ಹಾಸನ: ತಮ್ಮ ಮೊಮ್ಮಗ ಪರ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಸತ್ತಿಗರಹಳ್ಳಿಯಲ್ಲಿ ಚುನಾವಣಾ ಪ್ರಚಾರ ಮಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮಾತಾಡುವಾಗ ಭಾವುಕರಾಗಿಬಿಟ್ಟರು. ಅವರು ಮಾತಾಡುವಾಗ ಕಣ್ಣುಗಳಿಂದ ನೀರು ಸುರಿಯುತಿತ್ತು. ತಾವು ರೈತರಿಗೆ ಮಾಡಿದ ಸಹಾಯಗಳನ್ನು, ಘೋಷಿಸಿದ ಸಬ್ಸಿಡಿಗಳನ್ನು ಉಲ್ಲೇಖಿಸಿದ ಅವರು ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕರ್ನಾಟಕಕ್ಕೆ ಎಸಗುತ್ತಿರುವ ಅನ್ಯಾಯವನ್ನು ಮೊನ್ನೆ ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ಮೋದಿಯವರ ಗಮನಕ್ಕೆ ತಂದಾಗ ಅವರು, ಕರ್ನಾಟಕದಲ್ಲಿ ಎಲ್ಲ 28 ಸ್ಥಾನಗಳನ್ನು ಗೆಲ್ಲಿಸಿಕೊಡಿ ವಿವಾದವನ್ನು ಬಗೆಹರಿಸಿಕೊಡುತ್ತೇನೆ ಅಂತ ಭರವಸೆ ನೀಡಿದ್ದಾರೆ, ಹಾಗಾಗಿ ನಾವು ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ದೇವೇಗೌಡ ಹೇಳಿದರು. ನಂತರ ತಮ್ಮ ಬದುಕಿನ ಬಗ್ಗೆ ಮಾತಾಡಿದ ದೇವೇಗೌಡರು, ನಾನು ಇನ್ನೆಷ್ಟು ವರ್ಷ ಬದುಕಿರುತ್ತೇನೆಯೋ ಗೊತ್ತಿಲ್ಲ, ಆದರೆ ಬದುಕಿರುವಷ್ಟು ಜನ ರಾಜ್ಯದ ರೈತರಿಗೆ ಒಳಿತನ್ನು ಮಾಡುವ ಅವರು ಬದುಕು ಹಸನಾಗಿಸುವ ಸಂಕಲ್ಪ ತೊಟ್ಟಿದ್ದೇನೆ, ಸುತ್ತಮುತ್ತಲಿನ 28 ಹಳ್ಳಿಗಳಿಂದ ಬಂದಿರುವ ನೀವು ಬಿಜೆಪಿ ಮತ್ತುಅ ಜೆಡಿಎಸ್ ಮೈತ್ರಿಯು ಎಲ್ಲ 28 ಸ್ಥಾನಗಳನ್ನು ಗೆಲ್ಲಲು ನೆರವಾಗಬೇಕೆಂದು ಮತ್ತಷ್ಟು ಭಾವುಕರಾಗಿ ಹೇಳಿದರು.