ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯ
ರಾಮನಗರ : ಜನಸೇವೆಗೆ ಭಗವಂತ ನನಗೂ ಅವಕಾಶ ಮಾಡಿಕೊಡುತ್ತಾನೆ. ಅದಕ್ಕಾಗಿ ನಾನು ಕಾಯುತ್ತೇನೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಮಂಜುನಾಥ ಕನ್ವೆನ್ಷನ್ ಹಾಲ್ ಆವರಣದಲ್ಲಿ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಮಾತನಾಡಿದರು.
ಗಿಫ್ಟ್ ಕಾರ್ಡ್ ಕೊಟ್ಟು ನನ್ನನ್ನು ಸೋಲಿಸಿದ ರಾಮನಗರದ ಪುಣ್ಯಾತ್ಮ ಶಾಸಕರೇ, ಆ ಕಾರ್ಡ್ಗೆ ಏನೂ ಬಂದಿಲ್ಲ ಎಂದು ಜನ ನಿಮ್ಮನ್ನು ಈಗಲೂ ಬೈಯ್ದುಕೊಳ್ಳುತ್ತಿದ್ದಾರೆ. ಕಡೆ ಪಕ್ಷ ಅವರಿಗೆ ರೇಷನ್ ಕಿಟ್ ಆದರೂ ಕೊಡಿ ಎಂದು ವ್ಯಂಗ್ಯವಾಡಿದರು.
ಆಗ ಮುಖಂಡರೊಬ್ಬರು ಅವರಿಗೆ ಗಿಫ್ಟ್ ಕಾರ್ಡ್ ತೋರಿಸಲು ಹತ್ತಿರಕ್ಕೆ ತೆಗೆದುಕೊಂಡು ಬಂದಾಗ, ‘ಪಾಪದ ಕಾರ್ಡ್ ನಾನ್ಯಾಕೆ ಕೈಯಲ್ಲಿ ಮುಟ್ಟಲಿ’ ಎಂದು ನಿರಾಕರಿಸಿದರು.
ಜನ ಕೇಳದಿದ್ದರೂ ಉಚಿತವಾಗಿ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಕಾಂಗ್ರೆಸ್ನವರು, ಪಕ್ಷಕ್ಕೆ ಮತ ಹಾಕದಿದ್ದರೆ ಯೋಜನೆಗಳನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹೃದಯವಂತ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಾರ್ಯಕರ್ತರು ಗೆಲ್ಲಿಸುವ ಮೂಲಕ, ವಿಧಾನಸಭಾ ಚುನಾವಣೆಯಲ್ಲಿ ನನಗಾದ ಸೋಲಿನ ಸೇಡು ತೀರಿಸಿಕೊಳ್ಳಬೇಕು ಎಂದರು.
ಮಂಡ್ಯದಲ್ಲಿ ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಕುಮಾರಸ್ವಾಮಿ ಅವರು ನಿರ್ಧರಿಸಿದ್ದರು. ಆದರೆ, ನನಗಾದ ಸೋಲು ತೀರಿಸಿಕೊಳ್ಳಲು, ಪಕ್ಷ ಮತ್ತು ಕಾರ್ಯಕರ್ತರನ್ನು ಉಳಿಸಲು, ಅಭಿವೃದ್ಧಿಯಲ್ಲಾಗಿರುವ ಅನ್ಯಾಯ ಸರಿಪಡಿಸಲು ಕುಮಾರಸ್ವಾಮಿ ಅವರು ರಾಮನಗರ ಬಿಟ್ಟು ಅಲ್ಲಿಗೆ ಹೋಗಿದ್ದಾರೆ. ರಾಜ್ಯ ಕಟ್ಟುವ ಎಚ್ಡಿಕೆ ಕನಸಿಗೆ ಕನಸಿಗೆ ಬಿಜೆಪಿ ನಾಯಕರು ಮುಂದೆ ಶಕ್ತಿ ತುಂಬಲಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ನಿಮ್ಮ ಮತವು ಮಗಳಿದ್ದಂತೆ. ಅದನ್ನು ಯೋಗ್ಯರಿಗೆ ಕೊಡಿ. ಅದರಿಂದ ದೇಶ ಬೆಳಗುತ್ತದೆ. ಪ್ರಜಾಪ್ರಭುತ್ವ ಉಳಿಯುತ್ತದೆ. ರಾಮನಗರ ಜಿಲ್ಲೆಯು ಕುಮಾರಸ್ವಾಮಿ ಅವರು ಇಲ್ಲಿನ ಜನರಿಗೆ ಕೊಟ್ಟಿರುವ ದೊಡ್ಡ ಗ್ಯಾರಂಟಿ. ಎಂಜಿನಿಯರಿಂಗ್ ಕಾಲೇಜು, ಆರೋಗ್ಯ ವಿಶ್ವವಿದ್ಯಾಲಯ, ಕಾನೂನು ಕಾಲೇಜು ಸೇರಿದಂತೆ ಶಾಶ್ವತವಾಗಿ ಉಳಿದಿರುವ ಹಲವು ಸಂಸ್ಥೆಗಳು ಕುಮಾರಣ್ಣನ ಕೊಡುಗೆಯಾಗಿವೆ ಎಂದರು.
ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ ಮಾತನಾಡಿ ಮೇಕೆದಾಟು ಅಣೆಕಟ್ಟೆ ಯೋಜನೆಗೆ ಕೇಂದ್ರ ಮತ್ತು ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದ್ದವು. ಅದರೆ, ಡಿ.ಕೆ ಸಹೋದರರು ನಡೆಸಿದ ಮೇಕೆದಾಟು ಪಾದಯಾತ್ರೆಯಿಂದಾಗಿ, ತಮಿಳುನಾಡು ಸರ್ಕಾರ ಅಣೆಕಟ್ಟೆಗೆ ಅವಕಾಶ ನೀಡದಂತೆ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಯೋಜನೆ ವಿಳಂಬಕ್ಕೆ ಡಿ.ಕೆ. ಶಿವಕುಮಾರ್ ಕಾರಣ ಎಂದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎ. ಮಂಜುನಾಥ್ ಮಾತನಾಡಿ, ಚುನಾವಣೆಗೆ ಮುಂಚೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಜಪಿಸುತ್ತಿದ್ದ ಡಿಕೆಶಿ, ಅಧಿಕಾರಕ್ಕೆ ಬಂದ ಬಳಿಕ ರಾಮನಗರ ಬಿಟ್ಟು ಬೆಂಗಳೂರು ಉಸ್ತುವಾರಿ ಸಚಿವರಾದರು. ರಾಮನಗರಕ್ಕೆ ರಾಮಲಿಂಗಾ ರೆಡ್ಡಿ ಅವರನ್ನು ತಂದು ಕೂರಿಸಿದರು. ಈಗ ಜಿಲ್ಲೆ ಮರೆತು ಬೆಂಗಳೂರು ಬಗ್ಗೆ ಮಾತಾಡುತ್ತಾರೆ. ಎಲ್ಲವನ್ನೂ ಕನಕಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ರುದ್ರೇಶ್, ಮುಖಂಡ ಗೌತಮ್ ಗೌಡ ಮಾತನಾಡಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ದರ್ಶನ್ ರೆಡ್ಡಿ, ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಎ.ಪಿ. ರಂಗನಾಥ್, ನರಸಿಂಹಮೂರ್ತಿ, ರುದ್ರದೇವರು, ಜಯಕುಮಾರ್ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಉಪಸ್ಥಿತಿರಿದ್ದರು.
ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು