ಪ್ರತಿನಿಧಿ ವರದಿ ಎಚ್.ಡಿ.ಕೋಟೆ
ಪುರಸಭಾ ವ್ಯಾಪ್ತಿಗೆ ಬರುವ ಕೋಳಿ, ಮೀನು, ಮಾಂಸ ಮಾರಾಟ ಮಾಡುವ ಅಂಗಡಿ ಮಾಲೀಕರು ತ್ಯಾಜ್ಯಗಳನ್ನು ತಾರಕ ನದಿಗೆ ಎಸೆಯುತ್ತಿದ್ದು, ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಸುರೇಶ್ ತಿಳಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ವಿಚಾರ ತಿಳಿಯುತ್ತಿದ್ದಂತೆ ಪುರಸಭಾ ಅಧಿಕಾರಿಗಳು, ಪೌರಕಾರ್ಮಿಕರ ತಂಡಗಳೊಂದಿಗೆ ತಾರಕ ನದಿಯಲ್ಲಿ ತೇಲುತ್ತಿರುವ ತ್ಯಾಜ್ಯಗಳನ್ನ ಸ್ವಚ್ಛತೆ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಮಾಂಸ, ಮೀನು, ಕೋಳಿ, ಅಂಗಡಿ ಮಾಲೀಕರು ಈ ಹಿಂದೆ ಪುರಸಭೆಯಲ್ಲಿ ಮಾರಾಟಕ್ಕೆ ಉದ್ಯಮಿ ಪರವಾನಗಿ ತೆಗೆದುಕೊಂಡು ಮಾರಾಟ ಮಾಡುತ್ತಿದ್ದರು, ಅದಕ್ಕೆ ನಾವು ಪುರಸಭೆ ವಾಹನಗಳ ಮೂಲಕ ಅಂಗಡಿ ಬಳಿಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಣೆ ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಅಂಗಡಿ ಮಾಲೀಕರು ಉದ್ಯಮಿ ಪರವಾನಗಿಯನ್ನು ತೆಗೆದುಕೊಳ್ಳದ ಕಾರಣ ವಾಹನಗಳು ಅಂಗಡಿ ಬಳಿ ತೆರಳುತ್ತಿಲ್ಲ. ಈ ಕಾರಣ ಅಂಗಡಿ ಮಾಲೀಕರು ತಮ್ಮ ಅಂಗಡಿಯಲ್ಲಿರುವ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಡದೆ, ವಡ್ಡರಗುಡಿ ಬಳಿ ಇರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದೆವು. ಆದರೂ ಅಂಗಡಿ ಮಾಲೀಕರು, ಆ ನಿಯಮವನ್ನು ಪಾಲಿಸದೆ ತಾರಕ ನದಿಗೆ ಬಿಸಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ತಿಂಗಳ ಕೊನೆಯಲ್ಲಿ ಮಾಂಸ, ಮೀನು, ಕೋಳಿ, ಮಾರಾಟ ಮಾಲೀಕರು ಉದ್ಯಮಿ ಪರವಾನಗಿ ತೆಗೆದುಕೊಳ್ಳದೆ ಇದ್ದಲ್ಲಿ ಸಂಪೂರ್ಣ ಅಂಗಡಿಗಳನ್ನು ಮುಚ್ಚಿಸುವುದರ ಮೂಲಕ ತ್ಯಾಜ್ಯವನ್ನು ನದಿಗೆ ಬಿಸಾಡುತ್ತಿರುವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪರಿಸರ ಅಭಿಯಂತರದ ರಕ್ಷಿತ್, ಆರೋಗ್ಯ ನಿರೀಕ್ಷಕ ಹರೀಶ್, ಸ್ವಚ್ಛತೆ ಮೇಲ್ವಿಚಾರಕರಾದ ಸುಬ್ರಮಣ್ಯ, ಗಣೇಶ್, ಶ್ರೀರಂಗ, ಹಾಗೂ ಸಿಬ್ಬಂದಿ ಮಂಜು, ಬಣ್ಣಾರಿ, ವಿರಾಜ್, ಕುಮಾರ್, ಗಣೇಶ್, ವೆಂಕಟೇಶ್, ನಂಜಯ್ಯ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.