ಪ್ರತಿನಿಧಿ ವರದಿ ಮಡಿಕೇರಿ
ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 29ನೇ ವರ್ಷದ ಕಕ್ಕಡ ಪದ್ನೆಟ್ಟ್ ಆಚರಣೆ ಹೊರ ವಲಯದ ಕ್ಯಾಪಿಟಲ್ ವಿಲೇಜ್ನಲ್ಲಿ ಆಚರಿಸಲಾಯಿತು.
ಕೊಡವ ಗುರುಕಾರೋಣರನ್ನು ಸ್ಮರಿಸಿ ಪ್ರಾರ್ಥಿಸಲಾಯಿತು ಮತ್ತು ಕಕ್ಕಡ ಪದ್ನೆಟ್ಟ್ ವಿಶೇಷ ಖಾದ್ಯಗಳನ್ನು ಅರ್ಪಿಸಲಾಯಿತು. ಮೆರವಣಿಗೆ ಮೂಲಕ ತೆರಳಿ ಮಂದ್ ಗೆ ಪ್ರದಕ್ಷಿಣೆ ಹಾಕಲಾಯಿತು. ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ವಿರಾಟ್ ಹಿಂದೂಸ್ಥಾನ್ ಸಂಗಮ್ ರಾಷ್ಟ್ರಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವ ವಿಖ್ಯಾತ ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಆಪ್ತ ಜಗದೀಶ್ ಶೆಟ್ಟಿ ಪಾಲ್ಗೊಂಡು ಮಾತನಾಡಿ, ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಬುಡಕಟ್ಟು ಸಮುದಾಯದ ಕೊಡವರು ಮತ್ತು ಕೊಡವ ನೆಲೆ ಉಳಿಯಬೇಕಾದರೆ ಕೊಡವ ಲ್ಯಾಂಡ್ ಘೋಷಣೆ ಅಗತ್ಯವಾಗಿದೆ. ವಿಭಿನ್ನತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತ ದೇಶದಲ್ಲಿ ಹಿಂದೂ ಧರ್ಮದಡಿ ವಿಶಿಷ್ಟ ಆಚಾರ, ವಿಚಾರ, ಸಂಸ್ಕೃತಿಯನ್ನು ಅನುಸರಿಸುವ ಸಮುದಾಯಗಳಲ್ಲಿ ಆದಿಮ ಸಂಜಾತ ಕೊಡವ ಬುಡಕಟ್ಟು ಸಮುದಾಯ ಕೂಡ ಒಂದು. 1956 ರವರೆಗೆ ಸ್ವತಂತ್ರ್ಯವಾಗಿ ಪ್ರತ್ಯೇಕವಾಗಿದ್ದ ಕೊಡವರ ಜನ್ಮಭೂಮಿ ಬಲವಂತ ಮತ್ತು ಕೊಡವರ ವಿರೋಧದ ನಡುವೆ ಕರ್ನಾಟಕದೊಂದಿಗೆ ವಿಲೀನವಾಯಿತು. ಅಂದಿನಿಂದ ಇಂದಿನವರೆಗೆ ಕೊಡವರು ದ್ವಿತೀಯ ದರ್ಜೆಯ ನಾಗರೀಕರಂತೆ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಈಶಾನ್ಯ ಭಾಗದಲ್ಲೂ ಬುಡಕಟ್ಟು ಸಮುದಾಯ ಸಂಕಷ್ಟವನ್ನು ಎದುರಿಸುತ್ತಿದೆ. ಇದೇ ರೀತಿಯ ಬದುಕು ಆದಿಮಸಂಜಾತ ಕೊಡವರದ್ದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ.ಯು.ನಾಚಪ್ಪ ಮಾತನಾಡಿ, ಮಾತೃಭೂಮಿ, ಜಲದೇವಿ, ವನದೇವಿ, ಕೃಷಿ ಪದ್ಧತಿ, ಯೋಧ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಕೊಡವರ ಜನಪದೀಯ ಧಾರ್ಮಿಕ ಮತ್ತು ಪ್ರಾಕೃತಿಕ ಆಚರಣೆಗಳಲ್ಲಿ ಕಕ್ಕಡ ಪದ್ನೆಟ್ಟ್ ಕೂಡ ಒಂದಾಗಿದೆ. ಕೃಷಿ ಕಾರ್ಯದ ಮೂಲಕ ಭೂದೇವಿಗೆ ನಮಿಸುವ ಕೊಡವ ರೈತರು ಪ್ರಕೃತಿದತ್ತವಾಗಿ ದೊರೆಯುವ 18 ವಿವಿಧ ಔಷಧೀಯ ಗುಣ ಹೊಂದಿರುವ ಮದ್ದ್ ಸೊಪ್ಪಿನಿಂದ ತಯಾರಿಸಿದ ಪಾಯಸ, ಮದ್ದ್ಪುಟ್ಟ್ ವಿವಿಧ ಖಾದ್ಯಗಳನ್ನು ಸವಿಯಲಾಗುತ್ತದೆ ಎಂದರು.
ಕೊಡವ ಪೂರ್ವಜರು ಕೊಡವ ಭೂಮಿಯಲ್ಲಿ ದೊರೆಯುವ ಪ್ರಾಕೃತಿಕ ಗಿಡಮೂಲಿಕೆಗಳ ಸತ್ವ ಮತ್ತು ಆರೋಗ್ಯವರ್ಧಕ ಶಕ್ತಿಯ ಪರಿಚಯವನ್ನು ಈ ಸಮಾಜಕ್ಕೆ ಬಳುವಳಿಯಾಗಿ ನೀಡಿರುವುದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನಾಚಪ್ಪ ತಿಳಿಸಿದರು.
ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ನಂದೇಟಿರ ಕವಿತಾ, ಬೊಟ್ಟಂಗಡ ಸವಿತ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ನಂದಿನೆರವಂಡ ನಿಶಾ ಇದ್ದರು.
ಫೋಟೋ 3 ಎಂಡಿಕೆ 03 ; ಗಾಳಿಯಲ್ಲಿ ಗುಂಡು ಹೊಡೆದು ಕಕ್ಕಡ ಪದ್ನೆಟ್ಟ್ ಆಚರಿಸಲಾಯಿತು.