- ಜಾಗೃತಿ ಅಭಿಯಾನಕ್ಕೆ ಚಾಲನೆ
ಪ್ರತಿನಿಧಿ ವರದಿ ಮಂಡ್ಯ
ಋತುಸ್ರಾವ ಪ್ರತಿ ಹೆಣ್ಣಿನ ಬಾಳಲ್ಲೂ ಬರುವ ನೈಸರ್ಗಿಕ ಪ್ರಕ್ರಿಯೆ, ಮೌಢ್ಯತೆ ಬೇಡ ಎಂದು ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಹೇಳಿದರು.
ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ಸಂಘ(ಎಂಓಜಿಎಸ್) ಆಯೋಜಿಸಿದ್ದ ವಿಶ್ವ ಮುಟ್ಟಿನ ನೈರ್ಮಲ್ಯ ದಿನ ೨೦೨೪ ಪ್ರಯುಕ್ತ ಋತುಚಕ್ರ ನೈರ್ಮಲ್ಯ ಜಾಗೃತಿ ಜಾಗರಣಾ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಟ್ಟಿನ ದಿನಗಳಲ್ಲಿ ಹೆಣ್ಣುಮಕ್ಕಳು ತಮ್ಮ ನೈರ್ಮಲ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಚ್ಚರವಹಿಸಿ, ಮೌಡ್ಯತೆಯಿಂದ ದೂರವಿರಿ, ಇದು ಪ್ರಕೃತಿ ನೀಡಿರುವ ವರ ಎಂದು ಭಾವಿಸಿ ಎಂದು ನುಡಿದರು.
ಜಾಗೃತಿ ಅಭಿಯಾನವನ್ನು ೨೦೧೩-೨೦೧೪ರಲ್ಲಿ ಪ್ರಾರಂಭಿಸಲಾಯಿತು. ೨೦೨೩ ರ ಹೊತ್ತಿಗೆ, ಅಭಿಯಾನವು ೧,೦೦೦ ಪಾಲುದಾರ ಸಂಸ್ಥೆಗಳು, ವ್ಯಕ್ತಿಗಳು, ಪ್ರಭಾವಿಗಳು ಮತ್ತು ಮಾಧ್ಯಮಗಳೊಂದಿಗೆ ಜಾಗತಿಕ ಚಳುವಳಿಯಾಗಿ ಬೆಳೆದಿದೆ ಎಂದರು.
ಸ್ವ ಸ್ವಚ್ಛತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಹಲವು ಸೋಂಕುಗಳಿಂದ ರಕ್ಷಿಸಿಕೊಟ್ಟಳಲು ಸ್ಯಾನಿಟರಿ ಉತ್ಪನ್ನಗಳ ಬಳಕೆ ಉತ್ತಮ, ಇದರಿಂದ ಜಾಗೃತಿ ಮೂಡಿಸಲು ಮಿಮ್ಸ್ ಕೂಡ ಮುಂದಾಗಿದೆ, ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ, ಮೇ ೨೮ ರಂದು ವಿಶ್ವ ಮುಟ್ಟಿನ ನೈರ್ಮಲ್ಯ ದಿನ ಆಚರಿಸಿಕೊಂಡು ಬರಲಾಗುತ್ತಿದೆ, ಮಹಿಳೆಯರಲ್ಲಿ ಉಂಟಾಗುವ ಮುಟ್ಟಿನ ಬಗ್ಗೆ ಆರೋಗ್ಯದ ಅರಿವು ಹೆಚ್ಚಿಸಿ ಮತ್ತು ಮೂಢನಂಬಿಕೆಗಳಿಂದ ಹೊರತರುವ ಅಭಿಯಾನ ಇದಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾಸ್ಪತ್ರೆಯಿಂದ ಹೊರ ಜಾಗೃತಿ ಜಾಥಾವು ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಸಾಗಿ, ನಗರದ ಜೆಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಆರೋಗ್ಯ ರಕ್ಷಣೆ ಕುರಿತ ಲೋಗೋಗಳೊಂದಿಗೆ ಘೋಷಣೆ ಕೂಗಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವೈದ್ಯಕೀಯ ಅಧೀಕ್ಷಕ ಡಾ.ಜಿ.ಶಿವಕುಮಾರ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ಸಂಘದ ಅಧ್ಯಕ್ಷೆ ಡಾ. ವಸಂತಲಕ್ಷ್ಮೀ, ಕಾರ್ಯದರ್ಶಿ ಡಾ.ಶೀಲಾ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಎಚ್.ಓ.ಡಿ. ಡಾ.ಎಚ್.ಸಿ.ಸವಿತಾ, ವೈದ್ಯರಾದ ಡಾ.ಸಂಜಯ್, ಡಾ.ಮನೋಹರ್, ಡಾ.ಶಿಲ್ಪ, ಡಾ.ಕಾವ್ಯಾಶ್ರೀ, ಡಾ.ವಸುಮತಿರಾವ್, ಮಿಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಎಲ್.ಎಲ್.ಕ್ಲೇಮೆಂಟ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಸ್.ಎಂ.ಸುರೇಶ್ ಮತ್ತಿತರರಿದ್ದರು.