ಮೈಸೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣವನ್ನು ಸರ್ಕಾರ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದರು. ಮೈಸೂರು ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಅವರೆಲ್ಲ ನಮ್ಮ ಸಹೋದರರು ಅಂತ ಹೇಳುತ್ತಿದ್ದರು, ಪ್ರಾಯಶಃ ಅದೇ ಕಾರಣಕ್ಕೆ ಅವರ ಮೇಲೆ ಸಹಾನುಭೂತಿ ಇರಬಹುದು ಮತ್ತು ವಿಷಯಾಂತರ ಮಾಡಿ ಮಾಧ್ಯಮದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. ಅವರನ್ನು ರಕ್ಷಣೆ ಮಾಡುವ ಉದ್ದೇಶದಿಂದಲೇ ಸಚಿವ ಪ್ರಿಯಾಂಕ್ ಖರ್ಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ಮಾಡಿದರು. ಸಾರ್ವಜನಿಕ ಒತ್ತಡ ಹೆಚ್ಚಾದ ಬಳಿಕವೇ ಅವರು ವಿಡಿಯೋ ಫುಟೇಜನ್ನು ಪರೀಕ್ಷಣೆಗಾಗಿ ಫೋರೆನ್ಸಿಕ್ ಲ್ಯಾಬ್ ಕಳಿಸಿದ್ದು ಮತ್ತು ಸಂಶಯಾಸ್ಪದ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದು ಎಂದರು. ಅಸಲಿಗೆ ಘೋಷಣೆ ಕೂಗಿದವರ ವಿಚಾರಣೆ ನಡೆಸುತ್ತಿದ್ದಾರೋ ಅಥವಾ ಅವರಿಗೆ ಬಿರಿಯಾನಿ ತಿನ್ನಿಸಿ ವಾಪಸ್ಸು ಕಳಿಸುತ್ತಿದ್ದಾರೋ ಗೊತ್ತಿಲ್ಲ. ಯಾಕೆಂದರೆ ಭಯೋತ್ಪಾದಕರನ್ನು ಪೋಷಿಸುವ ಕಪ್ಪುಚಾರಿತ್ರ್ಯವನ್ನು ಕಾಂಗ್ರೆಸ್ ಪಕ್ಷ ಹೊಂದಿದೆ ಎಂದು ರವಿ ಹೇಳಿದರು. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಹೇಗೆ ವರ್ತಿಸಿದರು ಅಂತ ಎಲ್ಲರಿಗೂ ಗೊತ್ತಿದೆ ಎಂದು ರವಿ ಹೇಳಿದರು.