ಸಚಿವ ಶಿವಾನಂದ ಪಾಟೀಲ್ ಅಭಿಪ್ರಾಯ । ವಿಶ್ವ ತೆಂಗು ದಿನಾಚರಣೆಯಲ್ಲಿ, ತೆಂಗು ಬೆಳೆಗಾರರ ರಾಜ್ಯಮಟ್ಟದ ಕಾರ್ಯಾಗಾರ
ಪ್ರತಿನಿಧಿ ವರದಿ ಚಾಮರಾಜನಗರ
ರೈತರು ಪ್ರಸ್ತುತ ದಿನಗಳಲ್ಲಿ ವೈಜ್ಞಾನಿಕ ಕೃಷಿಯನ್ನು ಮಾಡದಿದ್ದರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಕೃಷಿ ಮಾರುಕಟ್ಟೆ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ತಾಲೂಕಿನ ಮುಣಚನಹಳ್ಳಿಯಲ್ಲಿ ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತೆಂಗು ದಿನಾಚರಣೆ ಮತ್ತು ತೆಂಗು ಬೆಳೆಗಾರರ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕ ಕೃಷಿಯಿಂದ ಬದಲಾವಣೆಯನ್ನು ಕಾಣಲು ಸಾಧ್ಯವಿದೆ. ರೈತರು ಒಂದೇ ಬೆಳೆಗೆ ಸೀಮಿತವಾಗದೇ ಹೆಚ್ಚು ಆದಾಯ ತಂದುಕೊಡುವ ಕಬ್ಬು, ಮುಸುಕಿನ ಜೋಳ ಹಾಗೂ ದಾಳಿಂಬೆ ಬೆಳೆಗಳನ್ನು ಬೆಳೆದರೆ ಹೆಚ್ಚಿನ ಅನುಕೂಲವಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಪಿಎಂಸಿ ಕಾನೂನು ಜಾರಿಗೆ ತಂದಿದೆ. ಇದರಿಂದ 210 ಕೋಟಿ ಆದಾಯ ಬಂದಿದೆ ಎಂದರು.
ಸಂಸ್ಕರಣ ಘಟಕವನ್ನು ಸ್ಥಾಪಿಸಿಕೊಂಡು ಸರ್ಕಾರದ ಮೇಲೆ ಅವಲಂಭನೆಯಾಗಬಾರದು. ಘಟಕವನ್ನು ಸ್ವಾಲಂಭನೆಯಿಂದ ಬೆಳೆಸಬೇಕು. ಜತೆಗೆ ಅದನ್ನು ಶಕ್ತಿಯುತವಾಗಿ ಬೆಳೆಸಿ, ತಮ್ಮ ಸದಸ್ಯರಿಗೆ ಸಾಲ ಕೊಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರ ದೇಶದಲ್ಲಿ ಕರ್ನಾಟಕ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ಏಕೈಕ ರಾಜ್ಯವಾಗಿದೆ. ಅದರಲ್ಲೂ ರಾಜ್ಯದ 63 ಲಕ್ಷ ರೈತರಲ್ಲಿ 30 ಲಕ್ಷ ರೈತರಿಗೆ ಮೂರು ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತಿತ್ತು. ಶೂನ್ಯ ಬಡ್ಡಿದರದಲ್ಲಿ ಮೂರು ಲಕ್ಷ ರೂ. ವರೆಗೆ ನೀಡಲಾಗುತ್ತಿದ್ದ ಸಾಲವನ್ನು ಈಗ 5 ಲಕ್ಷ ರೂ. ವರೆಗೆ ಏರಿಕೆ ಮಾಡಿದೆ. ಜತೆಗೆ ಹದಿನೈದು ಲಕ್ಷದವರೆಗೆ ಶೇ.3ರಷ್ಟು ಬಡ್ಡಿ ದರದಲ್ಲಿ ದೀರ್ಘಾವಧಿ ಸಾಲ ನೀಡಲಾಗುತ್ತಿದೆ. ಇದರ ಜತೆಗೆ ರೈತರಿಗೆ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
ರೈತರು ಎಷ್ಟೇ ಬೆಳೆ ಬೆಳೆದರೂ ಕೂಡ ಅವರಿಗೆ ಲಾಭದಾಯಕವಾಗುವಂತಹ ಒಂದು ಸ್ಥಿರವಾದ ಬೆಲೆಯನ್ನು ನಿಗದಿ ಮಾಡುವಂತಹ ಒಬ್ಬ ಪ್ರಧಾನಿ ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೇಂದ್ರದಿಂದಲೇ ರೈತರು ಬೆಳೆದ ಬೆಳೆಗಳಿಗೆ ಎಂಎಸ್ಪಿ ಕೊಡದೆ ಇರುವುದರಿಂದ ರೈತರು ಬಹಳಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ವಿಚಾರವನ್ನು ಮನಗೊಂಡು ರಾಜ್ಯ ಸರ್ಕಾರ ಎಪಿಎಂಸಿ ಕಾನೂನನ್ನು ಜಾರಿಗೊಳಿಸಿ, ಕಳೆದ ಬಾರಿ ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ಧನವನ್ನು ನೀಡಿತು. ಇದರಿಂದ ಹಲವು ರೈತರು ಬದಲಾವಣೆಯನ್ನು ಕಂಡುಕೊಂಡಿದ್ದಾರೆ ಎಂದರು.
ರೈತರ ಬಗೆಗಿನ ಹೆಚ್ಚಿನ ಜವಾಬ್ದಾರಿ ಕೇಂದ್ರ ಸರ್ಕಾರಕ್ಕೆ ಇರಲಿದೆ. ಇಂದು ಕೇಂದ್ರ ಸರ್ಕಾರ ರೈತರಿಗೆ ಕೊಡುತ್ತಿದ್ದ ಅನೇಕ ಸೌಲಭ್ಯಗಳನ್ನು ಹಿಂಪಡೆಯುತ್ತಿದೆ. ಡಿಸಿಸಿ ಬ್ಯಾಂಕ್ ನಲ್ಲಿ ಕೊಡುತ್ತಿದ್ದ ಸಾಲದಲ್ಲಿ ನಬಾಡ್ ಶೇ.40ರಷ್ಟು ಕೊಡುತ್ತಿತ್ತು. ಆದರೆ ಅದನ್ನು ಕೇಂದ್ರ ಸರ್ಕಾರ ಶೇ.30 ಕ್ಕೆ ಇಳಿಸಿದೆ. ಕೇಂದ್ರ ಸರ್ಕಾರ ರೈತರಿಗೆ ಕೊಡುತ್ತಿದ್ದ ಸಾಲವನ್ನು ಕಡಿತಗೊಳಿಸುವುದರ ಜತೆಗೆ ಎಂಎಸ್ ಪಿಯನ್ನು ಕೊಡದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಹೇಳಿದರು.
ಎಪಿಎಂಸಿಗಳಲ್ಲಿ ಯಾವುದೇ ಸಂಸ್ಕರಣ ಘಟಕಗಳಿಗೆ ಅನುದಾನವನ್ನು ನೀಡಿಲ್ಲ. ಆದರೆ ಚಾಲನೆಯಲ್ಲಿರುವ ಸಂಸ್ಕರಣ ಘಟಕವನ್ನು ಪ್ರೋತ್ಸಾಹಿಸುವ ಸಲುವಾಗಿ ಎಪಿಎಂಸಿ ಅನುದಾನದಲ್ಲಿ ವಿಶೇಷ ಅನುದಾನ ನೀಡಿ ಸಹಾಯ ಮಾಡುತ್ತೇನೆ. ಅದನ್ನು ತೆಗೆದುಕೊಂಡು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಲು ತಿಳಿಸಿದರು.
ತೆಂಗುಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪ್ರಭು ಪ್ರಸ್ತಾವಿಕವಾಗಿ ಮಾತನಾಡಿ, ಯಾವುದೇ ಕ್ಷೇತ್ರಗಳಲ್ಲಿಯೂ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಕರಣಗಳು ಕಾಣುವುದಿಲ್ಲ. ಆದರೆ ಕೃಷಿ ಕ್ಷೇತ್ರದಲ್ಲಿ ಮಾತ್ರ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಕರಣಗಳನ್ನು ಕಾಣಬಹುದು. ಕೃಷಿ ಕ್ಷೇತ್ರದಲ್ಲಿರುವ ರೈತರು ಮಾತ್ರ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ರೀತಿ ಆಗದಂತೆ ಸರ್ಕಾರಗಳು ರೈತಪರ ನೀತಿಗಳನ್ನು ಜಾರಿಗೆ ತರಬೇಕು. ರೈತರು ಸಂಕಷ್ಟಕ್ಕೆ ಸಿಲುಕಿರುವುದರಿಂದ ಕೃಷಿ ಪ್ರಧಾನ ರಾಷ್ಟ್ರವಾಗಿರುವ ನಮ್ಮ ದೇಶದಲ್ಲಿ ಈಗ ಶೇ. 50ರಷ್ಟು ಮಾತ್ರ ರೈತರು ಕಾಣಲು ಸಾಧ್ಯವಾಗುತ್ತಿದೆ. ರೈತರಿಗೆ ಮೂಲ ಸೌಕರ್ಯ ನೀಡುವುದು ಯಾವುದೇ ಒಂದು ಸರ್ಕಾರದ ಕಾರ್ಯ ಜವಾಬ್ದಾರಿಯಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಎಂ ಎಸ್ ಪಿ ದರವನ್ನು ನಿಗದಿ ಮಾಡಿ ಕ್ರಮವನ್ನುವಹಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೆಶ್ ಮಾತನಾಡಿ, ಸಮಸ್ಯೆಗಳಿಲ್ಲದೆ ರೈತರು ಬದುಕಲು ಸಾಧ್ಯವಿಲ್ಲ. ಸಮಸ್ಯೆಯೊಂದಿಗೆ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ರೈತರು ಕೇವಲ ತೆಂಗು ಬೆಳೆಯಲ್ಲಿ ಮಾತ್ರ ಸಮಸ್ಯೆ ಅನುಭವಿಸುತ್ತಿಲ್ಲ. ಅವರಿಗೆ ಹೊಗೆ ಸೊಪ್ಪು ಮಾರಾಟದಲ್ಲಿಯೂ ಮೋಸವಾಗುತ್ತಿದೆ. ಜಿಲ್ಲೆಯಲ್ಲಿ 12ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯನ್ನು ಬೆಳೆಯಲಾಗುತ್ತಿದೆ. ಅದರಿಂದ ಸುಮಾರು 12 ಕೋಟಿ ತೆಂಗಿನಕಾಯಿ ಉತ್ಪಾದನೆ ಮಾಡಲಾಗುತ್ತಿದೆ. ರೈತರು ಅದಕ್ಕಾಗಿಯೇ ಮಾರುಕಟ್ಟೆಯನ್ನು ಮಾಡಿಕೊಂಡಿದ್ದಾರೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಮುಖ್ಯಮಂತ್ರಿಯವರಿಗೆ ಈ ಜಿಲ್ಲೆಯ ಬಗೆ ಹೆಚ್ಚಿನ ಕಾಳಜಿ ಇದೆ. ತೆಂಗು ಸಂಸ್ಕರಣ ಘಟಕದ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಇದಕ್ಕಾಗಿ ಸಹಾಯ ಮಾಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
————————
ಬಾಕ್ಸ್
ಶಾಸಕರಿಂದ ಎಳನೀರು ಮಾರುಕಟ್ಟೆ ಸ್ಥಾಪಿಸಲು ಮನವಿ: ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಉತ್ಪಾದನೆಯಾಗುತ್ತಿದ್ದು, ಹೊರ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಎಳನೀರನ್ನು ರಫ್ತು ಮಾಡಲಾಗುತ್ತಿದೆ. ಹೊರ ರಾಜ್ಯಗಳಿಗೆ ಹೋಗುತ್ತಿರುವ ಎಳನೀರನ್ನು ನಮ್ಮ ಜಿಲ್ಲೆಯಲ್ಲಿಯೇ ಮಾರಾಟ ಮಾಡಲು ಅನುಕೂಲವಾಗುವಂತೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ತೆರೆಯಲಾಗಿರುವ ಎಳನೀರು ಮಾರುಕಟ್ಟೆಯಂತೆ ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿ ಕೇಂದ್ರದಲ್ಲಿಯೂ ಎಳನೀರು ಮಾರುಕಟ್ಟೆಯನ್ನು ಸ್ಥಾಪಿಸಬೇಕು. ಇದರಿಂದ ತೆಂಗುಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹಾಗೂ ಸಿ.ಪುಟ್ಟರಂಗಶೆಟ್ಟಿ ಕೃಷಿ ಮಾರುಕಟ್ಟೆ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಮನವಿ ಮಾಡಿದರು.
………………….
ಕೋಟ್
ರೈತಸಂಘ ಎನ್ನುವುದು ಒಂದೆ ಸಂಘವಿದ್ದರೆ ರೈತರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸರ್ಕಾರದೊಡನೆ ಹೋರಾಟ ನಡೆಸಲು ಅನುಕೂಲವಾಗುತ್ತಿತ್ತು. ಆದರೆ ರೈತಸಂಘ ರಾಷ್ಟ್ರೀಯ ಪಕ್ಷಗಳಂತೆ ವಿಭಾಗಗಳಾಗಿವೆ. ವಿಭಾಗಳಾಗಿರುವ ರೈತ ಸಂಘಗಳು ಒಟ್ಟಾಗಿ ಸಂಘಟನೆಯಾಗಬೇಕು. ಆಗ ಮಾತ್ರ ರೈತರ ಪರ ಹೋರಾಟ ಮಾಡಲು ಮತ್ತು ಪ್ರಬಲವಾಗಲು ಸಾಧ್ಯ. ಸಂಘಗಳು ವಿಭಜನೆಯಾಗಿರುವುದರಿಂದ ಸರ್ಕಾರವೂ ಸಹ ಯಾವ ಸಂಘಟನೆಯೊಂದಿಗೆ ಮಾತನಾಡಬೇಕು ಎಂಬುದರ ಬಗ್ಗೆ ಗೊಂದಲಕ್ಕೆ ಸಿಲುಕಿಕೊಳ್ಳಲಿದೆ.
-ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ
29ಸಿಎಚ್ಎನ್.2: ಚಾಮರಾಜನಗರ ತಾಲೂಕಿನ ಮುಣಚನಹಳ್ಳಿಯಲ್ಲಿ ನಡೆದ ವಿಶ್ವ ತೆಂಗು ದಿನಾಚರಣೆ ಮತ್ತು ತೆಂಗು ಬೆಳೆಗಾರರ ರಾಜ್ಯಮಟ್ಟದ ಕಾರ್ಯಾಗಾರವನ್ನು ಕೃಷಿ ಮಾರುಕಟ್ಟೆ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಉದ್ಘಾಟಿಸಿದರು.