– ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ
– ಕಮಿಷನ್ ದಂಧೆ ಆರೋಪಕ್ಕೆ ಟಾಂಗ್ ನೀಡಿದ ಮಾಜಿ ಶಾಸಕ
ಪ್ರತಿನಿಧಿ ವರದಿ ಮೈಸೂರು
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಭರ್ಜರಿ ರಣತಂತ್ರ ರೂಪಿಸಿರುವ ಕಾಂಗ್ರೆಸ್ ನಾಯಕರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತಬೇಟೆ ನಡೆಸಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ. ದೇವೇಗೌಡರ ನಡುವಿನ ಮಾತಿನ ಸಮರದ ಬೆನ್ನಲ್ಲೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಎಂಟ್ರಿಕೊಟ್ಟು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ನಡೆಸಿದರು. ಶಾಸಕ ಜಿ.ಟಿ. ದೇವೇಗೌಡ ಅವರ ಸ್ವಕ್ಷೇತ್ರವಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಏನು ಕೆಲಸ ಮಾಡಿಲ್ಲ ಅಂತ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ವರುಣಾ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಎಂದು ಪಂಥಾಹ್ವಾನ ನೀಡಿದ್ದರು.
ಈ ಇಬ್ಬರ ಟಾಕ್ ವಾರ್ನಿಂದಾಗಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಹೀಗಾಗಿ ಪ್ರತಿಷ್ಠೆಯ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್, ಅಖಾಡಕ್ಕಿಳಿಯುವ ಮೂಲಕ ಮತಬೇಟೆ ಆರಂಭಿಸಿದೆ. ತಂದೆಯ ಬೆನ್ನಿಗೆ ನಿಂತಿರುವ ಯತೀಂದ್ರ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಹಲವು ಕಡೆಗಳಲ್ಲಿ ಶುಕ್ರವಾರ ಭರ್ಜರಿ ಪ್ರಚಾರ ನಡೆಸುವ ಮೂಲಕ ಸ್ಥಳೀಯ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಸಾಕ್ಷಿಯೊಂದಿಗೆ ಆರೋಪಿಸಿ:
ಶಾಸಕ ಜಿ.ಟಿ.ದೇವೇಗೌಡ ಅವರು ತಮ್ಮ ವಿರುದ್ಧ ಮಾಡಿರುವ ಕಮಿಷನ್ ದಂಧೆ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಇವು ಸಾಕ್ಷಿ, ಆಧಾರವಿಲ್ಲದ ಆರೋಪಗಳಾಗಿವೆ. ನಾನು ಕೂಡ ಅವರ ವಿರುದ್ಧ ಆರೋಪ ಮಾಡಬಹುದು. ಶಾಸಕರಾದಾಗಿನಿಂದ ಅವರು 80% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಸಹಕಾರಿ ಕ್ಷೇತ್ರದಲ್ಲಿ ಕೋಟ್ಯಾಂತರ ಅವ್ಯವಹಾರ ಮಾಡಿದ್ದಾರೆ ಅಂತ ಜನ ಹೇಳುತ್ತಾರೆ. ಆದರೆ ಅದಕ್ಕೆಲ್ಲ ಸಾಕ್ಷ್ಯಾಧಾರ ಬೇಕಿದ್ದು, ಸುಮ್ಮನೆ ಆರೋಪ ಮಾಡಬಾರದು ಎಂದರು.
ಅಲ್ಲದೇ ಜಿ.ಟಿ. ದೇವೇಗೌಡರಿಗೆ ತಂದೆಯವರ ವಿರುದ್ಧ ನೇರವಾಗಿ ಆರೋಪ ಮಾಡಲು ಆಗುತ್ತಿಲ್ಲ. ನಾನು ರಾಜಕೀಯದಲ್ಲಿರುವ ಕಾರಣ ಆರೋಪ ಮಾಡುತ್ತಿದ್ದಾರೆ. ನನ್ನ ವಿರುದ್ಧ ಆರೋಪ ಮಾಡಿದರೆ ಪರೋಕ್ಷವಾಗಿ ತಂದೆಯ ಮೇಲೆ ಮಾಡಿದಂತಾಗಲಿದೆ ಎಂಬುದು ಅವರ ಲೆಕ್ಕಾಚಾರ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಪಕ್ಷದವರೇ ವಿಜಯೇಂದ್ರ ಅವರ ವಿರುದ್ಧ ಮಾತನಾಡಿದ್ದರು. ಹೀಗಾಗಿ ವರ್ಗಾವಣೆ ದಂಧೆ ಆರೋಪಗಳಿಗೆಲ್ಲಾ ನಾನು ಈಗಾಗಲೇ ಉತ್ತರಿಸಿದ್ದು, ಇವೆಲ್ಲವೂ ಹುರುಳಿದ ಆರೋಪಗಳಾಗಿವೆ ಎಂದು ಟೀಕಿಸಿದರು.
====================
ಬಾಕ್ಸ್
ಎಂ.ಲಕ್ಷ್ಮಣ್ ಬಿರುಸಿನ ಮತಯಾಚನೆ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್, ಶುಕ್ರವಾರ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ನಗರದ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದ ಅವರು, ಸ್ಥಳೀಯ ವ್ಯಾಪಾರಿಗಳಿಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಣಾಳಿಕೆ ನೀಡುವ ಮೂಲಕ ಮತ ಯಾಚನೆ ಮಾಡಿದರು. ಅಲ್ಲದೇ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ವಿನಂತಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಮತ್ತಿತರರು ಇದ್ದರು. ಬಳಿಕ ಸಂಜೆ ನಗರದ ಚಾಮರಾಜ ಕ್ಷೇತ್ರ ವ್ಯಾಪ್ತಿಯ ವಿವಿಧ ವಾರ್ಡ್ಗಳ ವ್ಯಾಪ್ತಿಯಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರ ಬೆಂಬಲದೊಂದಿಗೆ ಮತ ಪ್ರಚಾರ ನಡೆಸಿದರು. ಅಲ್ಲದೇ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನಗರದ ರೈಲ್ವೆ ನಿಲ್ದಾಣ ವೃತ್ತದಲ್ಲಿರುವ ಬಾಬುಜೀ ಅವರ ಪ್ರತಿಮೆಗೆ ಎಂ.ಲಕ್ಷ್ಮಣ್ ಅವರು ಮಾಲಾರ್ಪಣೆ ಮಾಡಿದರು.
====================