ಸಿಎಂ ಸಿದ್ದರಾಮಯ್ಯ ಅವರನ್ನು ದೇವರಂತೆ ನೋಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿರುವುದಕ್ಕೆ ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತಿರುಗೇಟು ನೀಡಿದ್ದಾರೆ. ಸತೀಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಆಕ್ರೋಶ ವ್ಯಕ್ತಡಿಸಿರುವ ಯತ್ನಾಳ್, ಇಂಥ ಊಸರವಳ್ಳಿಯಂತೆ ಬಣ್ಣ ಬದಲಿಸುವ ರಾಜಕಾರಣಿಗಳಿಂದಲೇ ಉತ್ತರ ಕರ್ನಾಟಕ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಟೀಕಿಸಿದ್ದಾರೆ.
‘ವ್ಯಕ್ತಿ ಪೂಜೆ ಮಾಡೋದಿಲ್ಲ, ದೇವರಲ್ಲಿ ನಂಬಿಕೆಯಿಲ್ಲ, ಹಿಂದೂ ಪೂಜೆಗಳಲ್ಲಿ, ಆಚರಣೆಗಳಲ್ಲಿ ನಂಬಿಕೆ ಇಲ್ಲದವರು ರಾಜಕೀಯ ಅಸ್ತಿತ್ವಕ್ಕಾಗಿ ಸಿದ್ದರಾಮಯ್ಯನವರನ್ನು ತಮ್ಮ ‘ಮನೆ ದೇವ’ರಾಗಿ ಮಾಡಿಕೊಂಡಿರುವ ನೀವು (ಸತೀಶ್ ಜಾರಕಿಹೊಳಿ ಉದ್ದೇಶಿಸಿ) ಎಂತಹ ಅವಕಾಶವಾದಿಗಳು ಎಂದು ಜನತೆಗೆ ಗೊತ್ತಾಗುತ್ತಿದೆ. ಸಂದರ್ಭಕ್ಕೆ ತಕ್ಕಂತೆ ಊಸರವಳ್ಳಿಯ ರೀತಿ ಬಣ್ಣ ಬದಲಿಸುವ ರಾಜಕಾರಣಿಗಳಿಂದಲೇ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ಮರೀಚಿಕೆ ಆಗಿರುವುದು’ ಎಂದು ಯತ್ನಾಳ್ ಉಲ್ಲೇಖಿಸಿದ್ದಾರೆ.
ಇತ್ತೀಚೆಗಷ್ಟೇ ಆಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಆಹ್ವಾನದ ವಿಚಾರವಾಗಿ ಮಾತನಾಡಿದ್ದ ಮಾಜಿ ಸಚಿವ ಹೆಚ್ ಆಂಜನೇಯ, ಸಿಎಂ ಸಿದ್ದರಾಮಯ್ಯ ಅವರನ್ನು ರಾಮನಿಗೆ ಹೋಲಿಸಿದ್ದರು. ಸಿದ್ದರಾಮಯ್ಯ ಅವರೇ ‘ರಾಮ’ ಎಂದು ಹೇಳಿದ್ದರು. ಇದಕ್ಕೆ ಕೂಡ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಇದೀಗ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರನ್ನು ದೇವರು ಎಂದಿದ್ದಾರೆ.