– ಚಾಮುಂಡಿ ಬೆಟ್ಟ ಹತ್ತಿ ಪ್ರಾರ್ಥನೆ ಸಲ್ಲಿಸಿದ ಮಹಿಳೆಯರು
ಪ್ರತಿನಿಧಿ ವರದಿ ಮೈಸೂರು:
ಎನ್ ಡಿಎ ಅಭ್ಯರ್ಥಿ ಯದುವೀರ್ ಅವರ ಗೆಲುವಿಗಾಗಿ ಮೈಸೂರಿನ ಬಿಜೆಪಿ ಮಹಿಳಾ ಕಾರ್ಯಕರ್ತರು ಭಾನುವಾರ ಚಾಮುಂಡಿ ಬೆಟ್ಟವನ್ನು ಮೆಟ್ಟಿಲ ಮೂಲಕ ಹತ್ತಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ನಗರದ ವಿವಿಧ ಮಹಿಳಾ ಸಂಘ ಸಂಸ್ಥೆಗಳ ಸಾವಿರಾರು ಮಹಿಳೆಯರು ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಸಂಚಾಲಕಿ ಹೇಮಾ ನಂದೀಶ್ ನೇತೃತ್ವದಲ್ಲಿ ಚಾಮುಂಡೇಶ್ವರಿ ಪಾದದಿಂದ ಮೆಟ್ಟಲು ಮೂಲಕ ವರವ ಕೊಡೆ ಚಾಮುಂಡಿ ವರವ ಕೊಡೆ ಹಾಗೂ ನಮ್ಮ ನಡಿಗೆ ವಿಜಯದ ಕಡೆಗೆ ಘೋಷಣೆ ಕೂಗಿದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಬರಲಿ ಹಾಗೂ ಮೈಸೂರು ಲೋಕಸಭೆಯಲ್ಲಿ ಯದುವೀರ್ ಒಡೆಯರ್ ಅವರು ಪ್ರಚಂಡ ಗೆಲುವು ಸಾಧಿಸಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಹೇಮಾ ನಂದೀಶ್, ಮಹಿಳಾ ಸಬಲೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದ್ಯತೆ ನೀಡಿದ್ದು, ಸುಕನ್ಯಾ ಸಮೃದ್ಧಿ ಯೋಜನೆ, ಸೇರಿದಂತೆ ಹಲವು ಯೋಜನೆಗಳನ್ನು ಸ್ತ್ರೀ ಸಂಕುಲಕ್ಕಾಗಿ ಪರಿಚಯಿಸಿದೆ. ಇದರಿಂದ ಮಹಿಳಾ ಸಬಲೀಕರಣವಾಗಿದೆ , ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಮಹಿಳೆಯರನ್ನು ಸಾಕ್ಷರರನ್ನಾಗಿ ಮಾಡಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸದೃಢವಾಗಲಿ ಎಂಬ ಸದುದ್ದೇಶವಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಮೈಸೂರು ಮತ್ತು ಕೊಡಗು ಲೋಕಸಭೆಯಲ್ಲಿ ನಮ್ಮ ಯದುವೀರ್ ಒಡೆಯರ್ ಗೆಲ್ಲುವ ವಿಶ್ವಾಸ ಇದೆ, ಅತಿ ಹೆಚ್ಚು ಮಹಿಳಾ ಮತದಾರರು ಮೋದಿ ಸರ್ಕಾರವನ್ನು ಬೆಂಬಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಸ್.ಎ.ರಾಮದಾಸ್, ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹಾದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಎಚ್ ಜಿ ಗಿರಿಧರ್, ರಶ್ಮಿ, ಕಾವೇರಿ, ಸವಿತಾ ಘಾಟ್ಕೆ, ಉಮಾ ಜಾದವ್, ನಳಿನಿ, ಮಮತಾ ಚಂದ್ರಶೇಖರ್, ಇಂದ್ರ ಹಾಗೂ ಇನ್ನಿತರ ಮಹಿಳಾ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
==================