ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆಯಲ್ಲಿ ರಾಜಮನೆತನದ ಖಾಸಗಿ ದರ್ಬಾರ್ ನಡೆಯುವ ಹಿನ್ನೆಲೆ ರಾಜ ಪರಿವಾರದಲ್ಲಿ ಸಂಭ್ರಮ ಮನೆಮಾಡಿದೆ. ಜಗತ್ಪ್ರಸಿದ್ಧ ಅರಮನೆಯ ದರ್ಬಾರ್ ಹಾಲ್ ನಲ್ಲಿ ನಡೆಯುವ ಖಾಸಗಿ ದರ್ಬಾರ್ ಗೆ ಸಕಲ ಸಿದ್ಧತೆ ನಡೆದಿದ್ದು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ. ಯದುವೀರ್ ಒಡೆಯರ್ ಸಂಸದರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಖಾಸಗಿ ದರ್ಬಾರ್ ನಡೆಯುತ್ತಿದ್ದು, ವಿಶೇಷ ಮಹತ್ವ ಪಡೆದುಕೊಂಡಿದೆ. ಖಾಸಗಿ ದರ್ಬಾರ್ ವೇಳೆ ರಾಜಪೋಷಾಕಿನಲ್ಲಿ ಯದುವೀರ್ ಒಡೆಯರ್ ಮಿಂಚಲಿದ್ದಾರೆ. ಖಾಸಗಿ ದರ್ಬಾರ್ ಆರಂಭದ ಮೂಲಕ ಗತಕಾಲದ ವೈಭವ ಮರುಕಳಿಸಲಿದೆ.
ಇನ್ನು ಈ ಬಗ್ಗೆ ಪ್ರತಿನಿಧಿ ನ್ಯೂಸ್ ಗೆ ಪ್ರತಿಕ್ರಿಯಿಸಿರುವ ರಾಜವಂಶಸ್ಥ ಹಾಗೂ ಕೊಡಗು- ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದರಾದ ಮೇಲೆ ಖಾಸಗಿ ದರ್ಬಾರ್ ನಲ್ಲಿ ಪಾಲ್ಗೊಳ್ಳುವದರಲ್ಲಿ ವಿಶೇಷತೆ ಏನು ಇಲ್ಲ. ಪ್ರತಿವರ್ಷದಂತೆ ಈ ಬಾರಿಯೂ ದರ್ಬಾರ್ ನಡೆಯುತ್ತದೆ. 400ಕ್ಕೂ ಅಧಿಕ ವರ್ಷಗಳ ಹಿಂದಿನಿಂದಲೂ ಅರಮನೆಯಲ್ಲಿ ದಸರಾ ಕಾರ್ಯಕ್ರಮ ನಡೆಯುತ್ತದೆ. ಹೀಗಾಗಿ ವಿಶೇಷವಾಗಿ ಯಾವುದೇ ಸಿದ್ಧತೆ ಮಾಡಿಲ್ಲ ಎಂದಿದ್ದಾರೆ. ಚಾಮುಂಡೇಶ್ವರಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಹಾಗೂ ರಾಜಮನೆತನದ ನಡುವಿನ ಸಂಘರ್ಷದ ಕುರಿತು, ಪ್ರಕರಣ ನ್ಯಾಯಾಲಯದಲ್ಲಿದೆ ಈ ವಿಚಾರ ಖಾಸಗಿ ದರ್ಬಾರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಲ್ಲವೂ ರಾಜಮನೆತನದ ಸಂಪ್ರದಾಯಕ್ಕೆ ಅನುಸಾರವಾಗಿ ನಡೆಯುತ್ತೆ ಎಂದು ತಿಳಿಸಿದರು.
ಇನ್ನು ಜಂಬೂಸವಾರಿ ದಿನ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ಪಾಲ್ಗೊಳ್ಳುತ್ತೇನೆ. ಅರಮನೆಯ ಪೂಜಾ ಕೈಂಕರ್ಯಗಳು ಮುಗಿದಿದ್ದು, ಪುಷ್ಪಾರ್ಚನೆ ಮಾಡಲು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಈ ಬಾರಿಯೂ ಪಾಲ್ಗೊಳ್ಳುತ್ತೇನೆ ಎಂದರು.