಾನ ಮಾಡುವ ಮುಖೇನ ಮತದಾನದ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.