ಬರದಿಂದ ರಾಜ್ಯ ತತ್ತರಿಸಿದೆ, 37 ಸಾವಿರ ಕೋಟಿ ರು. ಕೃಷಿ ಹಾನಿಯಾಗಿದೆ. ತಕ್ಷಣವೇ 3 ಸಾವಿರ ಕೋಟಿ ರು. ನೆರವು ನೀಡುವಂತೆ ಕೇಂದ್ರಕ್ಕೆ ನಾವು (ರಾಜ್ಯ ಸರ್ಕಾರ) ಕೋರಿದ್ದರೂ ಕೇಂದ್ರ ಸ್ಪಂದಿಸುತ್ತಿಲ್ಲ ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳ, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಖಾತೆ ಸಚಿವರಾದ ಎಚ್.ಕೆ. ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಐತಿಹಾಸಿ ಪ್ರದೇಶದ ವೀಕ್ಷಣೆಗೆಂದು ಬುಧವಾರ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಶಿರವಾಳಕ್ಕೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಜಿ ಸಿಎಂ ಬಿಎಸ್ವೈ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬರದಿಂದ ತತ್ತರಿಸಿದ ನಮ್ಮ ರಾಜ್ಯಕ್ಕೆ ತಕ್ಷಣಕ್ಕೆ 3 ಸಾವಿರ ಕೋಟಿ ರು. ತಕ್ಷಣ ನೀಡುವಂತೆ ಕೇಂದ್ರಕ್ಕೆ ಕೋರಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲೇ ಬೀಡು ಬಿಟ್ಟು ನಾಲ್ಕು ಬಾರಿ ಪ್ರಧಾನಿ ಭೇಟಿಗೆ ಅವಕಾಶ ಕೋರಿದರೂ ಸಿಗುತ್ತಿಲ್ಲ, ಸಚಿವ ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ ತಂಡವು ಪ್ರಧಾನಿ ಮೋದಿ ಸೇರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೃಷಿ ಮಂತ್ರಿ ಭೇಟಿಗೆ ಪ್ರಯತ್ನಿಸಿದರೂ ಭೇಟಿ ಆಗಲಿಲ್ಲ ಎಂದು ಸಚಿವ ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.