ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಮೈಸೂರು ರಾಜಮನೆತನದ ಖಾಸಗಿ ದರ್ಬಾರ್ ಇಂದಿನಿಂದ ಆರಂಭವಾಗಿದೆ. ಅಂಬಾವಿಲಾಸ ಅರಮನೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯ ಪ್ರಾರಂಭವಾಗಿದೆ. ರಾಜಮನೆತನದ ಸಂಪ್ರದಾಯದಂತೆ ಅರಮನೆಯಲ್ಲಿ ಎಲ್ಲಾ ಕಾರ್ಯಗಳು ನೆರವೇರುತ್ತಿದ್ದು, ಅಂತೆಯೇ ಇಂದು ಬೆಳಿಗ್ಗೆ ಮೊದಲಿಗೆ ಯದುವೀರ್ ಒಡೆಯರ್ ಗೆ ಎಣ್ಣೆಶಾಸ್ತ್ರ ನೆರವೇರಿಕೆಯಾಗಿದೆ. ನಂತರ ಬೆಳಿಗ್ಗೆ 5.45 ರಿಂದ 6.10 ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಣೆಕಾರ್ಯ ನಡೆದಿದೆ. ಬೆಳಿಗ್ಗೆ 7.45 ರಿಂದ 8.45 ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ಗೆ ಕಂಕಣಧಾರಣೆ ಮಾಡಲಾಗಿದ್ದು,ಬೆಳಿಗ್ಗೆ 10.30 ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುಗಳ ಆಗಮನವಾಗಿದೆ. ಬೆಳಿಗ್ಗೆ 11 ಕ್ಕೆ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇಗುಲದಿಂದ ಕಳಸ ಕೊಂಡೊಯ್ಯುವ ಕಾರ್ಯ ನೆರವೇರಿಕೆಯಾಗಿದ್ದು, ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ ಸಹ ನೆರವೇರಿತು. 11.35 ರಿಂದ 12.05 ರ ಒಳಗೆ ಖಾಸಗಿ ದರ್ಬಾರ್ ನಡೆಸಲಾಗಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನವನ್ನೇರಿ ದರ್ಬಾರ್ ಪ್ರಾರಂಭಿಸಿದ್ದಾರೆ. ಯದುವೀರ್ ದರ್ಬಾರ್ ನೋಡುಗರ ಕಣ್ಮನ ಸೆಳೆದಿದ್ದು, ರಾಜಪೋಷಾಕಿನಲ್ಲಿ ಯದುವೀರ್ ಒಡೆಯರ್ ಮಿಂಚಿದ್ದಾರೆ. ಸಂಸದರಾದ ನಂತರ ಯದುವೀರ್ ಅವರ ಮೊದಲ ಖಾಸಗಿ ದರ್ಬಾರ್ ಇದಾಗಿದ್ದು, ಅರಮನೆಯಲ್ಲಿಂದು ಗತಕಾಲದ ವೈಭವ ಮರುಕಳಿಸಿದೆ.
ರಾಜಪೋಷಾಕು ಧರಿಸಿ ದರ್ಬಾರ್ ಆರಂಭಿಸಿದ ಯದುವೀರ್ ಒಡೆಯರ್ ಸಿಂಹಾಸನ ಏರುತ್ತಿದ್ದಂತೆ ಮೈಸೂರು ಅರಮನೆಯ ವಂಧಿ ಮಾಧಗರಿಂದ ಬಹುಪರಾಕ್ ಹೇಳಲಾಯ್ತು. ಬಳಿಕ ಸಿಂಹಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆಯನ್ನ ಯದುವೀರ್ ಸಲ್ಲಿಸಿದ್ದಾರೆ. ಸಿಂಹಾಸನದ ಪಕ್ಕದಲ್ಲೇ ಕುಳಿತು ನವಗ್ರಹ ಪೂಜೆ ಕೈಂಕರ್ಯ ಬಳಿಕ ಸಿಂಹಾಸನಾರೂಢರಾದ ಯದುವೀರ್ ಒಡೆಯರ್ ನೋಡಿ ನೆರದಿದ್ದವರು ಖುಷಿ ಪಟ್ಟರು. ಇದೇ ವೇಳೆ ಪತ್ನಿ ತ್ರಿಷಿಕಾ ಕುಮಾರಿಯಿಂದ ಯದುವೀರ್ ಅವರ ಪಾದ ಪೂಜೆ ಮಾಡಲಾಯ್ತು. ಅರಮನೆ ದೇವಸ್ಥಾನಗಳು, ಚಾಮುಂಡಿಬೆಟ್ಟ, ಉತ್ತನಹಳ್ಳಿ ಬೆಟ್ಟ ಸೇರಿ ಹಲವು ದೇವಸ್ಥಾನಗಳಿಂದ ತಂದಿದ್ದ ಪ್ರಸಾದವನ್ನ ಇದೇ ವೇಳೆ ಯದುವೀರ್ ಸ್ವೀಕರಿಸಿದರು.
ಇನ್ನು ಇಂದಿನಿಂದ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭವಾಗಿರುವ ಹಿನ್ನೆಲೆ, ಮಧ್ಯಾಹ್ನ 2 ಗಂಟೆಯ ವರೆಗೂ ಅರಮನೆಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿದೆ. ಬೆಳಿಗ್ಗೆಯಿಂದಲೇ ಅರಮನೆಯಲ್ಲಿ ಪೂಜಾಕೈಂಕರ್ಯ ಪ್ರಾರಂಭವಾಗಲಿದ್ದು, ಅರಮನೆ ಆಡಳಿತ ಮಂಡಳಿಯಿಂದ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಮಧ್ಯಾಹ್ನ 2 ಗಂಟೆ ಬಳಿಕ ಅರಮನೆ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಲಿದೆ.