ಸುರೇಶ್ ಅಜ್ಜೀಪುರ ಹನೂರು
ರಸ್ತೆಯಿಲ್ಲ, ವಿದ್ಯುತ್ ಇಲ್ಲ, ವಾಹನಗಳ ವ್ಯವಸ್ಥೆಯಂತೂ ಇಲ್ಲ. ಆರೋಗ್ಯ ಹದಗೆಟ್ಟರೆ ಡೋಲಿಯೇ ಗತಿ, ಕುಡಿಯಲು ಬಾವಿ ನೀರೇ ಗತಿ… ಇದು ಪಡಸಲನತ್ತ ಗ್ರಾಮದ ಪರಿಸ್ಥಿತಿ.
ತಾಲೂಕಿನ ದಟ್ಟಾರಣ್ಯದಲ್ಲಿರುವ ಪಡಸಲನತ್ತ ಗ್ರಾಮವು ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕುಗ್ರಾಮವಾಗಿದ್ದು, ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.
ಸುಸಜ್ಜಿತ ರಸ್ತೆಯಿಲ್ಲ: ಗ್ರಾಮಕ್ಕೆ ಎರಡು ಮಾರ್ಗದಲ್ಲಿ ರಸ್ತೆಯಿದ್ದು, ಒಂದು ಇಂಡಿಗನತ್ತ ಮೂಲಕ ತೇಕಣೆ ಸಮೀಪದ ಹಾದಿಯಲ್ಲಿ, ಇನ್ನೊಂದು ಪಾಲಾರ್ ನ ಕೊಕ್ಕರೆಹಳ್ಳ ಸಮೀಪದ ರಸ್ತೆ. ಈ ಎರಡೂ ರಸ್ತೆಗಳು ದಟ್ಟಾರಣ್ಯದ ಒಳಗೆ ಇವೆ. ಮುಖ್ಯವಾಗಿ, ಎರಡೂ ರಸ್ತೆಯ ಮಾರ್ಗ ಕಲ್ಲುಗಳಿಂದ ಕೂಡಿದ್ದು, ದುರ್ಗಮ ಹಾದಿಯಾಗಿವೆ. ಇದರಿಂದ ಸಂಚರಿಸಲು ಯೋಗ್ಯವಾಗಿಲ್ಲ. ಪರಿಣಾಮ, ಇಲ್ಲಿನ ಜನತೆ ಹೈರಾಣಾಗಿದ್ದಾರೆ. ಸ್ಥಳೀಯರು ಸಾಮಗ್ರಿಗಳನ್ನು ಸಾಗಿಸಲು ಹೆಚ್ಚುವರಿ ಹಣ ನೀಡಿ ಬಾಡಿಗೆ ಗಾಡಿ ಮಾಡಬೇಕು. ಇದರ ಜತೆಗೆ, ಅತ್ಯವಶ್ಯಕ ಸಾಮಗ್ರಿಗಳಾದ ಸಿಲಿಂಡರ್ ಹಾಗೂ ಇತರ ವಸ್ತುಗಳನ್ನು ತಲೆಯ ಮೇಲೆ ಅಥವಾ ಕತ್ತೆ ಮೂಲಕ ತರಬೇಕು. ಹೀಗಾಗಿ, ಸುಗಮವಾಗಿ ಸಂಚರಿಸಲು ಕಚ್ಚಾ ರಸ್ತೆಯನ್ನಾದರೂ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿದ್ಯುತ್ ಇಲ್ಲ: ಗ್ರಾಮದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ವಿದ್ಯುತ್ ಇಲ್ಲದ ಪರಿಣಾಮ ಗ್ರಾಮಸ್ಥರು ಭಯದ ವಾತಾವರಣದಲ್ಲೇ ಕಾಲ ದೂಡುತ್ತಿದ್ದಾರೆ. ತಾತ್ಕಾಲಿಕವಾಗಿ ಸದ್ಯಕ್ಕೆ ಇರುವ ಸೋಲಾರ್ ಸಹ ಆಗಾಗ್ಗೆ ಕೈ ಕೊಡುವುದರಿಂದ ರಾತ್ರಿ ವೇಳೆ ತುಂಬ ತೊಂದರೆಯಾಗುತ್ತಿದೆ. ಜತೆಗೆ, ಮಕ್ಕಳು-ಮರಿಗೆಲ್ಲ ತುಂಬ ನರಕವಾಗುತ್ತಿದೆ. ಈ ಗ್ರಾಮದಲ್ಲಿ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿದ್ದು, ಅವರಿಗೆ ತುಂಬ ತೊಂದರೆಯಾಗಿದೆ. ಹಾಗಾಗಿ, ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಡೋಲಿಯೇ ಗತಿ: ಈ ಗ್ರಾಮದ ಜನರಿಗೆ ಆರೋಗ್ಯ ಹದಗೆಟ್ಟರೆ, ಅದರಲ್ಲೂ ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಅಥವಾ ಮಧ್ಯರಾತ್ರಿ ವೇಳೆ ಆರೋಗ್ಯ ಹದಗೆಟ್ಟರೆ ಡೋಲಿ ಕಟ್ಟಿ ಜನರೇ 4 ರಿಂದ 5 ಕಿಮೀ ಗಟ್ಟಲೆ ಹೊರಬೇಕಾದ ಪರಿಸ್ಥಿತಿ ಇಂದಿಗೂ ಇದೆ.
ಪಡಸಲನತ್ತ ಗ್ರಾಮದಿಂದ ಮಹದೇಶ್ವರ ಬೆಟ್ಟಕ್ಕೆ ಅಥವಾ ಪಾಲರ್ ಗೆ ತೆರಳಲು ಹರಸಾಹಸ ಪಡಬೇಕು. ಜತೆಗೆ, ತಮ್ಮ ಮನೆಗಳಿಗೆ ಪಡಿತರ ಆಹಾರ ಪದಾರ್ಥಗಳನ್ನೂ ತಲೆ ಮೇಲೆಯೇ ಹೊತ್ತು ಸಾಗಬೇಕು. ಗ್ರಾಮಕ್ಕೆ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.
ತೆರೆದ ಬಾವಿಗಳ ನೀರೇ ಗತಿ: ಈ ಗ್ರಾಮದ ಜನರಿಗೆ ಇರುವ ಬಾವಿಗಳ ನೀರೇ ಗತಿ. ಅದರಲ್ಲೂ ಬೇಸಿಗೆ ಅವಧಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ನೀರಿಗೂ ಹಾಹಾಕಾರ ಬರಬಹುದು. ಅಲ್ಲದೆ, ಇಡೀ ಗ್ರಾಮಸ್ಥರು ಇದೇ ನೀರನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿರುವ ಬಾವಿಗಳೇ ಇವರ ಜೀವನಾಡಿಯಾಗಿವೆ. ಮುಖ್ಯವಾಗಿ ಮನೆಗಳು ತುಂಬ ದೂರದ ಹಾದಿಯಾಗಿದ್ದು, ಕುಡಿಯುವ ನೀರಿಗಾಗಿಯೇ ಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಪರವಾಗಿಲ್ಲ, ಆದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತುಂಬ ತೊಂದರೆ ಆಗುತ್ತಿದೆ.
ಚುನಾವಣೆ ಬಹಿಷ್ಕಾರ: ನಮ್ಮ ಗ್ರಾಮಕ್ಕೆ ಮೂಲ ಸೌಲಭ್ಯಗಳಿಲ್ಲ, ಈಗಾಗಲೇ ಅನೇಕ ರೀತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಕಾಡುಪ್ರಾಣಿಗಳಂತೆ ಬದುಕುತ್ತಿದ್ದೇವೆ. ಇಷ್ಟೆಲ್ಲ ಸಮಸ್ಯೆಗಳ ಸರಮಾಲೆಯನ್ನು ಹೊದ್ದು ಮಲಗಿರುವ ನಾವು ಪ್ರತಿ ಬಾರಿ ಮನವಿ ಕೊಟ್ಟಿದ್ದೇವೆ. ಆದರೆ ಯಾವ ಸಮಸ್ಯೆಯನ್ನೂ ಬಗೆಹರಿಸಿಲ್ಲ. ಹಾಗಾಗಿ, ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಪಡಸಲನತ್ತ ಹಾಗೂ ತೇಕಣೆ ಗ್ರಾಮಸ್ಥರು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಚಿತ್ರ : ಹನೂರು ತಾಲೂಕಿನ ಪಡಸಲನತ್ತ ಗ್ರಾಮದ ಜನರು ತೆರೆದ ಬಾವಿಯಿಂದ ನೀರನ್ನು ಸಂಗ್ರಹ ಮಾಡುತ್ತಿರುವುದು.
ಚಿತ್ರ : ಹನೂರು ತಾಲೂಕಿನ ಪಡಸಲನತ್ತ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಲು ತೀರ್ಮಾನ ಮಾಡಿರುವ ವಿಡಿಯೋ ದೃಶ್ಯ.